ಭಗವಾನ್ ಮಹಾವೀರರು ಅಹಿಂಸಾ ಧರ್ಮದ ಪ್ರವರ್ತಕರು: ವಿನಾಯಕ ನರ್ವಾಡೆ

KannadaprabhaNewsNetwork |  
Published : Apr 13, 2025, 02:06 AM IST
ಚಿತ್ರ :  10ಎಂಡಿಕೆ4 : ಭಗವಾನ್ ಮಹಾವೀರರ ಜಯಂತಿ ಕಾರ್ಯಕ್ರಮದ ಉದ್ಘಾಟನೆ. | Kannada Prabha

ಸಾರಾಂಶ

ಸಮಾಜದಲ್ಲಿ ಎಲ್ಲರೂ ಬದುಕಬೇಕು, ಹಾಗೆಯೇ ಇತರರನ್ನು ಬದುಕಲು ಬಿಡಬೇಕು ಎಂಬುದು ಭಗವಾನ್‌ ಮಹಾವೀರರ ಸಂದೇಶವಾಗಿದೆ ಎಂದು ವಿನಾಯಕ ನರ್ವಾಡೆ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಮಾಜದಲ್ಲಿ ಎಲ್ಲರೂ ಬದುಕಬೇಕು, ಹಾಗೆಯೇ ಇತರರನ್ನೂ ಬದುಕಲು ಬಿಡಬೇಕು ಎಂಬುದು ಭಗವಾನ್ ಮಹಾವೀರರ ಸಂದೇಶವಾಗಿದೆ ಎಂದು ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ನಡೆದ ಭಗವಾನ್ ಮಹಾವೀರರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಗವಾನ್ ಮಹಾವೀರರು ಅಹಿಂಸಾ ಧರ್ಮದ ಪ್ರವರ್ತಕರಾಗಿದ್ದು, ಸನ್ಮತಿ, ವರ್ಧಮಾನ ಹಾಗೂ ವೀರ ಹೆಸರುಗಳಿಂದ ಮಹಾವೀರರನ್ನು ಕರೆಯುತ್ತಾರೆ ಎಂದು ತಿಳಿಸಿದರು.

ಕ್ರಿ.ಪೂ.6 ನೇ ಶತಮಾನದಲ್ಲಿ ರಾಜಪುತ್ರನಾಗಿ ಜನಿಸಿದರೂ, ಜನ ಕಲ್ಯಾಣಕ್ಕಾಗಿ ರಾಜತ್ವವನ್ನೂ ತ್ಯಾಗಮಾಡಿ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಭಗವಾನ್ ಮಹಾವೀರರು ಜೀವನ ನಡೆಸಿದರು ಎಂದು ಉಪ ವಿಭಾಗಾಧಿಕಾರಿ ಅವರು ಹೇಳಿದರು.

ಭಗವಾನ್ ಮಹಾವೀರರು ಸತ್ಯ, ಅಹಿಂಸೆ, ಅಪರಿಗ್ರಹ, ಅಸ್ತೇಯ‌ ಮತ್ತು ಬ್ರಹ್ಮಚರ್ಯ ಈ ಪಂಚ ವ್ರತಗಳ ಅನುಷ್ಠಾನದ ಅಡಿಪಾಯ ಹಾಕಿದರು ಎಂದು ವಿನಾಯಕ ನರ್ವಾಡೆ ಅವರು ವಿವರಿಸಿದರು.

ಅಹಿಂಸೆಯೇ ಪರಮ ಧರ್ಮ ಎಂಬುದು ದಿವ್ಯ ಮಂತ್ರವಾಗಿ ಅಳವಡಿಸಿಕೊಂಡಿದ್ದ ಮಹಾವೀರರು ಅದರಂತೆ ನಡೆದುಕೊಂಡರು ಎಂದು ತಿಳಿಸಿದರು.

ಪ್ರತಿಯೊಂದು ಜೀವಿಯೂ ಸಂತೋಷವಾಗಿರಲು ಬಯಸುತ್ತದೆ. ಯಾವುದೇ ಜೀವಿಯು ನೋವನ್ನು ಬಯಸೋದಿಲ್ಲ ಎಂಬ ಬಗ್ಗೆ ಭಗವಾನ್ ಮಹಾವೀರರು ಒತ್ತಿ ಹೇಳಿದ್ದರು ಎಂದು ನುಡಿದರು.

ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ‌ ಕೆ.ಎಸ್.ಮೂರ್ತಿ ಅವರು ಮಾತನಾಡಿ ಪುಣ್ಯ ಭೂಮಿಯಲ್ಲಿ ಕಾಲದಿಂದ ಕಾಲಕ್ಕೆ ಅನೇಕ ಪುಣ್ಯರನ್ನು ಕಂಡ ಶ್ರೇಷ್ಠತೆ ಹೊಂದಿದೆ. ಇಂತಹ ನಾಡಿನಲ್ಲಿ ಆಗಿ ಹೋಗಿರುವ ಋಷಿ ಮುನಿಗಳು, ಶರಣರು, ಸಂತರು ಹಾಗೂ ಮಹನೀಯರ ಸಂದೇಶಗಳನ್ನು ಪಾಲನೆ ಮಾಡುವ ಮೂಲಕ ನಾಡನ್ನು ಇನ್ನಷ್ಟು ಪುಣ್ಯಮಯ ಗೊಳಿಸಬೇಕೆಂದು ಹೇಳಿದರು.

ಕ್ರಿ.ಪೂ.600 ರಲ್ಲಿ ಬೋಧಿಸಿದ ಮಹಾವೀರರ ತತ್ವಾದರ್ಶಗಳು ಹನ್ನೆರಡನೇ ಶತಮಾನದ ಸ್ಪೂರ್ತಿಯಾಗಿದ್ದರಿಂದಲೇ ಬಸವೇಶ್ವರರು ಕೂಡ ಶಾಂತಿ, ಸಮಾನತೆ ಹಾಗೂ ಅಹಿಂಸೆಯನ್ನೇ ಬೋಧಿಸಿದರು ಎಂದು ನುಡಿದರು.

ಉಸಿರಾಡುವಾಗ ಕಣ್ಣಿಗೆ ಕಾಣದ ಸೂಕ್ಷ್ಮಾಣು ಜೀವಿಗಳು ನಶಿಸಬಾರದು ಎಂದು ಬಾಯಿಗೆ ಬಟ್ಟೆ ಕಟ್ಟಿ ಉಸಿರಾಡಿದರು.

ಸಂಪತ್ತಿನ ಕ್ರೋಢೀಕರಣ ವಿರೋಧಿಸಿದ ಜೈನ ಧರ್ಮೀಯರು, ಸತ್ಯಶೀಲವಾದ ಜೀವನಕ್ಕೆ ಆದ್ಯತೆ ಕೊಟ್ಟರು ಎಂದು ಕೆ.ಎಸ್.ಮೂರ್ತಿ ಹೇಳಿದರು.

ನಿವೃತ್ತ ಶಿಕ್ಷಕರಾದ ಬಿ.ಸಿ.ಶಂಕರಯ್ಯ ಅವರು ಮಾತನಾಡಿ ಮನುಷ್ಯರ ಜೀವನ ಉತ್ತಮವಾಗಲು ರತ್ನತ್ರಯಗಳಾದ ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರೊತ್ರ್ಯಗಳನ್ನು ಪಾಲಿಸಬೇಕು ಎಂದಿದ್ದರು ಎಂದು ನುಡಿದರು.

ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿದ್ದರಾಜು ಬೆಳ್ಳಯ್ಯ ಅವರು ಮಾತನಾಡಿ, ಭಗವಾನ್ ಮಹಾವೀರರು ಮನುಷ್ಯನ ಸರಿಯಾದ ನಡವಳಿಕೆಗೆ ಹೆಚ್ಚು ಒತ್ತು ನೀಡಿದ್ದರು ಎಂದು ನುಡಿದರು.

ಪ್ರಮುಖರಾದ ಎಚ್.ಎಲ್. ದಿವಾಕರ ಅವರು ಮಹಾವೀರರ ಆದರ್ಶ ಹಾಗೂ ಅಹಿಂಸಾ ತತ್ವಗಳನ್ನು ತಿಳಿದುಕೊಳ್ಳುವಂತಾಗಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು. ಬಿ.ಸಿ.ಶಂಕರಯ್ಯ ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''