ಬಸ್ತಿಮಕ್ಕಿಯಲ್ಲಿ ಹವ್ಯಕ ಬ್ರಾಹ್ಮಣರ ನೌಕರರ ಸಂಘದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ
ಮುರುಡೇಶ್ವರದ ಬಸ್ತಿಮಕ್ಕಿಯ ಹವ್ಯಕ ಸಭಾಭವನದಲ್ಲಿ ಹವ್ಯಕ ಬ್ರಾಹ್ಮಣರ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಏರ್ಪಡಿಸಲಾದ ವಾರ್ಷಿಕ ಕಾರ್ಯಕ್ರಮ ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮವನ್ನು ವೇ.ಮೂ.ಕೃಷ್ಣಾನಂದ ಭಟ್ಟ ಬಲ್ಸೆ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಪ್ರತಿಯೊಬ್ಬರ ಬದುಕೂ ಕೂಡಾ ಸಮಾಜಕ್ಕೆ ಪೂರಕವಾಗಿ ಬದುಕುವಂತಾಗಬೇಕು. ನಾವು ನಮಗಾಗಿ ಅಲ್ಲ ಸಮಾಜಕ್ಕಾಗಿ ಬದುಕು ಸಾಗಿಸಿದಾಗ ಮಾತ್ರ ಅದು ಸಾರ್ಥಕ ಬದುಕಾಗುತ್ತದೆ. ಸಮಾಜದಲ್ಲಿ ಯಾರೇ ಕಷ್ಟದಲ್ಲಿದ್ದರೂ ಕೂಡಾ ತಮ್ಮ ಕೈಲಾದ ಸಹಾಯ ಮಾಡುವುದು, ಕನಿಷ್ಠ ಅವರಿಗೊಂದು ಸಾಂತ್ವನದ ಮಾತನಾಡುವುದು ಮಾಡಬೇಕು. ಪ್ರತಿಭಾ ಪುರಸ್ಕಾರಕ್ಕೆ ಭಾಜನರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಅವರು, ಯಾರು ಎಲ್ಲೇ ಇರಲಿ ತಮ್ಮ ಹುಟ್ಟೂರಿಗೊಂದು ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಹವ್ಯಕ ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ವಿ. ಹೆಗಡೆ ಮಾತನಾಡಿ, ವಿದ್ಯಾರ್ಥಿಗಳು ಉದ್ಯೋಗ ಅರಸುವವರಾಗದೆ ಉದ್ಯೋಗದಾತರಾಗುವ ಕನಸು ಕಾಣಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನ್ಯೂ ಇಂಗ್ಲಿಷ್ ಶಾಲೆಯ ಮುಖ್ಯಾಧ್ಯಾಪಕ ಗಣಪತಿ ಶಿರೂರು ಸ್ವಾಗತಿಸಿದರು. ವಿದ್ಯಾ ಭಟ್ಟ ಪ್ರಾರ್ಥಿಸಿದರು. ಶಿಕ್ಷಕ ಐ.ವಿ. ಹೆಗಡೆ ಹಾಗೂ ಕೆ.ಬಿ. ಹೆಗಡೆ ನಿರ್ವಹಿಸಿದರು. ಗಣೇಶ ಯಾಜಿ ಅತಿಥಿಗಳ ಪರಿಚಯ ಮಾಡಿದರು. ನಿವೃತ್ತ ಶಿಕ್ಷಕ ಜಿ.ವಿ. ಯಾಜಿ ವಂದಿಸಿದರು. ಇದಕ್ಕೂ ಪೂರ್ವ ಶ್ರೀಪಾದ ಭಟ್ಟ ಕಡತೋಕ ಅವರು ನಡೆಸಿಕೊಟ್ಟ ಗೀತ ರಾಮಾಯಣ ಎಲ್ಲರ ಗಮನ ಸೆಳೆಯಿತು. ಜಿ.ಎಸ್. ಹೆಗಡೆ ಆರ್ಥಧಾರಿಗಳಾಗಿ ಸಹರಿಸಿದರು. ಶೇಷಾದ್ರಿ ಅಯ್ಯಂಗಾರ್ ತಬಲಾ ಸಾಥ್ ನೀಡಿದರು. ಗಣಪತಿ ಶಿರೂರು ತಾಳದಲ್ಲಿ ಸಹಕರಿಸಿದರು.