ಧರ್ಮಸ್ಥಳ ಸಂಸ್ಥೆ ಬಡಜನರಿಗೆ ಕಿರು ಸಾಲ ನೀಡುವ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಶಾಲೆಗಳ ಅಭಿವೃದ್ಧಿ, ವಿದ್ಯಾರ್ಥಿ ವೇತನ, ಅಂತರ್ಜಲ ಹೆಚ್ಚಿಸಲು ಕೆರೆ ಅಭಿವೃದ್ಧಿ, ವೃದ್ದರಿಗೆ ಮಾಶಾಸನ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸುವ ಉತ್ತಮ ಕಾರ್ಯಗಳನ್ನು ಸಂಸ್ಥೆ ಮಾಡುತ್ತಿದೆ.
ಕನ್ನಡಪ್ರಭ ವಾರ್ತೆ ಹಲಗೂರು
ಯಾವುದೇ ಶಿಫಾರಸ್ಸು ಮತ್ತು ಲಂಚ ಪಡೆಯದೇ ಕನಿಷ್ಠ ದಾಖಲೆ ಪಡೆದು ಧರ್ಮಸ್ಥಳ ಸಂಸ್ಥೆ ಗ್ರಾಮೀಣ ಬಡಜನರಿಗೆ ತ್ವರಿತಗತಿಯಲ್ಲಿ ಸಾಲ ಮಂಜೂರಾತಿ ಮಾಡುತ್ತಿದೆ. ಫಲಾನುಭವಿಗಳು ಸಾಲ ಯೋಜನೆ ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಪಥದತ್ತ ಮುನ್ನಡೆಯಬೇಕು ಎಂದು ಎಸ್ಕೆಡಿಆರ್ಡಿಪಿ ಬಿ.ಸಿ.ಟ್ರಸ್ಟ್ ಜಿಲ್ಲಾ ನಿರ್ದೇಶಕಿ ಚೇತನಾ ಕರೆ ನೀಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಭಾರತಿ ನಗರ ಯೋಜನೆ ಕಚೇರಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಟಿ.ಕೆ.ಹಳ್ಳಿ ವಲಯದಿಂದ ಸಮೀಪದ ಡಿ.ಹಲಸಹಳ್ಳಿ ಗೇಟ್ ಬಳಿ ಇರುವ ಸಾಯಿ ಬಾಬಾ ಮಂದಿರ ಸಭಾಂಗಣದಲ್ಲಿ ನಡೆದ ಸಾಮೂಹಿಕ ಶ್ರೀಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಥೆ ಬಡಜನರಿಗೆ ಕಿರು ಸಾಲ ನೀಡುವ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಶಾಲೆಗಳ ಅಭಿವೃದ್ಧಿ, ವಿದ್ಯಾರ್ಥಿ ವೇತನ, ಅಂತರ್ಜಲ ಹೆಚ್ಚಿಸಲು ಕೆರೆ ಅಭಿವೃದ್ಧಿ, ವೃದ್ದರಿಗೆ ಮಾಶಾಸನ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸುವ ಉತ್ತಮ ಕಾರ್ಯಗಳನ್ನು ಸಂಸ್ಥೆ ಮಾಡುತ್ತಿದೆ ಎಂದರು.
ಧನಗೂರು ವೀರ ಸಿಂಹಾಸನ ಮಠದ ಪೀಠಾಧ್ಯಕ್ಷ ಮುಮ್ಮಡಿ ಷಡಕ್ಷರಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಹಿಳೆಯರ ಸಬಲೀಕರಣ ಮಾಡುವ ಮಹತ್ತರ ಉದ್ದೇಶದಿಂದ ಧರ್ಮಸ್ಥಳ ಸಂಸ್ಥೆ ಗ್ರಾಮಗಳ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿದೆ ಎಂದು ಶ್ಲಾಘಿಸಿದರು.
ಕನಕಪುರ ಮೂಲದ ಶ್ರೀನಿವಾಸ ಭಜನಾ ಮಂಡಳಿ ಕಲ್ಪನಾ ಮತ್ತು ತಂಡದ ಸದಸ್ಯರಿಂದ ಭಜನೆ ನಡೆಯಿತು. ಸಾಯಿಬಾಬಾ ಅವರಿಗೆ ಮಹಾ ಮಂಗಳಾರತಿ ಮತ್ತು ಸಾಮೂಹಿಕ ಶ್ರೀಲಕ್ಷ್ಮೀ ಪೂಜಾ ಕಾರ್ಯಕ್ರಮ ನಡೆಯಿತು. ಈ ವೇಳೆ ಯೋಜನಾಧಿಕಾರಿ ಸುವರ್ಣ ಭಟ್, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಎ.ಟಿ.ಶ್ರೀನಿವಾಸ್, ವೀರಣ್ಣಗೌಡ, ಟಿ.ಕೆ.ಹಳ್ಳಿ ವಲಯ ಮೇಲ್ವಿಚಾರಕ ಆರ್.ಆದರ್ಶ್, ಗಿರೀಶ್, ಸರಸ್ವತಿ ಶೋಭಾ ಸೇರಿದಂತೆ ಹಲವರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.