ಹಕ್ಕುಗಳಿಗಾಗಿ ಮಡಿವಾಳ ಜನಾಂಗ ಒಗ್ಗಟ್ಟಾಗಬೇಕು

KannadaprabhaNewsNetwork | Published : Feb 3, 2024 1:45 AM

ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದೆ ಮಡಿವಾಳ ಜನಾಂಗ ವಂಚಿತರಾಗಿದೆ. ಸಮಾಜದ ಮಕ್ಕಳಿಗೆ ವಿದ್ಯಾಭ್ಯಾಸ ಸಿಗುತ್ತಿಲ್ಲ, ಎಲ್ಲ ಸೌಲಭ್ಯಗಳು ಸಿಗಬೇಕಾದರೆ ಮಡಿವಾಳ ಸಮಾಜವನ್ನು ಎಸ್‌ಸಿ, ಎಸ್‌ಟಿಗೆ ಸೇರಿಸಬೇಕು

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಸಮಾಜದಲ್ಲಿನ ಮೂಡನಂಬಿಕೆಗಳು ಸಾಮಾಜಿಕ ಅಸಮಾನತೆ ಸೇರಿದಂತೆ ಅನೇಕ ಅನಿಷ್ಟ ಪದ್ದತಿಗಳ ವಿರುದ್ದ ಸಾಮಾಜಿಕ ಕ್ರಾಂತಿಯನ್ನುಕೈಗೊಂಡಿದ್ದ ಮಾಡಿವಾಳ ಮಾಚಿದೇವರ ತತ್ವಾದರ್ಶಗಳು ಸಾರ್ವಕಾಲಿಕವಾದುದು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

ಅವರು ಪಟ್ಟಣದಲ್ಲಿ ಮಡಿವಾಳ ಮಾಚಿದೇವರ ಜಯಂತಿ ಹಾಗೂ ಮಡಿವಾಳ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಜಾತಿ ಮುಖ್ಯವಲ್ಲ ಜೀವನ ಮುಖ್ಯ ಎಂದು ತೋರಿಸಿಕೊಟ್ಟವರು ಮಾಚಿದೇವರು ಎಂದರು.

ಹಕ್ಕು ಪಡೆಯಲು ಒಂದಾಗಿ

೧೨ನೇ ಶತಮಾನದಲ್ಲಿ ಕಾಯಕ ನಿಷ್ಠೆ, ದಾಸೋಹದಂತಹ ಮೌಲ್ಯಯುತವಾದ ಕಾಣಿಕೆ ನೀಡಿದ್ದಾರೆ, ಇಂತಹ ಶರಣರು ಮಹಾಪುರುಷರು ಹಾಕಿ ಕೊಟ್ಟ ಮಾರ್ಗದರ್ಶನ ಹಾಗೂ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರಲ್ಲದೆ ಹಿಂದುಳಿದವರು ಒಂದಾಗದಿದ್ದರೆ ನಮ್ಮ ಹಕ್ಕನ್ನು ಪಡೆಯಲು ಸಾಧ್ಯವಿಲ್ಲ. ಹಿಂದುಳಿದವರು ಒಂದಾಗಬೇಕೆಂದು ಹೇಳಿದರು.

ಕ್ಷೇತ್ರದಲ್ಲಿ ನಿಮ್ಮ ಸಮಸ್ಯೆಗಳಿಗೆ ನಾನು ಸ್ಪಂದಿಸಿರುವೆ ನೀವು ನನ್ನ ಜೊತೆಗಿದ್ದರೆ ನಾನು ನಿಮ್ಮ ಜೊತೆಗಿರುವೆ, ಕೆಲವರು ಶ್ರೀರಾಮನ ಹೆಸರೇಳಿಕೊಂಡು ಬರುವರು ಅಂತಹವರಿಗೆ ತಕ್ಕ ಪಾಠ ಕಲಿಸಿ. ಇಲ್ಲದಿದ್ದರೆ ಮೋಸ ಹೋಗುವಿರಿ ಎಂದು ಬಿಜೆಪಿ ಪಕ್ಷದ ನಾಯಕರ ವಿರುದ್ದ ಗುಡುಗಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಎಲ್ಲರೂ ಒಂದಾದರೂ ಕೊನೆಗೆ ಬಿಜೆಪಿ ಅಭ್ಯರ್ಥಿಯೇ ಮಾಯವಾಗಿಬಿಟ್ಟರು. ಹತ್ತು ವರ್ಷಗಳ ನನ್ನ ಸೇವೆಯನ್ನು ಗುರುತಿಸಿ ಮೂರನೇ ಬಾರಿ ಶಾಸಕರಾಗಿ ಚುನಾಯಿಸಿ ಇತಿಹಾಸ ಸೃಷ್ಟಿಸಲಾಗಿದೆ,ಮಡಿವಾಳರ ಸಮಾಜದ ಆರ್ಥಿಕ ಏಳಿಗೆಗೆ ನಾನು ಸದಾ ನಿಮ್ಮೊಂದಿಗಿರುವೆ ಎಂದರು.ಜನಾಂಗಕ್ಕೆ ಮೀಸಲು ಕಲ್ಪಿಸಿಮಡಿವಾಳ ಸಮಾಜದ ತಾಲೂಕು ಅಧ್ಯಕ್ಷ ಗೋವಿಂದಪ್ಪ ಮಾತನಾಡಿ ಶೋಷಿತ ಸಮಾಜ ಸುಧಾರಣೆಗೆ ಶ್ರಮಿಸಿದ ಮಾಚಿದೇವರ ಸಮಾಜ ಇಂದು ಅತ್ಯಂತ ಹಿಂದುಳಿದಿದೆ, ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದೆ ವಂಚಿತರಾಗಿದ್ದಾರೆ, ಸಮಾಜದ ಮಕ್ಕಳಿಗೆ ವಿದ್ಯಾಭ್ಯಾಸ ಸಿಗುತ್ತಿಲ್ಲ, ಹಾಸ್ಟೆಲ್ ವ್ಯವಸ್ಥೆಯಿಲ್ಲ, ಈ ಎಲ್ಲಾ ಸೌಲಭ್ಯಗಳು ಸಿಗಬೇಕಾದರೆ ಮಡಿವಾಳ ಸಮಾಜವನ್ನು ಎಸ್‌ಸಿ ಎಸ್‌ಟಿಗೆ ಸೇರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಈಗಾಗಲೇ ೧೮ರಾಜ್ಯಗಳಲ್ಲಿ ಮಡಿವಾಳ ಸಮಾಜವನ್ನು ಎಸ್‌ಸಿ ಎಸ್‌ಟಿಗೆ ಸೇರಿಸಲಾಗಿದೆ,ಆದ್ದರಿಂದ ರಾಜ್ಯದಲ್ಲಿಯೂ ಸಮಾಜ ಬೆಳವಣಿಗೆ ದೃಷ್ಟಿಯಿಂದ ಹಾಗೂ ಉದ್ಯೋಗ,ಶಿಕ್ಷಣಕ್ಕಾಗಿ ಎಸ್‌ಸಿಎಸ್‌ಟಿಗೆ ಸೇರಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ಸಮಾಜದ ರಾಜ್ಯಧ್ಯಕ್ಷ ನಂಜಪ್ಪ, ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಜಿಲ್ಲಾಧ್ಯಕ್ಷ ಚಲಪತಿ, ಯಲ್ಲಪ್ಪ, ತಹಸೀಲ್ದಾರ್ ರಶ್ಮಿ, ಪುರಸಭೆ ಸದಸ್ಯರಾದ ಶಫಿ, ವೆಂಕಟೇಶ್, ಮುಖಂಡರಾದ ಬೇಕರಿ ಶ್ರೀನಿವಾಸ್, ಪ್ರಕಾಶ್, ಶ್ಯಾಮಮೂರ್ತಿ, ಕೆಇಬಿ ವೆಂಕಟೇಶ್, ಕೃಷ್ಣಪ್ಪ, ರಾಮಾಂಜನಪ್ಪ, ಮುರಳಿ, ನಾರಾಯಣಸ್ವಾಮಿ ಮತ್ತಿತರರು ಇದ್ದರು.