ಒಂದು ಗಂಟೆಗಳ ಕಾಲ ರಸ್ತೆ ಸಂಪರ್ಕ ಕಡಿತ
ತಾಲೂಕಿನ ಸನವಳ್ಳಿ ಬಳಿ ಸೇತುವೆ ಕಾಮಗಾರಿ ಕೈಗೊಂಡ ಹಿನ್ನೆಲೆ ಪಕ್ಕದಲ್ಲಿಯೇ ಪರ್ಯಾಯವಾಗಿ ನಿರ್ಮಾಣ ಮಾಡಲಾಗಿರುವ ಅವೈಜ್ಞಾನಿಕವಾದ ಮಣ್ಣಿನ ರಸ್ತೆಯ ಏರಿಯನ್ನು ಹತ್ತಲಾಗದೆ ಲಾರಿಯೊಂದು ಸಿಲುಕಿ ರಸ್ತೆ ಸಂಪರ್ಕ ಕಡಿತಗೊಂಡು ಸುಮಾರು ಒಂದು ಗಂಟೆಗಳ ಕಾಲ ವಾಹನ ಸವಾರರು ಪರದಾಡಿದ ಪ್ರಸಂಗ ಶನಿವಾರ ನಡೆಯಿತು.ಪಟ್ಟಣದ ಹೊರ ವಲಯ ಬಂಕಾಪುರ ರಸ್ತೆ ಸನವಳ್ಳಿ ಗ್ರಾಮದ ಬಳಿ ಲೋಕೋಪಯೋಗಿ ಇಲಾಖೆಯಿಂದ ಸೇತುವೆ ಕಾಮಗಾರಿ ಕೈಗೊಂಡಿದ್ದು, ಇದಕ್ಕೆ ಪರ್ಯಾಯವಾಗಿ ಮಣ್ಣಿನ ರಸ್ತೆ ನಿರ್ಮಾಣ ಮಾಡಲಾಗಿದೆ. ಈ ರಸ್ತೆಯಲ್ಲಿ ಒಂದು ಬಾರಿಗೆ ಒಂದು ವಾಹನ ಮಾತ್ರ ಸಂಚರಿಸಬಹುದಲ್ಲದೇ ಸಮತಟ್ಟಾದ ರಸ್ತೆ ನಿರ್ಮಾಣ ಮಾಡುವ ಬದಲು ಎರಡು ಬದಿಗೆ ತೀವ್ರವಾದ ಏರಿ(ಎತ್ತರವಾಗಿರುವುದರಿಂದ) ಶನಿವಾರ ಸರಕು ತುಂಬಿದ ಲಾರಿಯೊಂದು ಏರಿ ಹತ್ತಲಾಗದೆ ಮಾರ್ಗ ಮಧ್ಯದಲ್ಲಿಯೇ ನಿಂತ ಪರಿಣಾಮ ಇನ್ನುಳಿದ ಬಸ್, ಕಾರು ಮುಂತಾದ ವಾಹನಗಳು ಮುಂದೆ ಹೋಗಲಾಗದೆ ಸುಮಾರು ೧ ಗಂಟೆಗಳ ಕಾಲ ಎರಡು ಬದಿಯಲ್ಲಿ ಸಾಲುಗಟ್ಟಿ ನಿಂತಿದ್ದವು. ಇದರಿಂದ ದೂರ ಪ್ರಯಾಣಿಸಬೇಕಾದ ಪ್ರಯಾಣಿಕರು ಸ್ಥಳದಲ್ಲಿಯೇ ಪರದಾಡಬೇಕಾಯಿತು. ಬಳಿಕ ಟ್ರ್ಯಾಕ್ಟರ್ ಮೂಲಕ ಹರಸಾಹಸಪಟ್ಟು ಲಾರಿಯನ್ನು ಎಳೆದು ಮೇಲಕ್ಕೆ ತರಲಾಯಿತು. ಬಳಿಕ ರಸ್ತೆ ಸಂಚಾರ ಸುಗಮಗೊಂಡಿತು.ಪರ್ಯಾಯವಾಗಿ ಸಮರ್ಪಕವಾದ ರಸೆ ನಿರ್ಮಾಣ ಮಡದೆ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಕಾಮಗಾರಿ ಕೈಗೊಂಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷತನದಿಂದಾಗಿ ಇಂತಹ ಅವಘಡ ಸಂಬವಿಸಲು ಕಾರಣವಾಗಿದೆ. ಅಲ್ಲದೇ ತೀವ್ರವಾದ ಮಳೆ ಬಂದರೆ ಈ ಮಾರ್ಗವಾಗಿ ವಾಹನಗಳು ಸಂಚರಿಸುವುದು ಕೂಡ ದುಸ್ತರವಾಗಿ ಸಾಕಷ್ಟು ಅವಾಂತರ ಸೃಷ್ಟಿಯಾಗುತ್ತದೆ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಿಸಿದವರು ತಕ್ಷಣ ಈ ಬಗ್ಗೆ ಎಚ್ಚೆತ್ತುಕೊಂಡು ವಾಹನ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಅನುಕೂಲ ಮಾಡಿಕೊಡಬೇಕಲ್ಲದೇ, ನಿರ್ಮಾಣ ಹಂತದ ಸೇತುವೆ ಕಾಮಗಾರಿಯನ್ನು ಮಳೆಗಾಲ ಪ್ರಾರಂಭವಾಗುವ ಮುನ್ನ ಪೂರ್ಣಗೊಳಸಿ ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಆಗ್ರಹಿಸಿದ್ದಾರೆ.