ಕನ್ನಡಪ್ರಭ ವಾರ್ತೆ ಇಂಡಿ
ಶಿಕ್ಷಣದಿಂದ ಹೊಸ ಬದುಕು ಕಟ್ಟಿಕೊಳ್ಳಲು ಸಾಧ್ಯವಿದ. ಶಿಕ್ಷಣದ ಜೊತೆ ಸಂಸ್ಕಾರವೂ ಮುಖ್ಯವಾಗಿದ್ದು, ಶಿಕ್ಷಕರು ಪಾಠ ಬೋಧನೆಯ ಜೊತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿಕೊಡಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ತಾಲೂಕಿನ ಬರಗುಡಿ ಗ್ರಾಮದ ಹಜರತ ನಾಸೀರಜಂಗಸಾಹೇಬ ದರ್ಗಾ ಹಾಗೂ ಶೈಕ್ಷಣಿಕ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ನೂತನ ಕೋಣೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಸಮಾಜಮುಖಿ ಕಾರ್ಯಗಳಿಂದ ವಿಶ್ವಮಾನವರಾಗಿ ಬದುಕಬೇಕು. ಎರಡು ವರ್ಷದಲ್ಲಿಯೇ ಈ ಶಿಕ್ಷಣ ಸಂಸ್ಥೆ ಮೂಲಭೂತ ಸೌಕರ್ಯಗಳನ್ನು ಒಳಗೊಂಡು ನೂತನ ಕೋಣೆಗಳನ್ನು ನಿರ್ಮಿಸಿ ಗ್ರಾಮೀಣ ಪ್ರದೇಶದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.
ಸಂತರು, ಶರಣರು, ಸೂಫಿಗಳು ಜನರ ಕಲ್ಯಾಣಕ್ಕಾಗಿ ಬದುಕಿದವರು. ಶೈಕ್ಷಣಿಕ ಬೆಳವಣಿಗೆಯಲ್ಲಿ ಮಠಮಾನ್ಯಗಳ ಕೊಡುಗೆ ಅಪಾರವಾಗಿದೆ. ಗಡಿಭಾಗದ ಗ್ರಾಮೀಣ ಪ್ರದೇಶದಲ್ಲಿ ದರ್ಗಾದ ಜೊತೆ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿ ಗ್ರಾಮೀಣ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಿಕ್ಷಣ ನೀಡುತ್ತಿರುವುದು ಮಾದರಿ ಕೆಲಸ. ಇದು ಪರಿವರ್ತನೆಯ ಅಭಿವೃದ್ದಿ ಕಾರ್ಯ ಎಂದು ಅಭಿಪ್ರಾಯಪಟ್ಟರು.ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಬೇಕು ಅದರ ಜೊತೆಗೆ ಇತರೆ ಭಾಷೆಯನ್ನು ಪ್ರೋತ್ಸಾಹಿಸಬೇಕು. ಕನ್ನಡ ಭಾಷೆಯನ್ನು ಹೃದಯಲ್ಲಿ ಇಟ್ಟುಕೊಂಡು ಇನ್ನೊಂದು ಭಾಷೆಯನ್ನು ಗೌರವಿಸಬೇಕು, ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು. ನಿತ್ಯ ಬದುಕಿನಲ್ಲಿ ಹಲವು ಬಾರಿ ಇಂಗ್ಲೀಷ್ ಪದಗಳನ್ನು ಬಳಕೆ ಮಾಡುತ್ತೇವೆ. ಅಷ್ಟು ಪ್ರಭಾವ ಇಂಗ್ಲೀಷ್ ನಮ್ಮ ಮೇಲೆ ಬೀರಿದೆ. ಇಂಗ್ಲೀಷ ಕಲಿಕೆಯ ಜೊತೆ ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ವಿಜಯಪುರ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಬಂಥನ ಸಂಗನಬಸವ ಮಹಾಶೀವಯೋಗಿಗಳ ಕಾರ್ಯ ಅನನ್ಯ. ಮಹಾಶಿವಯೋಗಿಗಳು ಶಿಕ್ಷಣ ಸಂಸ್ಥೆಗಳನ್ನು ತೆರೆಯದಿದ್ದರೆ ಇಂದು ವಿಜಯಪುರ ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿಯಬೇಕಾಗುತ್ತಿತ್ತು. ಸುತ್ತೂರು ಶ್ರೀಗಳು, ಚಿತ್ರದುರ್ಗದ ಮಠ ಸೇರಿದಂತೆ ಹಲವು ಮಠಗಳು ಶಿಕ್ಷಣಕ್ಕೆ ಒತ್ತು ನೀಡಿ, ಜ್ಞಾನದ ಬೆಳಕು ನೀಡಿವೆ ಎಂದು ಹೇಳಿದರು.
ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ಸರ್ಕಾರಗಳು ಮಾಡದ ಕೆಲಸಗಳನ್ನು ಮಠ, ಮಾನ್ಯಗಳು ಮಾಡುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವುದು ಸಂತಸದ ಸಂಗತಿ. ಸರ್ಕಾರದ ಅನುದಾನ ಪಡೆದುಕೊಳ್ಳದೆ, ಯಾರಿಂದಲೂ ದೇಣಿಗೆ ಪಡೆಯದೇ ಶಾಲಾ ಕೋಣೆಗಳನ್ನು ನಿರ್ಮಿಸಿದ್ದು ಇತರರಿಗೆ ಮಾದರಿ ಕಾರ್ಯ ಎಂದು ಶ್ಲಾಘಿಸಿದರು.ಡಾ.ವೃಷಭಲಿಂಗ ಮಹಾಶಿವಯೋಗಿಗಳು ಆಶೀರ್ವಚನ ನೀಡಿ, ಬಂಥನಾಳದ ಸಂಗನ ಬಸವಮಹಾಶಿವಯೋಗಿಗಳು ಜೋಳಿಗೆ ಹಿಡಿದು ಶಿಕ್ಷಣ ಸಂಸ್ಥೆಗಳು ಕಟ್ಟಿದ್ದರಿಂದ ಇಂದು ವಿಜಯಪುರ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿ ಉಂಟಾಗಿದೆ. ಸಂಗನ ಬಸವಮಹಾಶಿವಯೋಗಿಗಳ ಜೀವನ ಚರಿತ್ರೆ, ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ ಇತಿಹಾಸ ಮುಂದಿನ ಪೀಳಿಗೆಗೆ ತಿಳಿಯಬೇಕಾದರೆ ಸಂಗನ ಬಸವ ಮಹಾಶಿವಯೋಗಿಗಳ ಜೀವನ ಚರಿತ್ರೆ ಪಠ್ಯದಲ್ಲಿ ಅಳವಡಿಸುವ ಕಾರ್ಯವನ್ನು ಸರ್ಕಾರ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿದ ಕಾರ್ಯ ಉತ್ತಮವಾಗಿದೆ ಎಂದು ಹೇಳಿದರು.
ಮಹಿಬೂಬಸಾಹೇಬ ಇಂಗಳಗಿ ಸಾನಿಧ್ಯ ವಹಿಸಿದ್ದರು.ಸಂಸ್ಥೆಯ ಉಪಾಧ್ಯಕ್ಷ ವೆಂಕಟೇಶ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ ಪ್ಯಾಟಿ, ಹಸನ ಶೇಖ್, ಇಲಿಯಾಸ್ ಬೊರಾಮಣಿ, ಕಲ್ಲನಗೌಡ ಬಿರಾದಾರ, ಜಾವೀದ ಮೋಮಿನ, ಡಾ.ಮಂಜುನಾಥ ಕೊಟೆಣ್ಣವರ, ಈರಣ್ಣಾ ಆಶಾಪೂರ, ಟಿ.ಎಸ್.ಆಲಗೂರ, ಅಬ್ದುಲ್ರಹೀಮ ಮುಜಾವರ, ಜಯಪ್ರಕಾಶ ಸೊಡ್ಡಗಿ, ಹುಸೇನಸಾಬ ಪಟೇಲ, ಧನರಾಜ ಮುಜಗೊಂಡ ಮೊದಲಾದವರು ವೇದಿಕೆ ಮೇಲೆ ಇದ್ದರು.
ಹೂವಣ್ಣ ಡೆಂಗಿ, ಶೇಖರ ಶಿವಶರಣ, ಶಿವಾನಂದ ಬ್ಯಾಗೇಳ್ಳಿ, ಅಶೋಕ ಬಡಿಗೇರ, ಎಂ.ಡಿ.ಶೇಖ, ಈರಣ್ಣ ಪತ್ತಾರ, ರಾಜಕುಮಾರ ವಾಲಿಕಾರ, ಸಿದ್ದಯ್ಯ ಮಠ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.ಕೋಟ್ಸಂಗನ ಬಸವ ಮಹಾಶಿವಯೋಗಿಗಳ ಜೀವನ ಚರಿತ್ರೆ ಸರ್ಕಾರ ಪಠ್ಯದಲ್ಲಿ ಅಳವಡಿಸಬೇಕು. ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತರಬೇಕು. ಸಂಗನ ಬಸವ ಮಹಾಶಿವಯೋಗಿಗಳು ಎಂದೂ ಬತ್ತದ, ಆರದ ಜ್ಞಾನದ ಬೆಳಕನ್ನು ಹಚ್ಚಿ ಹೋಗಿದ್ದಾರೆ. ದಕ್ಷಣ ಕರ್ನಾಟಕದ ಮಠಮಾನ್ಯಗಳಿಗೆ ಇರುವಷ್ಟು ಗೌರವ ಉತ್ತರ ಕರ್ನಾಟಕದ ಮಠಮಾನ್ಯಗಳಿಗೆ ದೊರೆಯದಿರುವುದು ನೋವಿನ ಸಂಗತಿ.ಡಾ.ವೃಷಭಲಿಂಗ ಮಹಾಶಿವಯೋಗಿಗಳು, ಬಂಥನಾಳ