ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಮದ್ದೇನಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜಿಪಂ ಮಾಜಿ ಸದಸ್ಯ ಹಾಗೂ ಹಿರಿಯ ಮುಖಂಡ ಎಂ.ಹುಚ್ಚೇಗೌಡ ಮತ್ತು ಉಪಾಧ್ಯಕ್ಷರಾಗಿ ಬಿಳಿಯಪ್ಪ ಅವಿರೋಧವಾಗಿ ಆಯ್ಕೆಯಾದರು.ಸಂಘದ 12 ಮಂದಿ ನಿರ್ದೇಶಕರ ಸ್ಥಾನಗಳಿಗೆ ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 9 ಮತ್ತು ಜೆಡಿಎಸ್ ಬೆಂಬಲಿತ 3 ಮಂದಿ ಆಯ್ಕೆಯಾಗಿದ್ದರು. ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಂ.ಹುಚ್ಚೇಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಬಿಳಿಯಪ್ಪ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಜೆ.ಸಂತೋಷ್ಕುಮಾರ್ ಪ್ರಕಟಿಸಿದರು.
ಅವಿರೋಧ ಆಯ್ಕೆಯಾಗುತ್ತಿದ್ದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಂಘದ ಮುಂಭಾಗದಲ್ಲಿ ಬೃಹತ್ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಚಿವ ಎನ್.ಚಲುವರಾಯಸ್ವಾಮಿ ಪರ ಜಯಘೋಷ ಮೊಳಗಿಸಿ ವಿಜಯೋತ್ಸವ ಆಚರಿಸಿದರು.ನಂತರ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ತಮಟೆ, ಮಂಗಳವಾದ್ಯದೊಂದಿಗೆ ಮೆರವಣಿಗೆ ಮೂಲಕ ಗ್ರಾಮದ ಶಕ್ತಿದೇವತೆ ಶ್ರೀ ಮದ್ದೇನಟ್ಟಮ್ಮ ದೇವಿ ದೇವಸ್ಥಾನಕ್ಕೆ ಕರೆತಂದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ನೆರೆದಿದ್ದ ನೂರಾರು ಮಂದಿ ಕಾರ್ಯಕರ್ತರು ಮತ್ತು ಸ್ಥಳೀಯ ಜನರಿಗೆ ಲಘು ಉಪಹಾರ ವಿತರಿಸಲಾಯಿತು.
ನೂತನ ಅಧ್ಯಕ್ಷ ಎಂ.ಹುಚ್ಚೇಗೌಡ ಮಾತನಾಡಿ, ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಸಂಘದ ಎಲ್ಲಾ ನಿರ್ದೇಶಕರ ಬೆಂಬಲ, ಸಹಕಾರದಿಂದ ಈ ಸಂಸ್ಥೆಗೆ ಅಧ್ಯಕ್ಷನಾಗಿದ್ದೇನೆ. ಸಂಘದ ವ್ಯಾಪ್ತಿಯ 14 ಹಳ್ಳಿಗಳ ರೈತರ ಅನುಕೂಲಕ್ಕಾಗಿ ಸಹಕಾರ ಸಂಘಕ್ಕೆ ನೂತನ ಕಟ್ಟಡ ನಿರ್ಮಿಸುವುದು ಮತ್ತು ಚೋಳೇನಹಳ್ಳಿಯಲ್ಲಿ ಡೇರಿ ಸ್ಥಾಪಿಸುವುದು ನಮ್ಮ ಉದ್ದೇಶವಾಗಿದೆ ಎಂದರು.ಮುಖಂಡ ಪ್ರಭಾಕರ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿರುವ ನೂತನ ಅಧ್ಯಕ್ಷ ಎಂ.ಹುಚ್ಚೇಗೌಡರು, ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆ ಮಾಡಿಸಿ ಸಂಘದ ಅಭಿವೃದ್ಧಿಯ ಜೊತೆಗೆ ಈ ಭಾಗದ ಹಳ್ಳಿಗಳ ಅಭಿವದ್ಧಿಗೂ ಶ್ರಮಿಸಬೇಕು ಎಂದರು.
ಈ ವೇಳೆ ಚಿತ್ರ ನಿರ್ಮಾಪಕ ಹಾಗೂ ಸಮಾಜ ಸೇವಕ ಮಾವಿನಕೆರೆ ಸುರೇಶ್, ಮುಖಂಡರಾದ ಉದಯಕಿರಣ್, ಪ್ರಭಾಕರ್, ತಾಪಂ ಮಾಜಿ ಅಧ್ಯಕ್ಷ ಮರಿಸ್ವಾಮಿ, ಮಾಜಿ ಸದಸ್ಯ ಬಿ.ಎಂ.ವೇಣುಗೋಪಾಲ್, ಮುಖಂಡರಾದ ಎಂ.ಎನ್.ಮಾಯಣ್ಣ, ಅಪ್ಪಾಜಿ, ಬಿ.ಜೆ.ನಾರಾಜು, ರಮೇಶ್, ನಾಗರಾಜು, ಸಣ್ಣತಿಮ್ಮಯ್ಯ, ಅನಿಲ್ಕುಮಾರ್, ರಾಜಣ್ಣ, ಮಹೇಶ್, ಗಂಗರಾಜು, ಯೋಗೇಶ್, ರವಿ, ಲೋಕೇಶ್, ನಂಜಯ್ಯ, ಮಂಜು, ತಿಮ್ಮೇಶ್, ಶಿವಣ್ಣ, ರಾಜಣ್ಣ, ರಾಮು, ಸಂಘದ ನಿರ್ದೇಶಕರಾದ ಮರಿಸ್ವಾಮಿ, ಜೆ.ನಾಗರಾಜು, ಚನ್ನಮ್ಮ, ಸಾಕಮ್ಮ, ಕೆ.ಜೆ.ಮುದ್ದುರಾಜು, ಉಮೇಶ, ಜೆ.ರಾಜು, ಎಂ.ಎನ್.ನಂಜುಂಡಪ್ಪ, ಎಂ.ಎನ್.ಕೃಷ್ಣೇಗೌಡ, ಬಿ.ಕೆ.ರಾಮಸ್ವಾಮಿ, ಸಂಘದ ಸಿಇಒ ಪ್ರಕಾಶ್ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಹಾಜರಿದ್ದು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.