ಕೆಲ ಸಂದರ್ಭ ಕುತಂತ್ರಿಗಳ ತಂತ್ರಕ್ಕೆ ಬಲಿಯಾಗಬೇಕಾಗುತ್ತದೆ

KannadaprabhaNewsNetwork | Published : Jun 22, 2025 1:19 AM

ನಾನು ನೇರವಾದಿ, ಒಳಗೊಂದು, ಹೊರಗೊಂದು ಇಟ್ಟುಕೊಂಡು ರಾಜಕಾರಣ ಮಾಡಿಲ್ಲ. ಕೆಲವರು ಎದುರುಗಡೆ ಒಂದು ಹೊರಗಡೆ ಒಂದು ಮಾತನಾಡುತ್ತಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರಎಷ್ಟೇ ಪ್ರಾಮಾಣಿಕ ಮತ್ತು ಪ್ರಬಲ ವ್ಯಕ್ತಿಯಾಗಿದ್ದರೂ ಕೆಲ ಸಂದರ್ಭ ಕುತಂತ್ರಿಗಳ ಕುತಂತ್ರಕ್ಕೆ ಬಲಿಯಾಗಬೇಕಾಗುತ್ತದೆ. ಆದ್ದರಿಂದಲೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಸೋಲಬೇಕಾಯಿತು ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಹೇಳಿದರು.ಪಟ್ಟಣದ ಮಧುವನಹಳ್ಳಿ ಬಡಾವಣೆಯಲ್ಲಿ ಸಾ.ರಾ. ಮಹೇಶ್ ಅಭಿಮಾನಿಗಳ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರದಲ್ಲಿದ್ದವರ ಅಭಿಮಾನಿ ಬಳಗ ಮತ್ತು ಸಂಘವನ್ನು ಸ್ಥಾಪಿಸುವುದು ಸಹಜ, ಅಧಿಕಾರ ಇಲ್ಲದಿದ್ದರೂ ಅಭಿಮಾನವಿಟ್ಟು ನನ್ನ ಹೆಸರಿನಲ್ಲಿ ಸಂಘವನ್ನು ಸ್ಥಾಪಿಸಿರುವ ನಿಮ್ಮ ಜೊತೆ ಸದಾ ನಾನಿರುತ್ತೇನೆ ಎಂದರು.ನಾನು ನೇರವಾದಿ, ಒಳಗೊಂದು, ಹೊರಗೊಂದು ಇಟ್ಟುಕೊಂಡು ರಾಜಕಾರಣ ಮಾಡಿಲ್ಲ. ಕೆಲವರು ಎದುರುಗಡೆ ಒಂದು ಹೊರಗಡೆ ಒಂದು ಮಾತನಾಡುತ್ತಾರೆ. ಆದರೆ ನಾನು ನೇರವಾಗಿ ಮಾತನಾಡಿ, ಮನಸ್ಸಿನಲ್ಲಿ ಕಲ್ಮಶವಿಟ್ಟುಕೊಳ್ಳದೆ ಇದ್ದುದನ್ನು ಇದ್ದ ಹಾಗೆ ಹೇಳುತ್ತೇನೆ. ನಂತರ ಅದನ್ನು ಮರೆಯುತ್ತೇನೆ ಎಂದು ತಿಳಿಸಿದರು.ಸಂಘ ಸ್ಥಾಪಿಸಿದರೆ ಮತ್ತು ಮನೆ ಕಟ್ಟಿದರೆ ಸಾಲದು, ಮನಸು ವಿಶಾಲವಾಗಿರಬೇಕು. ಅದನ್ನು ತಮ್ಮೇಗೌಡ ಮತ್ತು ಅವರ ಪತ್ನಿ ವೀಣಾ ಶ್ರಮಪಟ್ಟು ಸಂಪಾದನೆ ಮಾಡಿ ಮನೆಯನ್ನು ನಿರ್ಮಿಸಿ ಸಂಘವನ್ನು ಸ್ಥಾಪಿಸಿದ್ದೀರಿ, ನಿಮಗೆ ಶುಭವಾಗಲಿ. ಸಂಘದ ಎಲ್ಲ ನಿರ್ದೇಶಕರು ಮತ್ತು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳ್ಳೆಯ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.ಮೊನ್ನೆ ನಡೆದ ವಿಮಾನ ದುರಂತದಲ್ಲಿ ಎಷ್ಟೋ ಕನಸುಗಳು ಮತ್ತು ಆಸೆಗಳನ್ನಿಟ್ಟುಕೊಂಡು ಪ್ರಯಾಣಿಸುತ್ತಿದ್ದ ಕುಟುಂಬಗಳು ಇಂದು ಇಲ್ಲ, ನಾಳೆ ಏನಾಗುತ್ತದೆ ಎಂಬುದನ್ನು ಹೇಳಲು ಬರುವುದಿಲ್ಲ, ಆದ್ದರಿಂದ ನಾವು ಇರುವಷ್ಟು ದಿನ ಅಲ್ಪ ಸ್ವಲ್ಪವನ್ನಾದರೂ ಸಹಾಯ ಮಾಡಿ ಜನಸಾಮಾನ್ಯರ ಮನಸ್ಸಿನಲ್ಲಿ ಉಳಿಯುವಂತಾಗಬೇಕು ಎಂದರು. ಸೋಲು ಸಹಜ, ಸೋತ ನಂತರ ಗೆಲುವು ಬಂದೇ ಬರುತ್ತದೆ. ಆದ್ದರಿಂದ ನಿಮಗೂ ಒಳ್ಳೆಯ ದಿನಗಳು ಬರಲಿವೆ. ನೀವು ಮಾಡಿದ ದಾನ, ಧರ್ಮ ನಿಮ್ಮ ಜೊತೆಯಲ್ಲಿದ್ದು, ನಿಮ್ಮನ್ನು ಕಾಯುತ್ತದೆ ಎಂದು ತಿಳಿಸಿದರು.ನಿಮ್ಮ ಸಂಘದ ವತಿಯಿಂದ ಮಾಡುವ ಸಹಾಯಕ್ಕೆ ನನ್ನಿಂದ ಏನಾದರೂ ಸಲಹೆ ಮತ್ತು ಸಹಾಯ ಬೇಕಾದಲ್ಲಿ ತಿಳಿಸಬೇಕು. ನಿಮಗೆ ಮತ್ತು ನಿಮ್ಮ ಸಂಘಕ್ಕೆ ಹಾಗೂ ಕುಟುಂಬಕ್ಕೆ ಶುಭವಾಗಲಿ ಎಂದು ಹಾರೈಸಿದರು.ಸಂಘದ ಅಧ್ಯಕ್ಷ ಬಂಗಾರಿ ತಮ್ಮೇಗೌಡ, ಗೌರವಾಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಮಹದೇವ, ಕಾರ್ಯದರ್ಶಿ ರವಿ, ಖಜಾಂಚಿ ಕುಮಾರ್, ನಿರ್ದೇಶಕರಾದ ಮಹೇಶ್, ಮಹದೇವ್, ಗಣೇಶ್, ಲಕ್ಷ್ಮಣ್, ಬೀರೇಶ್, ಕುಮಾರ್, ಲಕ್ಷ್ಮಣ್, ಎ. ವೀಣಾ, ವಿಶ್ವಾಸ್ ಗೌಡ, ಉಜ್ವಲ್ ಗೌಡ, ಪುರಸಭಾ ಸದಸ್ಯರಾದ ಕೆ.ಎಲ್. ಜಗದೀಶ್, ಉಮೇಶ್, ಸಂತೋಷ್ ಗೌಡ, ಮಾಜಿ ಸದಸ್ಯ ಎನ್. ಕುಮಾರ್, ಜೆಡಿಎಸ್ ನಗರ ಕಾರ್ಯದರ್ಶಿ ರುದ್ರೇಶ್, ತಾಲೂಕು ಮಹಿಳಾ ಜೆಡಿಎಸ್ ಅಧ್ಯಕ್ಷೆ ರಾಜಲಕ್ಷ್ಮಿ, ಮುಖಂಡರಾದ ಎಂ.ಡಿ. ದಾಕ್ಷಾಯಿಣಿ, ಭಾಗ್ಯಮ್ಮ, ಮೋಹನಕುಮಾರಿ, ಕುಮಾರ, ಕೇಶವ, ಶ್ರೀನಿವಾಸ್ ಇದ್ದರು.