- ಕೋಲಾರ, ತುಮಕೂರಿಗೆ ಭದ್ರಾ ಡ್ಯಾಂ ಯಾಕೆ, ಸಮೀಪದ ಕಾವೇರಿ ನೀರನ್ನೇ ಹರಿಸಲಿ: ಬಿ.ಪಿ.ಹರೀಶ ತಾಕೀತು - - -
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವ ವಿಚಾರವಾಗಿ 2 ದಿನದಲ್ಲೇ ತೀರ್ಮಾನ ಕೈಗೊಳ್ಳುವುದಾಗಿ ಐಸಿಸಿ ಸಭೆಯಲ್ಲಿ ಹೇಳಿ 8-10 ದಿನ ಕಳೆದಿವೆ. ಆದರೂ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದರು.
ರಾಜ್ಯ ಸರ್ಕಾರ ಏಕಾಏಕಿ ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಾಯೋಗಿಕವಾಗಿ ಹಾಗೂ ವಾಣಿವಿಲಾಸಸಾಗರಕ್ಕೆ 3 ಟಿಎಂಸಿ ನೀರು ಹರಿಸಲು ಆದೇಶ ಹೊರಡಿಸಿದೆ. ಭದ್ರಾ ಮೇಲ್ದಂಡೆಗೆ ನೀರು ಹರಿಸುವ ನಿರ್ಧಾರ, ಆದೇಶವನ್ನು ತಕ್ಷಣವೇ ಸರ್ಕಾರ ಹಿಂಪಡೆಯಬೇಕು. ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹಿತಕಾಯುವ ಕೆಲಸಕ್ಕೆ ಮುಂದಾಗಲಿ ಎಂದು ತಾಕೀತು ಮಾಡಿದರು.ಸೊರಬ ಮೂಲಕ ಶಿವಮೊಗ್ಗ ಜಿಲ್ಲಾ ಮಂತ್ರಿ ಮಧು ಬಂಗಾರಪ್ಪಗೂ ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೂ ಸಂಬಂಧವೇ ಇಲ್ಲ. ದಾವಣಗೆರೆ ಜಿಲ್ಲಾ ಮಂತ್ರಿ ಎಸ್.ಎಸ್. ಮಲ್ಲಿಕಾರ್ಜುನಗೆ ಬೆಳಗಾವಿ ಜಿಲ್ಲೆಯ ತಮ್ಮ ಸಕ್ಕರೆ ಕಾರ್ಖಾನೆಯದ್ದೇ ಚಿಂತೆಯಾಗಿದೆ. ಮಂತ್ರಿ ಸ್ಥಾನಕ್ಕೆ ಒಂದೇ ಮನೆಯ ಸಂಸದರು, ಇಬ್ಬರು ಶಾಸಕರು ರಾಜೀನಾಮೆ ನೀಡುವುದಾಗಿ ಕಾಂಗ್ರೆಸ್ ಹೈಕಮಾಂಡ್ಗೆ ಬ್ಲ್ಯಾಕ್ ಮೇಲ್ ಮಾಡಿದ್ದವರು ಈಗ ಭದ್ರಾ ಅಚ್ಚುಕಟ್ಟು ರೈತರ ರಕ್ಷಣೆಗೆ ಕಾಂಗ್ರೆಸ್ ಹೈಕಮಾಂಡ್, ರಾಜ್ಯ ಸರ್ಕಾರದ ಮೇಲೂ ಒತ್ತಡ ಹೇರಲಿ ಎಂದು ಸಲಹೆ ನೀಡಿದರು.
ಸಿದ್ದರಾಮಯ್ಯ ಅವಧಿಯಲ್ಲಿ ಬಲದಂಡೆ ನಾಲೆ ಸಮೀಪವೇ ತರೀಕೆರೆ, ಹೊಸದುರ್ಗ, ಅಜ್ಜಂಪುರ ಭಾಗದ ಕೆರೆಗಳನ್ನು ತುಂಬಿಸಲು, ಕುಡಿಯುವ ನೀರಿಗಾಗಿ ಮುಖ್ಯ ಕಾಲುವೆಯನ್ನೇ ಒಡೆದು, 1 ಟಿಎಂಸಿ ನೀರು ಕೊಟ್ಟಿದ್ದರು. ಈಗ ಭದ್ರಾ ಅಚ್ಚುಕಟ್ಟಿನ ಮಳೆಗಾಲದ ಬೆಳೆಗೆ ನೀರು ಕೊಡ ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಭದ್ರಾ ಮೇಲ್ದಂಡೆ, ವಾಣಿವಿಲಾಸಸಾಗರಕ್ಕೆ ನೀರನ್ನು ಕೊಡಲು ಮುಂದಾಗಿದ್ದಾರೆ. ತಾವು ಸಿಎಂ ಆದ ನಂತರದ ಮೊದಲ ಉಪ ಚುನಾವಣೆ ಹಿರಿಯೂರು ಕ್ಷೇತ್ರಕ್ಕೆ ನಡೆಯಲಿದ್ದು, ಅಲ್ಲಿ ಗೆಲ್ಲಬೇಕೆಂಬ ಲೆಕ್ಕಾಚಾರದಲ್ಲಿ ಭದ್ರಾ ಅಚ್ಚುಕಟ್ಟು ರೈತರಿಗೆ ವಿಷವುಣಿಸಲು ಡಿ.ಕೆ. ಶಿವಕುಮಾರ ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಗ್ಗಟ್ಟಿನಿಂದ ಇದ್ದ ಭದ್ರಾ ಅಚ್ಚುಕಟ್ಟು ರೈತರನ್ನು ಪರಸ್ಪರರಿಗೆ ಎತ್ತಿ ಕಟ್ಟಿ, ಎರಡು ಗುಂಪುಗಳನ್ನಾಗಿ ಮಾಡಿರುವುದು ಕಾಂಗ್ರೆಸ್ ಪಕ್ಷ. ನಮಗೆ ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರೂ ಒಂದೇ. ಮಳೆಗಾಲದ ಬೆಳೆಗೆ ನೀರು ಕೊಡದೇ, ಭದ್ರಾ ಮೇಲ್ದಂಡೆಗೆ 6 ಟಿಎಂಸಿ ನೀರು ಹರಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಇದೊಂದು ಮಾನ, ಮರ್ಯಾದೆಯೇ ಇಲ್ಲದ ಭಂಡಗೆಟ್ಟ ಸರ್ಕಾರವಾಗಿದೆ. ಈಗ ಮಳೆಗಾಲದ ಬೆಳೆಗೇ ನೀರು ಕೊಡದವರು ಮುಂದೆ ಬೇಸಿಗೆಯಲ್ಲಿ ಕೊಡುತ್ತಾರಾ ಎಂಬುದನ್ನು ಅಚ್ಚುಕಟ್ಟು ರೈತರು ಅರಿಯಲಿ. ಈ ಬಗ್ಗೆ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಶಾಸಕರೊಂದಿಗೆ ಚರ್ಚಿಸಿ, ಪಕ್ಷಾತೀತ ಹೋರಾಟವನ್ನು ರೂಪಿಸುವುದಾಗಿ ಬಿ.ಪಿ.ಹರೀಶ ತಿಳಿಸಿದರು.
- - -
* ಇಂದು ಹರಿಹರ ತಾಲೂಕು ಕಚೇರಿ ಮುತ್ತಿಗೆ
- - -