ಅಕ್ರಂಪಾಷ ತಲಕಾಡು
ತಲಕಾಡಿನ ಪುರಾತನ ಕಾಲದ ಮಾಧವಮಂತ್ರಿ ಉಳ್ಳಾಣೆ ಅಣೆಕಟ್ಟೆಗೆ ಪರ್ಯಾಯವಾಗಿ ನಿರ್ಮಿಸಿರುವ ನೂತನ ಕಟ್ಟೆಯ ಮೇಲಿಂದ ಪ್ರವಾಹದ ನೀರು ಹಾಲ್ನೊರೆಯಂತೆ ಜಲವೈಭವ ಸೃಷ್ಟಿಸಿರುವುದು ವೀಕ್ಷಕರಿಗೆ ಹಬ್ಬದ ರಸದೌತಣ ನೀಡಿದೆ.
ನೂತನ ಅಣೆಕಟ್ಟೆಯ ಮೇಲಿಂದ ಇದೇ ಮೊದಲ ಬಾರಿಗೆ ಧುಮ್ಮಿಕ್ಕಿ ಹರಿಯುತ್ತಿರುವ ಜಲಪಾತ ವೈಭವ ಕಣ್ತುಂಬಿಕೊಳ್ಳಲು ಸಾಲು ಸಾಲಾಗಿ ಇಲ್ಲಿಗೆ ಆಗಮಿಸುತ್ತಿರುವ ಸ್ಥಳೀಯರು, ಪ್ರವಾಸಿಗರಿಗೆ ಅಣೆಕಟ್ಟೆ ಬಳಿಗೆ ತೆರಳದಂತೆ ನಾಲಾ ದಂಡೆಯ ರಸ್ತೆಯ ಗೇಟ್ ಗೆ ಟೆಂಡರ್ ದಾರರು ಬೀಗ ಜಡಿದಿರುವುದು ನಿರಾಸೆಯಾಗಿದ್ದು, ಕಿರಿಕಿರಿ ವಾಗ್ವಾದಕ್ಕೆ ಕಾರಣವಾಗಿದೆ.ಗೇಟ್ ಪಕ್ಕದಿಂದಲೂ ಹಾದು ಹೋಗದಂತೆ ಭಾರಿ ಗಾತ್ರದ ಬಂಡೆ ಇಟ್ಟು ತಡೆಯೊಡ್ಡಿದ್ದು, ಅಕಸ್ಮಾತ್ ಬಂಡೆ ಹತ್ತಿ ಹೋದರು ಜಾರಿ ಬೀಳುವಂತೆ ಮಣ್ಣು ಸುರಿದು ಜನರ ಉತ್ಸಾಹಕ್ಕೆ ಗುತ್ತಿಗೆದಾರರು ತಣ್ಣೀರು ಸುರಿದಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೂತನ ಅಣೆಕಟ್ಟೆ ವೀಕ್ಷಣೆಗೆ ತೊಂದರೆ:
ಈ ಕುರಿತು ನೀರಾವರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹಲವರು ಅಲವತ್ತುಕೊಂಡಿದ್ದಾರೆ.
ಇಲ್ಲಿನ ನದಿಯಲ್ಲಿ ದಿನೇ ದಿನೇ ಪ್ರವಾಹ ನೀರು ಹೆಚ್ಚುತ್ತಿರುವ ಹಿನ್ನೆಲೆ, ಜಾಗೃತರಾದ ಅಧಿಕಾರಿಗಳು ಪ್ರವಾಹದಲ್ಲಿ ಮೊದಲು ನೀರು ನುಸುಳುವ ಮರಡಿಪುರ, ಮಾರನಪುರ ಹೆಮ್ಮಿಗೆ ಅಕ್ಕೂರು, ತಡಿಮಾಲಂಗಿ ಗ್ರಾಮಗಳ ಜನತೆಗೆ ಮುನ್ನೆಚ್ಚರಿಕೆ ನೀಡಿದ್ದಾರೆ. ನದಿಪಾತ್ರದ ಕಡೆಗೆ ಜನ ಜಾನುವಾರುಗಳು ತೆರಳದಂತೆ ತಲಕಾಡು ನಾಡಕಚೇರಿ ಉಪ ತಹಸೀಲ್ದಾರ್ ಇ. ಕುಮಾರ್ ಎಚ್ಚರಿಸಿದ್ದಾರೆ.
ಮಳೆ ಬೆಳೆಯಿಲ್ಲದೆ ಬರದ ಬೇಗೆಯಲ್ಲಿ ಬೇಯುತ್ತಿದ್ದ ಹೋಬಳಿ ಜನತೆಗೆ, ಕಪಿಲಾ-ಕಾವೇರಿ ತುಂಬಿ ಹರಿಯುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.