ಕನ್ನಡಪ್ರಭ ವಾರ್ತೆ ವಿರಾಜಪೇಟೆ
ವಿರಾಜಪೇಟೆ ಮಗ್ಗುಲ ಗ್ರಾಮದಲ್ಲಿರುವ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ವತಿಯಿಂದ ಆಯೋಜಿಸಲಾದ ಸ್ಪೋರ್ಟ್ಸ್ ಸ್ಪೆಕ್ಟ್ರಾ 2026 ಕಾರ್ಯಕ್ರಮವು ನಾಂಗಾಲ ಗ್ರಾಮದಲ್ಲಿರುವ ಎಲ್. ಎಸ್. ಎ. ಯ ನೂತನ ಕ್ಯಾಂಪಸ್ ನಲ್ಲಿ ಜರುಗಿತು.
ಕ್ರೀಡಾ ದಿನಾಚರಣೆಗೆ ಮುಖ್ಯ ಅತಿಥಿಯಾಗಿ ಆಗಮಿಸಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಿವೈಎಸ್ಪಿ ಮಹೇಶ್ ಕುಮಾರ್, ಪ್ರಸ್ತುತ ನಾವು ಪ್ರತಿಷ್ಠೆಯ ಶಿಕ್ಷಣ ವ್ಯವಸ್ಥೆಯಲ್ಲಿದ್ದೇವೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಕೇವಲ ಪಠ್ಯದ ಶಿಕ್ಷಣವನ್ನು ನೀಡಿದರೆ ಸಾಲದು. ಅದರೊಂದಿಗೆ ಸಾತ್ವಿಕ ಶಿಕ್ಷಣವನ್ನು ನೀಡುವಂತಹ ಜವಾಬ್ದಾರಿಯು ಪೋಷಕರ ಮೇಲಿದೆ. ನಮ್ಮ ಸಮಾಜದ ಮೂಲ, ಸಂಪ್ರದಾಯ, ಸಂಸ್ಕೃತಿ, ಸಾಮಾಜಿಕ ಜವಾಬ್ದಾರಿ, ಇತರರಿಗೆ ತೊಂದರೆಯನ್ನು ನೀಡದಿರುವಂತಹ ರೀತಿ ಬದುಕುವುದನ್ನು ಮಕ್ಕಳಿಗೆ ಕಲಿಸಬೇಕು ಎಂದರು.ಕಾರ್ಯಕ್ರಮಕ್ಕೆ ಆಗಮಿಸಿದ ಮತ್ತೋರ್ವ ಅತಿಥಿಗಳಾದ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೂಕಚಂಡ ಪ್ರಸನ್ನ ಸುಬ್ಬಯ್ಯ ಮಾತನಾಡಿ, ಲಿಟಲ್ ಸ್ಕಾಲರ್ಸ್ ಅಕಾಡೆಮಿಯು ವಿದ್ಯಾರ್ಥಿ ಗಳಿಗೆ ಕೇವಲ ಶಿಕ್ಷಣ ವನ್ನು ಮಾತ್ರ ನೀಡುತ್ತಿಲ್ಲ . ಅದರೊಂದಿಗೆ ಜೀವನ ಕೌಶಲ್ಯಗಳನ್ನು ಕಲಿಸುವತ್ತ ಗಮನ ಹರಿಸುತ್ತಿರುವುದು ಪ್ರಶಂಸನೀಯ. ಶಿಕ್ಷಣ ಸಂಸ್ಥೆಯು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡು ಮಕ್ಕಳಲ್ಲಿ ಸಮಾಜ ಸೇವೆಯ ಮನೋಭಾವವನ್ನು ಬಾಲ್ಯದಿಂದಲೇ ಬೆಳೆಸುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದರು.
ಈ ಸಂದರ್ಭ ವೇದಿಕೆಯಲ್ಲಿ ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಪಟ್ಟಡ ಸತೀಶ್ , ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರಾದ ಪೂಜಾ ಸಜೇಶ್ , ಸಜೇಶ್ ಭರತನ್ , ಕಾರ್ಯದರ್ಶಿ ಪ್ರತಿಮಾ, ಮುಖ್ಯ ಶಿಕ್ಷಕರಾದ ಮೀರ ಪೂಣಚ್ಚ ಉಪಸ್ಥಿತರಿದ್ದರು.ವೇದಿಕೆ ಕಾರ್ಯಕ್ರಮದ ನಂತರ ತರಗತಿವಾರು ವಿದ್ಯಾರ್ಥಿಗಳಿಗೆ ನಡೆಸಲಾಗಿದ್ದ ಕ್ರೀಡಾ ಸ್ಪರ್ಧೆಗಳ ಫೈನಲ್ ಪಂದ್ಯಾವಳಿಯನ್ನು ನಡೆಸಲಾಯಿತು. ಪೋಷಕರು ಹಾಗೂ ಶಿಕ್ಷಕರ ತಂಡಗಳ ನಡುವೆ ಥ್ರೋ ಬಾಲ್ ಸೌಹಾರ್ದ ಪಂದ್ಯ ನಡೆಯಿತು. ಕರಾಟೆ ವಿದ್ಯಾರ್ಥಿಗಳು ಕೆಲವು ಸಾಹಸ ಜಲಕ್ ಪ್ರದರ್ಶಿಸಿದರು.
ವಿಶೇಷ ಆಸಕ್ತಿ ಇರಬೇಕು:ಕ್ರೀಡಾ ದಿನಾಚರಣೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ರವರು ಕ್ರೀಡಾ ಪಟುಗಳಿಗೆ ಶುಭಕೋರಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ವಿದ್ಯಾ ಸಂಸ್ಥೆಗಳನ್ನು ಆರಂಭಿಸಲು ವಿಶೇಷವಾದ ಆಸಕ್ತಿ ಇರಬೇಕು. ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಶಿಕ್ಷಣವನ್ನು ನೀಡುವುದು ಪುಣ್ಯದ ಕೆಲಸ. ವಿದ್ಯಾರ್ಥಿಗಳಲ್ಲಿ ಕ್ರೀಡೆ ಮತ್ತು ಶಿಸ್ತು ಬಹಳ ಅವಶ್ಯಕವಾಗಿದ್ದು ಕೇವಲ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲ ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದರೊಂದಿಗೆ ದೇಶದ ಭವಿಷ್ಯವನ್ನು ರೂಪಿಸಲು ಕ್ರೀಡೆ, ಶಿಸ್ತು ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದರಲ್ಲದೆ ಶಾಲೆಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಆಗುವುದರಿಂದ ಒಳ್ಳೆಯ ನಾಗರಿಕರನ್ನು ಸೃಷ್ಟಿಸುವಂತಹ ಮಹತ್ತರ ಜವಾಬ್ದಾರಿ ಶಾಲೆಯಿಂದಲೇ ಆರಂಭವಾಗಬೇಕು ಎಂದರು.
ಮೈಸೂರಿನ ಸೂರಜ್ ಪವರ್ ಬ್ಯಾಂಡ್ ವತಿಯಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.ಸರ್ವತೋಮುಖ ಬೆಳವಣಿಗೆಗೆ ಸಹಕರಿಸಬೇಕು:
ಸ್ಪೋರ್ಟ್ಸ್ ಸ್ಪೆಕ್ಟ್ರಾದ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಆಗಮಿಸಿದ ದಕ್ಷಿಣ ಭಾರತದ ಚಲನ ಚಿತ್ರ ನಟಿ ಶ್ವೇತಾ ಶ್ರೀವಾತ್ಸವ್ ಮಾತನಾಡಿ, ಪೋಷಕರು ತಮ್ಮ ಮಕ್ಕಳ ಆಸಕ್ತ ಕ್ಷೇತ್ರವನ್ನು ತಿಳಿದುಕೊಂಡು ಆ ಕ್ಷೇತ್ರದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಬೇಕು. ಕ್ರೀಡೆ, ಸಾಂಸ್ಕೃತಿಕ, ಕಲೆ, ಸಮಾಜ ಸೇವೆ ಯಾವುದರಲ್ಲಿ ಮಕ್ಕಳಿಗೆ ಆಸಕ್ತಿ ಇದೆಯೋ ಆ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ನಿರ್ಧರಿಸುವ ಹಾದಿಯನ್ನು ಕಂಡುಕೊಳ್ಳಲು ಸದಾ ಪೋಷಕರು ಹಾಗೂ ಶಿಕ್ಷಕರು ಮಾರ್ಗದರ್ಶನ ಮಾಡಬೇಕು. ಯಾವುದೇ ಸ್ಪರ್ಧೆ ಆದರು ಸಹ ಬಹುಮಾನ ದೊರೆಯದಿದ್ದರೂ ಅದರಲ್ಲಿ ಪಾಲ್ಗೊಳ್ಳುವಿಕೆ ಬಹಳ ಮುಖ್ಯ. ಇದರೊಂದಿಗೆ ಬೇರೆಯವರ ಯಶಸ್ಸನ್ನು ಕಂಡು ಸಂಭ್ರಮಿಸುವ ಉತ್ತಮ ಗುಣವನ್ನು ಬಾಲ್ಯದಿಂದಲೇ ಮಕ್ಕಳು ರೂಢಿಸಿಕೊಳ್ಳಬೇಕೆಂದರು.ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿ ಗಳಿಗೆ ತರಗತಿವಾರು ನಡೆಸಲಾದ ವಿವಿಧ ಕ್ರೀಡಾ ಚಟುವಟಿಕೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರಾದ ಪೂಜಾ ಸಜೇಶ್, ಸಜೇಶ್ ಭರತನ್, ಕಾರ್ಯದರ್ಶಿ ಪ್ರತಿಮಾ , ಮುಖ್ಯ ಶಿಕ್ಷಕರಾದ ಮೀರ ಪೂಣಚ್ಚ, ಪೋಷಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.