ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ಬಳಿ ಕಾವೇರಿ ನದಿ ತೀರದಲ್ಲಿರುವ ಶ್ರೀಕಾಶಿ ವಿಶ್ವನಾಥ ದೇವಾಲಯ, ಗೋಸಾಯಿಘಾಟ್ನ ಕಾಶಿ ವಿಶ್ವೇಶ್ವರ, ಬಲಮುರಿಯ ಅಗಸ್ತೇಶ್ವರ, ಚಂದ್ರವನದ ಶ್ರೀಚಂದ್ರಮೌಳೇಶ್ವರ, ಪಟ್ಟಣದ ಶ್ರೀಗಂಗಾದರೇಶ್ವರ ಸ್ವಾಮಿ ದೇಗುಲ, ಪಾತಾಳೇಶ್ವರ ದೇಗುಲ, ಮರಳಾಗಾಲ ಮರಡಿಲಿಂಗೇಶ್ವರ ದೇಗುಲ, ಅಲ್ಲಾಪಟ್ಟಣದ ಶ್ರೀಬೀರೇಶ್ವರ ದೇವಾಲಯ ಸೇರಿದಂತೆ ವಿವಿಧೆಡೆಗಳಲ್ಲಿನ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ಜರುಗಿದವು.
ಶನಿವಾರ (ಇಂದು) ಶಿವನ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಹೋಮ ಹವನಾ ಕಾರ್ಯಗಳನ್ನು ನಡೆಸಿ ದೇವರಿಗೆ ಅಭಿಷೇಕ ಸೇರಿದಂತೆ ಮಹಾ ಮಂಗಳಾರತಿಯೊಂದಿಗೆ ದರ್ಶನಕ್ಕೆ ಬರುವ ಭಕ್ತರಿಗೆ ಸಾಮೂಹಿಕ ಅನ್ನಸಂತರ್ಪಣೆ ಪ್ರಸಾದ ನಡೆಯಲಿದೆ.ತಾಲೂಕಿನ ಬೆಳಗೊಳ ಗ್ರಾಮದ ಬಳಿ ಇರುವ ಕಾವೇರಿ ನದಿ ತೀರದ ಬಲಮುರಿ ಶ್ರೀಅಗಸ್ತೇಶ್ವರಸ್ವಾಮಿ ದೇವಾಲಯದಲ್ಲಿ ಈ ಬಾರಿ ಪ್ರಥಮವಾಗಿ ಶಿವರಾತ್ರಿ ಹಬ್ಬದಂದು ರಥೋತ್ಸವ ಆರಂಭಿಸಲಾಗಿದೆ. ದೇವಾಲಯದಲ್ಲಿ ರಥವನ್ನು ಸಹ ಅಣಿಗೊಳಿಸಲಾಗಿದೆ. ಮೈಸೂರಿನ ಮಹರಾಜ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಭಾರತೀನಗರ:ಶಿವರಾತ್ರಿ ಹಬ್ಬದ ನಿಮಿತ್ತ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಲಂಕಾರ, ಹೋಮ-ಹವನ, ಅಭಿಷೇಕ ಸೇರಿದಂತೆ ಇತರೆ ಧಾರ್ಮಿಕ ವಿಧಿವಿಧಾನಗಳು ಭಕ್ತಿಪ್ರಧಾನವಾಗಿ ಜರುಗಿದವು.ಕೆ.ಎಂ.ದೊಡ್ಡಿಯ ಶ್ರೀವೆಂಕಟೇಶ್ವರಸ್ವಾಮಿ, ಶ್ರೀಚಾಮುಂಡೇಶ್ವರಿ ದೇವಾಲಯ, ದೊಡ್ಡರಸಿನಕೆರೆ ಶ್ರೀಸಣ್ಣಕ್ಕಿರಾಯಸ್ವಾಮಿ, ಅಣ್ಣೂರು ಶ್ರೀಬೊಮ್ಮಲಿಂಗೇಶ್ವರ, ಚಿಕ್ಕರಸಿನಕೆರೆ ಶ್ರೀಕಾಲಭೈರವೇಶ್ವರ, ಕಾರ್ಕಹಳ್ಳಿ ಶ್ರೀಬಸವೇಶ್ವರ, ಮಠದದೊಡ್ಡಿಯ ಶ್ರೀಹರಿಹರೇಶ್ವರ, ಶ್ರೀಮತ್ತಿತಾಳೇಶ್ವರ, ಅಂತರವಳ್ಳಿ ಶ್ರೀ ಸಿದ್ದೇಶ್ವರ, ವೈದನಾಥಪುರ ಶ್ರೀ ವೈದ್ಯನಾಥೇಶ್ವರ, ಮಠದಹೊನ್ನಾಯಕನಹಳ್ಳಿ ಶ್ರೀ ಮಂಟೇಸ್ವಾಮಿ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆಗಳು ನಡೆದವು.ಕಣ್ಮನ ತಣಿಸಿದ ಶಿವಲಿಂಗನ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಆಗಮಿಸಿದರು. ಎಲ್ಲೆಲ್ಲಿಯೂ ಭಕ್ತಾಧಿಗಳ ಹರ್ಷೋಧ್ಗಾರ, ದೇವರ ದರ್ಶನ ಪಡೆದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಭಕ್ತರು ಓಂನಮಃ ಶಿವಾಯ ಎಂದು ಪ್ರಾರ್ಥಿಸುತ್ತ ಪೂಜೆ ಸಲ್ಲಿಸುತ್ತಿರುವುದು ಕಂಡುಬಂದಿತು. ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನಡೆಯಿತು.