ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ತೇಜಸ್ವಿನಿ (32) ಕೊಲೆಯಾದ ನತದೃಷ್ಟೆ. ನಗರದ ತೇಜಸ್ವೀನಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನನ್ನ ಬಿಟ್ಟು ತನ್ನಿಬ್ಬರು ಪುಟ್ಟ ಮಕ್ಕಳೊಂದಿಗೆ ಏಕಾಂಗಿಯಾಗಿ ಜೀವನ ನಡೆಸುತಿದ್ದಳು. ಹೋಟೆಲ್ವೊಂದರಲ್ಲಿ ಕೆಲಸ ಮಾಡಿಕೊಂಡು ಅವರೇ ಕೊಟ್ಟಿದ್ದ ರೂಮ್ ಒಂದರಲ್ಲಿ ಮಕ್ಕಳನ್ನ ಸಾಕಿ ಸಲುಹಿಕೊಂಡು ಜೀವನ ದೂಡುತ್ತಿದ್ದಳು.
ತೇಜಸ್ವಿನಿಗೆ ಸಂದೀಪ್ ಎಂಬ ಯುವಕನ ಪರಿಚಯವಾಗಿತ್ತು. ನಂತರ ಪರಿಚಯ ಪ್ರಣಯಕ್ಕೆ ತಿರುಗಿ ಆಕೆಯ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಾನೆ. ಕಳೆದ 1 ತಿಂಗಳ ಹಿಂದೆ ತೇಜಸ್ವಿನಿ ಹಾಗೂ ಸಂದೀಪ್ ಇಬ್ಬರು ಸೇರಿ ಬೇರೆ ಮನೆ ಮಾಡಿ ಹೊಸ ಜೀವನ ಶುರು ಮಾಡಿದ್ದರು. ಆದರೆ ಇವರಿಬ್ಬರು ಕಳೆದ 2 ದಿನಗಳ ಹಿಂದೆ ತೇಜಸ್ವೀನಿ ಸ್ನೇಹಿತೆ ಅರುಣಾ ಅವರ ಮನೆಯಲ್ಲಿ ಉಳಿದುಕೊಂಡಿದ್ದಾಗ ಸಂದೀಪ್ ಕುಡಿದು ಗಲಾಟೆ ಮಾಡಿಕೊಂಡಿದ್ದನು. ಆಗ ಕುಡಿದ ಅಮಲಿನಲ್ಲಿ ತೇಜಸ್ವಿನಿ ಮೇಲೆ ಹಲ್ಲೆ ಮಾಡಿದ್ದು, ಮದ್ಯದ ಪಾಕೆಟ್ ಕಟ್ ಮಾಡಲು ಇಟ್ಟುಕೊಂಡಿದ್ದ ಚಾಕುವಿನಿಂದ ತೇಜಸ್ವಿನಿ ಹೊಟ್ಟೆ ಕಡೆ ಬೀಸಿದ್ದಾನೆ.ಆಗ ಗಾಯವಾಗಿ ತೀವ್ರ ರಕ್ತಸ್ರಾವವೂ ಆಗಿದೆ. ಕೂಡಲೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಹೊಲಿಗೆ ಸಹ ಹಾಕಿಸಿಕೊಂಡಿದ್ದಾರೆ. ಮತ್ತೆ ಮನೆಗೆ ಬಂದ ತೇಜಸ್ವಿನಿ ಮಾತ್ರೆ ಔಷಧಿ ತಗೊಳ್ಳೋ ಬದಲು ಮದ್ಯ ಸೇವಿಸಿ ಮಲಗಿ ಬಿಟ್ಟಿದ್ದಳು ಎನ್ನಲಾಗಿದೆ. ಇದರಿಂದ ಗಾಯ ಸೆಫ್ಟಿಕ್ ಆಗಿ ಹೊಟ್ಟೆಯೆಲ್ಲಾ ಇನ್ಫೆಕ್ಷನ್ ಆಗಿದೆ. ಇದರಿಂದ ಆರೋಗ್ಯ ಸ್ಥಿತಿ ಗಂಭೀರ ಆಗಿ ಮರಳಿ ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಬಹು ಅಂಗಾಗ ವೈಫಲ್ಯದಿಂದ ಮೃತಪಟ್ಟಿದ್ದಾಳೆ.
ಇನ್ನೂ ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ಪೊಲೀಸರು ಪ್ರಿಯಕರ ಸಂದೀಪ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ನಡೆದ ಘಟನೆಯನ್ನು ಬಾಯ್ಬಿಟ್ಟಿದ್ದು, ತೇಜಸ್ವಿನಿ ಹಣ ಹಾಗೂ ಮದ್ಯಕ್ಕಾಗಿ ಪೀಡಿಸುತ್ತಿದ್ದಳು. ಇದೇ ವಿಚಾರಕ್ಕೆ ಗಲಾಟೆಯಾಗಿ ಆಕಸ್ಮಿಕವಾಗಿ ಚಾಕು ತಗುಲಿದೆ ಅಂತ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.
ಸಿಕೆಬಿ-2 ಮೃತ ತೇಜಸ್ವನಿಸಿಕೆಬಿ-3 ಸಂದೀಪ್