- 4ನೇ ಸಮಿಸ್ಟರ್ ಪರೀಕ್ಷೆ ಬರೆಯಲು ಸಿದ್ಧರಾಗಿ ಬಂದಿದ್ದ ವಿದ್ಯಾರ್ಥಿಗಳು ಕಕ್ಕಾಬಿಕ್ಕಿ
- ಇತ್ತೀಚೆಗಷ್ಟೇ ಬಿ.ಕಾಂ. ಪರೀಕ್ಷೆಯಲ್ಲೂ ಉತ್ತರ ಸಮೇತ ಪ್ರಶ್ನೆಪತ್ರಿಕೆ ನೀಡಿದ್ದ ವಿವಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆಪ್ರಶ್ನೆಪತ್ರಿಕೆಯಲ್ಲಿ ಅಪೂರ್ಣ ಪ್ರಶ್ನೆಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತೊಮ್ಮೆ ಚೆಲ್ಲಾಟವಾಡಿರುವ ಘಟನೆ ಮಂಗಳವಾರ ವರದಿಯಾಗಿದೆ.
ಎಂ.ಕಾಂ. 4ನೇ ಸಮಿಸ್ಟರ್ ಪರೀಕ್ಷೆ ಬರೆಯಲು ಸಿದ್ಧರಾಗಿ ಬಂದಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರಶ್ನೆಪತ್ರಿಕೆ ಕೈ ಸೇರುತ್ತಿದ್ದಂತೆ ಕಕ್ಕಾಬಿಕ್ಕಿಯಾಗಿದ್ದಾರೆ. ಪ್ರಶ್ನೆಪತ್ರಿಕೆಯಲ್ಲಿ ಅಪೂರ್ಣ ಪ್ರಶ್ನೆಗಳನ್ನು ನೀಡಿದ್ದರಿಂದ ಸಹಜವಾಗಿಯೇ ವಿದ್ಯಾರ್ಥಿಗಳು ಏನು ಬರೆಯಬೇಕೆಂಬುದು ತೋಚದೇ ಕೊಠಡಿ ಮೇಲ್ವಿಚಾರಕರ ಗಮನಕ್ಕೆ ತಂದಿದ್ದರು.
ಆಗಿರುವ ಎಡವಟ್ಟನ್ನು ಸರಿಪಡಿಸಿ, ನ್ಯಾಯ ಒದಗಿಸುವಂತೆ ವಿದ್ಯಾರ್ಥಿಗಳು, ಪಾಲಕರು ದಾವಣಗೆರೆ ವಿಶ್ವ ವಿದ್ಯಾನಿಲಯಕ್ಕೆ ಒತ್ತಾಯಿಸಿದ್ದಾರೆ.
- - -ಬಾಕ್ಸ್ * ಪರೀಕ್ಷೆಯಲ್ಲೇ ಯಾಕೆ ಎಡವಟ್ಟು? ಏನು ಸಮಸ್ಯೆ?
ಯಾರದ್ದೋ ಮೇಲಿನ ಸಿಟ್ಟು, ದ್ವೇಷಕ್ಕೆ, ಯಾರನ್ನೋ ಗುರಿಯಾಗಿಸಿಕೊಂಡು ಪದೇಪದೇ ದಾವಣಗೆರೆ ವಿಶ್ವ ವಿದ್ಯಾನಿಲಯದ ವಿವಿಧ ಪರೀಕ್ಷೆಗಳಲ್ಲಿಯೇ ಸಮಸ್ಯೆ ಮಾಡಲಾಗುತ್ತಿದೆ. ಸರ್ಕಾರ, ದಾವಿವಿ ಕುಲಪತಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ.
ಪ್ರಶ್ನೆಪತ್ರಿಕೆ ಬದಲಿಗೆ ಉತ್ತರ ಸಮೇತ ಪ್ರಶ್ನೆಪತ್ರಿಕೆಗಳನ್ನು ನೀಡಿದ್ದು ಆಕಸ್ಮಿಕ ಆದ ಲೋಪ ಎನ್ನಬಹುದು. ಆದರೆ, ಮಂಗಳವಾರ ಆದ ಎಂಕಾಂ 4ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಅಪೂರ್ಣ ಪ್ರಶ್ನೆಗಳನ್ನು ನೀಡಿರುವುದನ್ನು ನೋಡಿದರೆ ದಾವಣಗೆರೆ ವಿವಿಯ ಪರೀಕ್ಷಾ ವಿಭಾಗದಲ್ಲೇ ಏನೋ ಸಮಸ್ಯೆ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.ಮೊದಲೇ ದಾವಣಗೆರೆ ವಿವಿ ವಿವಿಧ ಹುದ್ದೆಗಳ ನೇಮಕಾತಿಯ ವೇಳೆ ಆಗಿರುವ ಗೊಂದಲ, ಸಮಸ್ಯೆಗಳು, ಅಕ್ರಮಗಳ ಆರೋಪಗಳು ಇನ್ನೂ ಜನರ ಮನದಲ್ಲಿ ಹಸಿರಾಗಿಯೇ ಇದೆ. ಅಂಥದ್ದರಲ್ಲಿ ಪದೇಪದೇ ಪರೀಕ್ಷೆಗಳಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಇಂತಹ ಎಡವಟ್ಟುಗಳು ಆಗುತ್ತಿರುವುದು ಸಾಕಷ್ಟು ಅನುಮಾನಗಳನ್ನೂ ಹುಟ್ಟು ಹಾಕುತ್ತಿದೆ. ಸಂಬಂಧಿಸಿದವರು ಎರಡೂ ಎಡವಟ್ಟು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಕೂಲಂಕಶವಾಗಿ ಪರಿಶೀಲಿಸಿದರೆ ಎಲ್ಲಿ, ಯಾರಿಂದ, ಹೇಗೆ ಲೋಪ ಆಗುತ್ತಿದೆ ಎಂಬುದರ ಸುಳಿವಾದರೂ ಸಿಕ್ಕೀತು. ಈ ಬಗ್ಗೆ ದಾವಿವಿ ಗಮನ ಹರಿಸಲಿ ಎಂದು ವಿದ್ಯಾರ್ಥಿ ಮುಖಂಡರು ಒತ್ತಾಯಿಸಿದ್ದಾರೆ.
ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಮಂಗಳವಾರ ಎಂ.ಕಾಂ. 4ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ನೀಡಿದ್ದ ಪ್ರಶ್ನೆಪತ್ರಿಕೆಯಲ್ಲಿ ಅಪೂರ್ಣ ಪ್ರಶ್ನೆಗಳಿರುವುದು. -11ಕೆಡಿವಿಜಿ9, 10:
ಶಿವಗಂಗೋತ್ರಿಯ ದಾವಣಗೆರೆ ವಿಶ್ವವಿದ್ಯಾನಿಲಯ ಕಟ್ಟಡ.