ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ವರನಟ ಡಾ. ರಾಜ್ಕುಮಾರ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಚನ ಚಳುವಳಿ ಕ್ರಾಂತಿಕಾರ ಸುಧಾರಣೆಗೆ 12ನೇ ಶತಮಾನದಲ್ಲಿ ಅನೇಕ ವಚನಕಾರರ ಕೊಡುಗೆ ಇದೆ. ಇವರಲ್ಲಿ ಮಡಿವಾಳ ಮಾಚಿದೇವರ ಪಾತ್ರವೂ ಅತ್ಯಂತ ಪ್ರಮುಖವಾಗಿದೆ. ಸಮಾಜದಲ್ಲಿದ್ದ ಜಾತಿ, ಮೂಢನಂಬಿಕೆ ಹೋಗಲಾಡಿಸುವ ನಿಟ್ಟಿನಲ್ಲಿ ವಚನಗಳ ಮೂಲಕ ಅರಿವು ಮೂಡಿಸಿದ ಕಾಲಘಟ್ಟದಲ್ಲಿ ಮಡಿವಾಳ ಮಾಚಿದೇವರ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.ಬಸವಣ್ಣನವರ ಕಾಯಕ ತತ್ವವನ್ನು ಅಕ್ಷರಶಃ ಪಾಲಿಸಿದವರು ಮಡಿವಾಳ ಮಾಚಿದೇವರು. ಅನುಭವ ಮಂಟಪದಲ್ಲಿ ಬಸವಣ್ಣನವರು ಅಂದೇ ಪುರುಷ, ಮಹಿಳೆ, ಜಾತಿ, ಕುಲ ನೋಡದೇ ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸಿದ್ದರು. ಮಡಿವಾಳ ಮಾಚಿದೇವರು ಮಡಿ ಬಟ್ಟೆ ಕಾಯಕ ಮಾಡುತ್ತಿದ್ದರೂ ಸಹ ಭಕ್ತಿ, ನಿಷ್ಠೆ ವಚನಗಳ ಮೂಲಕ ಶ್ರೇಷ್ಠ ಹಿರಿಮೆ ಸಾರಿದವರು ಎಂದು ಹೇಳಿದರು.
ಯಾವುದೇ ದಾರ್ಶನಿಕರು, ವಚನಕಾರರು, ಮಹಾಪುರುಷರನ್ನು ಜಾತಿಗೆ ಸೀಮಿತಗೊಳಿಸಬಾರದು. ಸಮಾಜದ ಸರ್ವರ ಒಳಿತಿಗಾಗಿ ಶ್ರಮಿಸಿದ ಎಲ್ಲರ ಆದರ್ಶವನ್ನು ಪಾಲನೆ ಮಾಡಬೇಕು. ಮನುಕುಲದ ಉದ್ದಾರವನ್ನು ಉದ್ದೇಶವಾಗಿಟ್ಟುಕೊಂಡು ದುಡಿದ ಮಹನೀಯರ ಮಾರ್ಗದರ್ಶನ ಇಂದಿಗೂ ಅಗತ್ಯವಾಗಿದೆ. ಸಮಸಮಾಜ ಸದಾಚಾರ ಸಂಪನ್ನ ವಚನಕಾರರ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.ನಿವೃತ್ತ ಮುಖ್ಯ ಶಿಕ್ಷಕರಾದ ಎ. ಸಿದ್ದಯ್ಯ ಅವರು ಮಾತನಾಡಿ, ಮಡಿವಾಳ ಮಾಚಿದೇವರು ಕಾಯಕಕ್ಕೆ ಹೊಸ ಅರ್ಥ ತಂದುಕೊಟ್ಟವರು. ದೇವರು ಎದುರಾದರು ಕಾಯಕ ನಿಲ್ಲಿಸಬಾರದು. ಕಾಯಕ ನಿಷ್ಠೆ ನಿರಂತರವಾಗಿರಬೇಕು ಎಂಬ ಮಹತ್ವವನ್ನು ತಿಳಿಸಿಕೊಟ್ಟರು. ಅವರ ಜೀವನ ವಿಧಾನ, ಶ್ರಮ, ಶ್ರದ್ದೆ ಇಂದಿಗೂ ಅನುಕರಣೀಯವಾಗಿದೆ. ಅವರ ವಿಚಾರಗಳು ವಚನಗಳ ಸಾರ ಅರ್ಥಪೂರ್ಣವಾಗಿವೆ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ.ಎಸ್. ರಾಜು, ಸಮಾಜದ ಮುಖಂಡರಾದ ರೇವಣ್ಣ, ರಮೇಶ್, ವಿಜಯಕುಮಾರ್, ಗೋವಿಂದರಾಜು, ಸಿದ್ದರಾಜು, ನಾಗರಾಜು, ಇತರರು ಕಾರ್ಯಕ್ರಮದಲಲಿ ಉಪಸ್ಥಿತರಿದ್ದರು.