ಕನ್ನಡಪ್ರಭ ವಾರ್ತೆ ಮಡಿಕೇರಿ
ಶಿಶುಕಲ್ಯಾಣ ಸಂಸ್ಥೆಯಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಬಿ.ಕೆ. ರವೀಂದ್ರ ರೈ ಅವರು ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್ ಅವರಿಂದ ಸಿಸಿ ಕ್ಯಾಮರಗಳನ್ನು ಸ್ವೀಕರಿಸಿದರು.
ಈ ಸಂದರ್ಭ ಮಾತನಾಡಿದ ಕಿರಣ್ ಕುಂದರ್, ಅಬುಧಾಬಿ, ದುಬೈನಲ್ಲಿ ಸಕ್ರಿಯವಾಗಿರುವ ಅರೆಭಾಷೆ ಗೌಡ ಕುಟುಂಬಗಳು ಕರ್ಣಯ್ಯನ ಸುನೀಲ್ ಮೂಲಕ ರೋಟರಿ ವುಡ್ಸ್ ಸಹಯೋಗದಲ್ಲಿ ಶಿಶುಕಲ್ಯಾಣ ಸಂಸ್ಥೆಗೆ ಸಿಸಿ ಕ್ಯಾಮರಗಳನ್ನು ನೀಡಿದ್ದಾಗಿ ಮಾಹಿತಿ ನೀಡಿದರು.ರೋಟರಿ ಜಿಲ್ಲೆ 3181ರ ಪಬ್ಲಿಕ್ ಇಮೇಜ್ ಸಮಿತಿ ಉಪಾಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ದಾನಿಗಳು ನೀಡುವ ದಾನ ಅಗತ್ಯವುಳ್ಳವರಿಗೆ ದೊರಕಬೇಕು. ದಾನ ಯಾರಿಂದ ಯಾರಿಗೆ ನೀಡಲ್ಪಡುತ್ತದೆ ಎಂಬುದು ಕೂಡ ಇಂದಿನ ದಿನಗಳಲ್ಲಿ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಪರದೇಶದಲ್ಲಿದ್ದರೂ ಕೊಡಗಿನ ಮೇಲಿನ ಅಭಿಮಾನದಿಂದ ಸಿಸಿ ಕ್ಯಾಮರದ ಅಗತ್ಯತೆ ಮನಗಂಡು ಶಿಶುಕಲ್ಯಾಣ ಸಂಸ್ಥೆಗೆ ಕೊಡುಗೆ ನೀಡಿದ ದಾನಿಗಳ ಮನೋಭಾವ ಶ್ಲಾಘನೀಯವಾದದ್ದು ಎಂದರು.ರೋಟರಿ ವುಡ್ಸ್ ಸಾಮಾಜಿಕ ಕಳಕಳಿಯೊಂದಿಗೆ ಸಾಕಷ್ಟು ಕಾರ್ಯಯೋಜನೆ ಹಮ್ಮಿಕೊಂಡಿದ್ದು, ಸಿಸಿ ಕ್ಯಾಮರ ಕೊಡುಗೆಗೆ ಸಂಸ್ಥೆ ಅಭಾರಿಯಾಗಿದೆ ಎಂದು ಶಿಶುಕಲ್ಯಾಣ ಸಂಸ್ಥೆಯ ಅಧ್ಯಕ್ಷ ಬಿ.ಕೆ. ರವೀಂದ್ರ ರೈ ಹೇಳಿದರು.