ಸಮಸ್ಯೆ ಆಲಿಸಿದ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್
ಕೆಲವು ತಿಂಗಳಿಂದಲೂ ಒಂಟಿ ಸಲಗ ಕಾಟ ನೀಡುತ್ತಿರುವ ಗುಬ್ಬಿಗಾ ಗ್ರಾಪಂನ ಸಿದ್ದನಕೊಡಿಗೆ, ಅರಳಿಕೊಪ್ಪಕ್ಕೆ ಶಿವಮೊಗ್ಗ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಹಾಗೂ ಕಾಂಗ್ರೆಸ್ ಮುಖಂಡರು ಶನಿವಾರ ಸಂಜೆ ಭೇಟಿ ರೈತರೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ರೈತರು ಮಾತನಾಡಿ ಸಿದ್ದನಕೊಡಿಗೆಯಲ್ಲಿ ಇದೇ ಒಂಟಿ ಆನೆ ಶಾಲೆಗೆ ಹೋಗಲು ಕಾಯುತ್ತಿದ್ದ 6 ಮಕ್ಕಳನ್ನು ಬೆನ್ನಟ್ಟಿಕೊಂಡು ಬಂದಿತ್ತು. ನಂತರ ಪ್ರತಿ ದಿನ ಎಂಬಂತೆ ರೈತರ ತೋಟಗಳಿಗೆ ನುಗ್ಗಿ ಅಡಕೆ, ಬಾಳೆ ಹಾಗೂ ಭತ್ತದ ಗದ್ದೆಯ ನಾಟೀ ಮಾಡಿದ ಸಸಿಗಳನ್ನು ತಿಂದು ಹಾಕುತ್ತಿದೆ. ಈಗಾಗಲೇ ಎರಡು ಬಾರಿ ಅರಣ್ಯ ಇಲಾಖೆಗೆ ಒಂಟಿ ಆನೆಯನ್ನು ಸೆರೆ ಹಿಡಿದು ಸ್ಥಳಾಂತರಿಸಬೇಕು ಎಂದು ಮನವಿ ಮಾಡಿದ್ದೇವೆ. ಇಲ್ಲಿನ ರೈತರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದರು.ಈ ಸಂದರ್ಭದಲ್ಲಿ ಡಾ.ಕೆ.ಪಿ.ಅಂಶುಮಂತ್ ಅವರು ಅಲ್ಲಿಂದಲೇ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ದೂರವಾಣಿ ಕರೆ ಮಾಡಿ ರೈತರ ಬೇಡಿಕೆ ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ ದೂರವಾಣಿಯಲ್ಲಿ ರೈತರೊಂದಿಗೆ ಮಾತನಾಡಿ, ಸದ್ಯಕ್ಕೆ ಒಂಟಿ ಸಲಗವನ್ನು ದಟ್ಟಾರಣ್ಯಕ್ಕೆ ಓಡಿಸುತ್ತೇವೆ. ಮತ್ತೆ ಒಂಟಿ ಸಲಗ ಗ್ರಾಮಗಳಿಗೆ ಬಂದರೆ ಸೆರೆ ಹಿಡಿಯಲು ಸರ್ಕಾರ ತೀರ್ಮಾನಿಸುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್ ಬೈಲು ನಟರಾಜ, ಕಸಬಾ ಹೋಬಳಿ ಅಧ್ಯಕ್ಷ ಕೆ.ವಿ.ಸಾಜು, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬೆನ್ನಿ, ಪಿಸಿಎಆರ್.ಡಿ ಬ್ಯಾಂಕಿನ ಅಧ್ಯಕ್ಷ ಕೆ.ಎಂ.ಸುಂದರೇಶ್, ಬ್ಯಾಂಕಿನ ನಿರ್ದೇಶಕ ದೇವಂತರಾಜ್ ಹಾಗೂ ಇತರ ಮುಖಂಡರು ಇದ್ದರು.