ದೊಡ್ಡಬಳ್ಳಾಪುರ: ಜ್ಞಾನದ ಬೆಳಕನ್ನು ಜಗತ್ತಿಗೇ ಸಾರಿದಂತಹ ಮಹಾನ್ ಪುರುಷ ಭಗವಾನ್ ಬುದ್ಧರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ಸಮಾಜ ನಿರ್ಮಿಸಲು ನಾವೆಲ್ಲರೂ ಸಾಗಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಹೇಳಿದರು.
ಬುದ್ಧ ಜಯಂತಿ ನಮ್ಮ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ನೆನಪಿಸುವ ಪವಿತ್ರ ದಿನವಾಗಿದೆ. ಗೌತಮ ಬುದ್ಧರು ನಿಜವಾದ ಜೀವನದ ಅರ್ಥ ಹುಡುಕಲು ಸುಖಜೀವನವನ್ನು ತ್ಯಜಿಸಿದರು. ಮಾನವನ ದುಃಖದ ಮೂಲವನ್ನು ಅರಿತುಕೊಳ್ಳಲು ಅವರು ಧ್ಯಾನವನ್ನು ಮಾಡಿ ಬೋಧಿವೃಕ್ಷದ ಕೆಳಗಡೆ ಅವರಿಗೆ ಜ್ಞಾನ ಪಡೆದುಕೊಂಡರು.
ಬುದ್ಧರು ನಮಗೆ ಅಹಿಂಸೆ, ಮಧ್ಯಮ ಮಾರ್ಗ, ಸತ್ಯ, ದಯೆ ಎಂಬ ಮಹತ್ವದ ತತ್ವಗಳನ್ನು ಬೋಧಿಸಿದರು. ಅವರು ಹೇಳಿದಂತೆ ದುಃಖಕ್ಕೆ ಕಾರಣವಾದ ಆಸೆಗಳನ್ನು ತ್ಯಜಿಸಿದರೆ ನಿಜವಾದ ಸಂತೋಷವನ್ನು ಪಡೆಯಬಹುದು. ಅವರ ತತ್ವದರ್ಶಗಳು, ಉಪದೇಶಗಳು ಇಂದಿಗೂ ಕೂಡ ನಮ್ಮ ಜೀವನದಲ್ಲಿ ಪ್ರಸ್ತುತವಾಗಿವೆ. ಇಂದಿನ ಸಮಾಜದಲ್ಲಿ ಹಿಂಸೆ, ದ್ವೇಷ, ಅಸಹಿಷ್ಣುತೆ, ಹೆಚ್ಚುತ್ತಿರುವ ಸಂದರ್ಭದಲ್ಲಿ ಬುದ್ಧನ ಸಂದೇಶ ನಮಗೆ ಮಾರ್ಗದರ್ಶನ ನೀಡುತ್ತದೆ. ನಾವು ಪರಸ್ಪರ ಪ್ರೀತಿ, ಸಹಾನುಭೂತಿ ಮತ್ತು ಶಾಂತಿಯೊಳಗೆ ಬದುಕಬೇಕು ಎಂಬುದನ್ನು ನಮಗೆ ತಿಳಿಸಿಕೊಟ್ಟಿದ್ದಾರೆ ಎಂದರು.ಜಿ.ಪಂ ಉಪಕಾರ್ಯದರ್ಶಿ ಶಿವಕುಮಾರ್ ಮಾತನಾಡಿ, ಬುದ್ಧನನ್ನ ಏಷ್ಯಾದ ಬೆಳಕು ಎಂದು ಕರೆಯುತ್ತಿದ್ದರು. 2570 ವರ್ಷಗಳ ಹಿಂದೆ ಜನಿಸಿದ ಮಹಾನ್ ವ್ಯಕ್ತಿಯನ್ನು ಇಂದಿಗೂ ಕೂಡ ನೆನೆಯುತ್ತಿದ್ದೇವೆಂದರೆ ಅವರ ಕೊಡುಗೆ ಅಪಾರವಾದದ್ದು. ಬುದ್ಧ ಎಂದರೆ ಬೆಳಕು, ಜ್ಯೋತಿ, ಜ್ಞಾನ, ಒಳ್ಳೆಯದು ಎಂದರ್ಥ. ಬೌದ್ಧ ಧರ್ಮ ವಿಶ್ವದಾದ್ಯಂತ ಹರಡುತ್ತದೆ. ಬೌದ್ಧ ಧರ್ಮದ ಪ್ರೇರೆಪಿತನಾದ ಸಾಮ್ರಾಟ ಅಶೋಕನು ಕೂಡ ಭಾರತದಲ್ಲಿ ಬೌದ್ಧ ಧರ್ಮ ಪ್ರಚಾರ ಮಾಡಿ ಲೋಕ ಕಲ್ಯಾಣ ಕೆಲಸ ಮಾಡುತ್ತಾನೆ. ಜಗಜ್ಯೋತಿ ಬಸವಣ್ಣನವರ ಆದರ್ಶಗಳಿಗೂ ಸಾಮ್ಯತೆ ಇದೆ. ಡಾ. ಬಿ. ಆರ್. ಅಂಬೇಡ್ಕರ್ ಅವರು ಕೂಡ ಬೌದ್ಧ ಧರ್ಮದ ಪ್ರೇರೆಪಿತರಾಗಿ ಶೋಷಣೆ ರಹಿತ ಸಮಾಜ ನಿರ್ಮಾಣಕ್ಕೆ ಅವರ ಜೀವನವನ್ನು ತೊಡಗಿಸಿಕೊಂಡರು. ಹಾಗಾಗಿ ಈ ಮಹನೀಯರ ಜಯಂತಿಗಳನ್ನು ಆಚರಣೆ ಮಾಡುತ್ತಾ ತತ್ವಾದರ್ಶಗಳನ್ನು ಅನುಸರಿಸಿ ಮುಂದಿನ ಪೀಳಿಗೆಗೆ ತಿಳಿಸೋಣ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅನಿಲ್, ಇಒ ಶ್ರೀನಾಥ್ ಗೌಡ, ಕುಂದಾಣ ಗ್ರಾಮದ ಆನಂದ ಬುದ್ಧ ವಿಹಾರದ ನ್ಯಾನಲೋಕ ಬಂತೇಜ, ಅನಿರುದ್ಧ ಬಂತೇಜಿ, ಸಮಾಜದ ಮುಖಂಡರಾದ ಶ್ರೀನಿವಾಸ್, ಲೋಕೇಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
2ಕೆಡಿಬಿಪಿ4- ಬೆಂ.ಗ್ರಾ ಜಿಲ್ಲಾಡಳಿತದಿಂದ ಬುದ್ದ ಜಯಂತಿ ಆಚರಣೆ ನಡೆಯಿತು. ಎಡಿಸಿ ಸೈಯದಾ ಆಯಿಷಾ ಉದ್ಘಾಟಿಸಿದರು.