ನೆಲಮಂಗಲ ತಾಲೂಕು ಕಚೇರಿ ಮೇಲೆ ಲೋಕಾ ದಾಳಿ

KannadaprabhaNewsNetwork | Published : Jan 21, 2024 1:37 AM

ಸಾರಾಂಶ

ನೆಲಮಂಗಲ: ನಗರದ ತಾಲೂಕು ಕಚೇರಿಗೆ ಮೈಸೂರು ಲೋಕಾಯುಕ್ತ ವರಿಷ್ಠಾಧಿಕಾರಿ ಸುರೇಶ್‌ಬಾಬು ನೇತೃತ್ವದ ಲೋಕಾಯುಕ್ತ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನೆಲಮಂಗಲ: ನಗರದ ತಾಲೂಕು ಕಚೇರಿಗೆ ಮೈಸೂರು ಲೋಕಾಯುಕ್ತ ವರಿಷ್ಠಾಧಿಕಾರಿ ಸುರೇಶ್‌ಬಾಬು ನೇತೃತ್ವದ ಲೋಕಾಯುಕ್ತ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶನಿವಾರ ಮಧ್ಯಾಹ್ನ 12 ಗಂಟೆಯಲ್ಲಿ ನಗರದ ತಾಲೂಕು ಕಚೇರಿಯ ಭೂ ದಾಖಲೆಗಳ ಸಹಾಯಕ ಶಾಖೆ ಸೇರಿದಂತೆ ವಿವಿಧ ಶಾಖೆಗಳಿಗೆ ದಿಢೀರ್ ಬೇಟಿ ನೀಡಿದ ಮೈಸೂರು ಜಿಲ್ಲಾ ಲೋಕಾಯುಕ್ತ ವರಿಷ್ಠಾಧಿಕಾರಿ ಸುರೇಶ್‌ಬಾಬು ನೇತೃತ್ವದಲ್ಲಿ 25ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ ಕೆಲ ದಾಖಲೆಗಳ ಕುರಿತು ಮಾಹಿತಿ ಸಂಗ್ರಹಿಸಿದರು.

ಸಾರ್ವಜನಿಕರ ದೂರು:

ತಾಲೂಕು ಕಚೇರಿಯಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ. ತಾಲೂಕು ಕಚೇರಿಯಲ್ಲಿ ದೊರೆಯುವ ಪಹಣಿ, ಪೋಡಿ, ಮೂಲ ದಾಖಲೆಪತ್ರ, ಆಕಾರ್‌ಬಂಧು, ಸರ್ವೆ ರೆಕಾರ್ಡ್, ಭೂ ಪರಿವರ್ತನಾ ಅರ್ಜಿ, ತಾತ್ಕಾಲಿಕ ಪೋಡಿ ಹದ್ದು ಬಸ್ತು, 11ಇ ನಕ್ಷೆ ಸೇರಿದಂತೆ ಸಾಕಷ್ಟು ಅರ್ಜಿಗಳನ್ನು ಸಕಾಲಕ್ಕೆ ಸರಿಯಾದ ವಿಲೇವಾರಿ ಮಾಡುತ್ತಿಲ್ಲ. ಕಚೇರಿಯಲ್ಲಿ ಲಭ್ಯ ವಿರುವುದಿಲ್ಲ. ಅರ್ಜಿಗೆ ಸಂಬಂಧಿಸಿ ದಾಖಲೆಗಳನ್ನು ಪಡೆಯಲು ಅಲೆಯುವಂತಾಗಿದೆ. ಜತೆಗೆ ಅಧಿಕಾರಿಗಳು ರಾಜಕೀಯ ವ್ಯಕ್ತಿಗಳ ಕೈಗೊಂಬೆಯಾಗಿದ್ದಾರೆಂದು ಅರ್ಜಿದಾರರು ದೂರಿದರು. ಜತೆಗೆ ಕೆಲಸ ಮಾಡಿಕೊಡಲು ಅಧಿಕಾರಿಗಳು ಮಧ್ಯವರ್ತಿಗಳ ಮೂಲಕ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ತಾಲೂಕು ಕಚೇರಿಯ ಬಹುತೇಕ ಅಧಿಕಾರಿಗಳು ಕಚೇರಿಯಲ್ಲಿ ಸಕಾಲಕ್ಕೆ ಆರ್ಜಿಗಳ ವಿಲೇವಾರಿ ಮಾಡುತ್ತಿಲ್ಲ. ಹಣ ಕೊಟ್ಟೆ ಮಾತ್ರ ಕೆಲಸ ಮಾಡಿಕೊಡುತ್ತಿದ್ದಾರೆ ಎಂದು ದೂರು ನೀಡಿದರು.

ಅಧಿಕಾರಿಗಳಿಲ್ಲದ ಕಚೇರಿ:

ರಾಜ್ಯ ಕಂದಾಯ ಇಲಾಖೆ ನೌಕರರ ಸಂಘ, ಗ್ರಾಮ ಆಡಳಿತಾಧಿಕಾರಿಗಳ ಸಂಘ ಸೇರಿದಂತೆ ಗ್ರಾಮ ಸಹಾಯಕರ ಸಂಘದ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನಲ್ಲಿ ಇಲಾಖೆಯ ದಿನಚರಿ ಬಿಡುಗಡೆ ಹಾಗೂ ಕಂದಾಯ ಕಾರ್ಯಾಗಾರಕ್ಕೆ ತಹಸೀಲ್ದಾರ್ ಅಮೃತ್‌ ಆತ್ರೇಶ್, ವಿಶೇಷ ತಹಸೀಲ್ದಾರ್ ಭಾಗ್ಯ ಸೇರಿದಂತೆ ಸಾಕಷ್ಟು ಅಧಿಕಾರಿಗಳು ತೆರಳಿದ್ದು ತಾಲೂಕು ಕಚೇರಿಯಲ್ಲಿ ಅಧಿಕಾರಿಗಳು ಇಲ್ಲದಿರುವಾಗ ಲೋಕಾಯುಕ್ತ ಅಧಿಕಾರಿಗಳು ದಿಢೀರ್‌ ಭೇಟಿ ನೀಡಿದ್ದರು.

ಸಾರ್ವಜನಿಕರು ನೀಡಿರುವ ಅರ್ಜಿಗಳನ್ನು ಸಕಾಲಕ್ಕೆ ಸರಿಯಾದ ವಿಲೇವಾರಿ ಮಾಡಲಾಗುತ್ತಿದೆಯೇ, ಆರ್ಜಿಗಳ ವಿಲೇವಾರಿ ವಿಳಂಬಕ್ಕೆ ಕಾರಣ ಸೇರಿದಂತೆ ಇಲಾಖೆಯ ದಾಖಲೆಗಳ ನಿರ್ವಹಣೆ ಪರಿಶೀಲನೆಗಾಗಿ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ ಎಂದು ಲೋಕಾಯುಕ್ತ ಅಧಿಕಾರಿ ಸುರೇಶ್‌ಬಾಬು ಮಾಹಿತಿ ನೀಡಿದರು.

ಈ ವೇಳೆ ಬೆಂಗಳೂರು ಜಿಲ್ಲಾ ಲೋಕಾಯುಕ್ತ ಡಿವೈಎಸ್‌ಪಿ ಕೃಷ್ಣಯ್ಯ, ಮೈಸೂರು ಜಿಲ್ಲಾ ಲೋಕಾಯುಕ್ತ ಡಿವೈಎಸ್‌ಪಿ ರಾಜಶೆಟ್ಟಿ, ಇನ್ಸ್ ಸ್ಪೆಕ್ಟರ್ ಉಮೇಶ್, ಜಯರತ್ನ, ರೂಪಾಶ್ರೀ, ರವಿಕುಮಾರ್ ಇತರರಿದ್ದರು.

ಪೊಟೊ-20ಕೆಎನ್‌ಎಲ್‌ಎಮ್‌1:

ನೆಲಮಂಗಲ ತಾಲೂಕು ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಭೇಟ ನೀಡಿ ಪರಿಶೀಲನೆ ನಡೆಸಿದರು.

Share this article