ಪೀಠಾಧಿಪತಿ ಶ್ರೀ ಲಕ್ಷ್ಮಿಸೇನಭಟ್ಟಾರಕ ಮಹಾ ಸ್ವಾಮೀಜಿ ಸಾನ್ನಿಧ್ಯ । ಸಾವಿರಾರು ಭಕ್ತರು ಬಾಗಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಅತಿಶಯ ಕ್ಷೇತ್ರ ಸಿಂಹನಗದ್ದೆ ಬಸ್ತಿಮಠದಲ್ಲಿ ಪೀಠಾಧಿಪತಿ ಶ್ರೀ ಲಕ್ಷ್ಮಿಸೇನಭಟ್ಟಾರಕ ಸ್ವಾಮೀಜಿ ದಿವ್ಯ ಸಾನ್ನಿದ್ಯದಲ್ಲಿ ಶ್ರೀ 1008 ಚಂದ್ರಪ್ರಭ ಸ್ವಾಮಿ ಹಾಗೂ ಮಹಾ ಮಾತೆ ಶ್ರೀ ಜ್ವಾಲಾಮಾಲಿನಿ ಅಮ್ಮನವರ ಮಹಾ ರಥೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು. ಬೆಳಿಗ್ಗೆ ಶ್ರೀ ಕ್ಷೇತ್ರದ ಭಗವಾನ್ ಶ್ರೀ 1008 ಚಂದ್ರಪ್ರಭ ಸ್ವಾಮಿ ತೀರ್ಥಂಕರರ ಬಸದಿಯಲ್ಲಿ 108 ಕಲಶಾಭಿಷೇಕ,13 ವಿವಿಧ ಬಗೆಯ ದ್ರವ್ಯ ಅಭಿಷೇಕ, ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು. ಜ್ವಾಲಾಮಾಲಿನಿ ದೇವಿ ಬಸದಿಯಲ್ಲೂ ಜಲಾಭಿಷೇಕ, ದ್ರವ್ಯ ಅಭಿಷೇಕ, ಶ್ರೀ ಬಲಿ ನಡೆಯಿತು. ಈ ಸಂದರ್ಭದಲ್ಲಿ ಪೀಠಾಧಿಪತಿ ಶ್ರೀ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿಗಳು ಹಾಗೂ ಕಂಬದಹಳ್ಳಿ ಜೈನ ಮಠದ ಭಾನುತೀರ್ತ ಭಟ್ಟಾರಕ ಸ್ವಾಮೀಜಿ ಉಪಸ್ಥಿತರಿದ್ದರು.
ನಂತರ ರಥಾರೋಹಣಕ್ಕೆ ಶ್ರೀ ಜ್ವಾಲಾಮಾಲಿನಿ ಅಮ್ಮನವರಲ್ಲಿ ಪ್ರಸಾದ ಬೇಡಿಕೆ, ನಂತರ ಮಠದ ಆವರಣದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಉತ್ಸವ ಮೂರ್ತಿಯೊಂದಿಗೆ ಭಗವಾನ್ ಶ್ರೀ 1008 ಚಂದ್ರಪ್ರಭ ಸ್ವಾಮಿ ಹಾಗೂ ಶ್ರೀ ಜ್ವಾಲಾಮಾಲಿನಿ ಅಮ್ಮನ ರಥೋತ್ಸವ, ಸಮವಸರಣ ಪೂಜೆ ನಡೆಯಿತು. ನಂತರ ಈಡುಗಾಯಿ ಒಡೆಯಲಾಯಿತು.ಸಂಜೆ ರಾಜಬೀದಿಯಲ್ಲಿ ವಾದ್ಯ, ಡೊಳ್ಳು ಕುಣಿತ, ಚಂಡೆಯೊಂದಿಗೆ ಭಗವಾನ್ ಶ್ರೀ 1008 ಚಂದ್ರಪ್ರಭ ಸ್ವಾಮಿ ಹಾಗೂ ಶ್ರೀ ಜ್ವಾಲಾಮಾಲಿನಿ ಅಮ್ಮನವರ ಮಹಾ ರಥೋತ್ಸವವು ಬಸ್ಸು ನಿಲ್ದಾಣದವರೆಗೆ ನಡೆಯಿತು. ವಾರ್ಷಿಕ ಮಹಾ ರಥೋತ್ಸವದಲ್ಲಿ ಶಿವಮೊಗ್ಗ, ದಕ್ಷಿಣ ಕನ್ನಡ, ಬೆಳಗಾಂ, ಮಹಾರಾಷ್ಟ ಹಾಗೂ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು.
-- ಬಾಕ್ಸ್ --ಮಹಾಭಿಷೇಕ:
ಏಪ್ರಿಲ್ 4 ರ ಗುರುವಾರ ಶ್ರೀ ಚಂದ್ರನಾಥಸ್ವಾಮಿಗೆ ಮಹಾ ಭಿಷೇಕ, ಶ್ರೀಜ್ವಾಲಾಮಾಲಿನಿ ಅಮ್ಮನವರಿಗೆ 1008 ಕಲಶಾಭಿಷೇಕ, ಶ್ರೀ ಮಠದ ಬಸ್ತಿಯಲ್ಲಿರುವ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಭಿಷೇಕ ಪೂಜೆ, ಮಾತೆ ಶ್ರೀ ಜ್ವಾಲಾಮಾಲಿನಿ ಅಮ್ಮನವರಿಗೆ ಅಭಿಷೇಕ, ಅಲಂಕಾರ, ಮಹಾ ಮಂಗಳಾರತಿ, ಅವಭ್ರತ ಸ್ನಾನ, ಪಾದ ಪೂಜೆ, ಸಂಘ ಪೂಜೆ, ದ್ವಜಾರೋಹಣದೊಂದಿಗೆ ವಾರ್ಷಿಕ ಮಹಾ ರಥೋತ್ಸವ ಸಮಾಪನಗೊಳ್ಳಲಿದೆ.