ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕಡೂರುಮನುಷ್ಯನ ಆರೋಗ್ಯವು ಸುಲಲಿತವಾಗಿರಲು ಯೋಗ, ಧ್ಯಾನ ಮತ್ತು ವಾಯು ಸೇವನೆ ಬಹುಮುಖ್ಯ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಪುರಸಭೆ, ಶ್ರೀ ರಾಘವೇಂದ್ರ ಯೋಗ ಶಿಕ್ಷಣ ಕೇಂದ್ರ, ಆಯುಷ್ ಇಲಾಖೆ, ತಾಲೂಕು ಪಂಚಾಯ್ತಿ, ಆರೋಗ್ಯ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ನಾವು ಬಳಸುವ ಆಹಾರ ಪದಾರ್ಥದಲ್ಲಿ ಇರುವ ರಾಸಾಯನಿಕ ಮಿಶ್ರಣದಿಂದಾಗಿ ಮನುಷ್ಯನ ಆರೋಗ್ಯವು ಹಾಳಾಗುತ್ತಿದೆ. ಯೋಗವನ್ನು ಅಭ್ಯಾಸ ಮಾಡಿ ಅಳವಡಿಸಿಕೊಂಡಲ್ಳಿ ದೈಹಿಕವಾಗಿ ಹಾಗು ಮಾನಸಿಕವಾಗಿ ಉತ್ತಮ ಆರೋಗ್ಯ ಹೊಂದಲು ಸಾದ್ಯ. ಈ ಹಿಂದೆ ನಮ್ಮ ದೇಶಕ್ಕೆ ಮಹಾಮಾರಿ ಕೊರೋನಾ ಆವರಿಸಿದಾಗ ಯೋಗವನ್ನು ಅಳವಡಿಸಿಕೊಂಡವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾದ ಕಾರಣದಿಂದ ಲಕ್ಷಾಂತರ ಜನರು ಬದುಕಿ ಉಳಿದಿದ್ದು ಇತಿಹಾಸ ಎಂದರು.
ಯೋಗದ ಮಹತ್ವವನ್ನು ಅರಿತಿರುವ ಕಾರಣದಿಂದ ನಮ್ಮ ಪುರಸಭೆಯಿಂದ ನಿವೇಶನ ನೀಡಿ ಈಗಾಗಲೇ ಪುರಸಭೆಯಿಂದ ಕಟ್ಟಡಕ್ಕೆ ಮೊದಲ ಹಂತದಲ್ಲಿ 7 ಲಕ್ಷ ರು. ನೀಡುವ ಮೂಲಕ ಯೋಗ ಮಂದಿರದ.ನಿರ್ಮಾಣದ ಕಾರ್ಯ ನಡೆಯುತ್ತಿದೆ. ಪಟ್ಟಣದ ಹಾಗೂ ತಾಲೂಕಿನ ಜನತೆ, ಅಧಿಕಾರಿಗಳು ಮತ್ತು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದರು,ಹಿರಿಯ ಯೋಗಪಟು ಯೋಗ ಸಂಸ್ಥೆಯ ಬೆಂಕಿ ಶೇಖರಪ್ಪ ಮಾತನಾಡಿ, ಯೋಗ ವಿದ್ಯೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಮ್ಮ ಪಟ್ಟಣದ ಹಾಗೂ ಯುವ ಜನರು ಮತ್ತು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸೇರಿ ಅಭ್ಯಾಸ ಮಾಡಿದಲ್ಲಿ ಉತ್ತಮ ಶಿಕ್ಷಣ ಮತ್ತು ಆರೋಗ್ಯ ಹೊಂದಲು ಸಾದ್ಯ. ಪುರಸಭೆಯಿಂದ ಯೋಗ ಮಂದಿರ ನಿರ್ಮಾಣವಾಗುತ್ತಿರುವುದು ಸಂತೋಷದ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಯೋಗ ಸಂಸ್ಥೆಯ ಹಿರಿಯ ಮತ್ತು ಕಿರಿಯ ವಿವಿಧ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು.ಪುರಸಭೆ ಉಪಾಧ್ಯಕ್ಷೆ ಮಂಜುಳಾಚಂದ್ರು, ತಾಲೂಕು ವೈದ್ಯಾಧಿಕಾರಿ ಡಾ.ರವಿಕುಮಾರ್, ಸಾರ್ವಜನಿಕ ಆಸ್ಪತ್ರೆಯ ಡಾ. ಉಮೇಶ್, ಆಯುಷ್ ಇಲಾಖೆಯ ತಾಲೂಕು ವೈದ್ಯಾಧಿಕಾರಿ ಡಾ.ಮಲ್ಲೇಶ್ ದೊಡ್ಡಗುಣಿ, ಆಯುಷ್ ಇಲಾಖೆ ವೈದ್ಯರು, ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಬಿಇಒ ಸಿದ್ದರಾಜನಾಯ್ಕ, ಶ್ರೀರಾಘವೇಂದ್ರ ಯೋಗ ಶಿಕ್ಷಣ ಕೇಂದ್ರದ ಪ್ರಾಚಾರ್ಯ ಬಿ.ಎಂ.ಗಿರೀಶ್, ವಿಜಯಾಗಿರೀಶ್, ವಿವಿಧ ಶಾಲೆಗಳ ದೈಹಿಕ ಶಿಕ್ಷಕರು, ಶಾಲಾಮಕ್ಕಳು, ವಿವಿಧ ಸಂಘ ಸಂಸ್ಥೆಗಳ ಗಣ್ಯರು ಪಾಲ್ಗೊಂಡಿದ್ದರು.