ಉಡುಪಿ: ಜಿಲ್ಲೆಯ ನ್ಯಾಯಾಲಯಗಳಲ್ಲಿ ಬಾಕಿಯಾಗಿರುವ ರಾಜಿಯಾಗಬಲ್ಲ ಪ್ರಕರಣ ಇತ್ಯರ್ಥಕ್ಕಾಗಿ ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಬೈಂದೂರು ನ್ಯಾಯಾಲಯಗಳಲ್ಲಿ 13ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ್ ಎಸ್.ಗಂಗಣ್ಣನವರ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಈ ವರ್ಷದ ಕೊನೆಯ ಲೋಕ ಅದಾಲತ್ ಆಗಿದ್ದು, ಈ ಬಾರಿ ರಾಜಿಯಾಗಬಲ್ಲ 7564 ಸಿವಿಲ್ ಪ್ರಕರಣಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ 2319 ಪ್ರಕರಣಗಳು ಇತ್ಯರ್ಥ ಮಾಡುವ ನಿರೀಕ್ಷೆ ಇದೆ. ಸಾರ್ವಜನಿಕರು ನ್ಯಾಯಾಲಯಗಳಲ್ಲಿ ಬಾಕಿ ಇರುವ ತಮ್ಮ ಪ್ರಕರಣಗಳನ್ನು ಶೀಘ್ರವಾಗಿ ಪರಿಹಾರ ಪಡೆದುಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ ಎಂದರು.
ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಈ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಉಪಸ್ಥಿತರಿದ್ದರು.ಮೂರು ಅದಾಲತ್: 10,598 ಇತ್ಯರ್ಥ
ಈ ವರ್ಷ ಮಾರ್ಚ್ನಲ್ಲಿ ನಡೆದ ಲೋಕ ಅದಾಲತ್ನಲ್ಲಿ 3399 ವಾಜ್ಯಗಳಲ್ಲಿ 2802 ಪ್ರಕರಣ, ಜುಲೈನಲ್ಲಿ ನಡೆದ ಲೋಕಅದಾಲತ್ನಲ್ಲಿ 4626 ವ್ಯಾಜ್ಯಗಳಲ್ಲಿ 3909, ಸೆಪ್ಟೆಂಬರ್ನಲ್ಲಿ ನಡೆದ ಲೋಕ ಅದಾಲತ್ನಲ್ಲಿ 4501 ವ್ಯಾಜ್ಯಗಳಲ್ಲಿ 3887 ಪ್ರಕರಣ ಇತ್ಯರ್ಥವಾಗಿದೆ ಎಂದು ನ್ಯಾ. ಕಿರಣ್ ಎಸ್.ಗಂಗಣ್ಣನವರ್ ಮಾಹಿತಿ ನೀಡಿದರು.