ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮೈಲಿಗೆಯನ್ನು ಮಡಿ ಮಾಡುವಂತಹ ವೃತ್ತಿಯಲ್ಲಿ ಜನಿಸಿದ, ತಳ ಸಮುದಾಯದ ಒಬ್ಬ ವ್ಯಕ್ತಿ 12ನೇ ಶತಮಾನದಲ್ಲಿನ ಸಮಾಜದಲಿದ್ದ ಕೆಲವು ಕೆಟ್ಟ ಮನಸ್ಥಿತಿಗಳ ಮನಸ್ಸುಗಳನ್ನು ತೊಳೆಯುವ ಕೆಲಸವನ್ನು ಮಡಿವಾಳ ಮಾಚಯ್ಯ ಅವರು ಮಾಡಿದರು ಎಂದು ಅಪಾರ ಜಿಲ್ಲಾಧಿಕಾರಿ ಡಾ. ಎನ್.ತಿಪ್ಪೇಸ್ವಾಮಿ ಬಣ್ಣಿಸಿದರು. ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ "ಮಡಿವಾಳ ಮಾಚಿದೇವರ ಜಯಂತಿಯಲ್ಲಿ ಅವರು ಮಾತನಾಡಿದರು.ಯಾವುದೇ ಸಮಾಜ ಪ್ರಗತಿ ಹೊಂದಬೇಕಾದರೆ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಆಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನ ಸಿಗಲಿದೆ. ಸಮುದಾಯದ ಒಳತಿಗಾಗಿ ತಾಲ್ಲೂಕಿನ ತಿರ್ನಹಳ್ಳಿ ಬಳಿ ಒಂದು ಎಕರೆ ಜಮೀನನ್ನು ದೋಬಿ ಘಾಟ್ ಗೆ ಮೀಸಲು ಇಡಲಾಗಿದೆ. ಈ ಜಮೀನಿನಲ್ಲಿ ಸಮುದಾಯದ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳನ್ನು ಕೈಗೊಳ್ಳುವ ಭರವಸೆ ನೀಡಿದರು.ಬೇಡಿಕೆಗಳ ಮನವಿ ಸಲ್ಲಿಕೆ
ಮಾಡಿವಾಳ ಮಾಚಿದೇವರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಮಾತನಾಡಿ, ಮಡಿವಾಳ ವರ್ಗದವರಿಗೆ ಮುಂದಿನ ದಿನಗಳಲ್ಲಿ ಸರ್ಕಾರಿ ಉದ್ಯೋಗ ಕಲ್ಪಿಸಿಕೊಡಬೇಕು ಮತ್ತು ವಿದ್ಯಾರ್ಥಿಗಳಿಗೆ ವಸತಿ ನಿಲಯಗಳು ನಿರ್ಮಾಣವಾಗಬೇಕು ಎಂದು ತಿಳಿಸಿ ಸಮುದಾಯದ ವಿವಿಧ ಬೇಡಿಕೆಗಳನ್ನು ಜಿಲ್ಲಾಡಳಿತದ ಮುಂದಿಟ್ಟರು. ಕಾರ್ಯಕ್ರಮದಲ್ಲಿ ಎಸ್ .ಎಸ್ .ಎಲ್ .ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಡಿವಾಳ ಸಂಘದ ಜಿಲ್ಲಾ ಗೌರವಾಧ್ಯಕ್ಷ ಲಕ್ಷ್ಮೀನಾರಯಣಪ್ಪ, ತಾಲ್ಲೂಕು ಅಧ್ಯಕ್ಷ ಮುನಿನಾರಾಯಣ, ಸಮುದಾಯ ಮುಖಂಡರಾದ ಕೃಷ್ಣಪ್ಪ, ವೇಣು, ಸುಧಾಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನೀರ್ದೆಶಕಿ ಎನ್.ಮನೀಷ್ ಇದ್ದರು.