ಪ್ರತಿ ವರ್ಷದಂತೆ ಈ ವರ್ಷವು ಸಹ ತಾಲೂಕಿನ ಕಲ್ಲೆದೇವರು ಗ್ರಾಮದ ಶ್ರೀ ಕಲ್ಮೇಶ್ವರ ದೇವರ ಮಹಾರಥೋತ್ಸವ ಅತೀ ವಿಜೃಂಭಣೆಯಿಂದ ನೆರವೇರಿತು.
ಬ್ಯಾಡಗಿ: ಪ್ರತಿ ವರ್ಷದಂತೆ ಈ ವರ್ಷವು ಸಹ ತಾಲೂಕಿನ ಕಲ್ಲೆದೇವರು ಗ್ರಾಮದ ಶ್ರೀ ಕಲ್ಮೇಶ್ವರ ದೇವರ ಮಹಾರಥೋತ್ಸವ ಅತೀ ವಿಜೃಂಭಣೆಯಿಂದ ನೆರವೇರಿತು.
ಕಲ್ಲೇದೇವರ ಗ್ರಾಮದಲ್ಲಿನ ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವ ಏ.3ರಿಂದ 7 ರವರೆಗೆ 5 ದಿನಗಳ ಕಾಲ ನಡೆದು ಭಾನುವಾರ ಸಂಪನ್ನಗೊಂಡಿತು. ಏ.3 ದು ಸಕಲ ವಾದ್ಯವೈಭಗಳೊಂದಿಗೆ ಕಲ್ಮೇಶ್ವರ ದೇವರ ದೊಡ್ಡತೇರು ನಡೆದರೆ, ಏ.4ರಂದು ಓಕುಳಿ, ಏ.5ಕ್ಕೆ ಕಲ್ಮೇಶ್ವರ ತರುಣ ಕಲಾನಾಟ್ಯ ಸಂಘದ ವತಿಯಿಂದ ಸಾಮಾಜಿಕ ನಾಟಕ ಪ್ರದರ್ಶನ ನಡೆಯಿತು. ಉಳಿದಂತೆ ಶನಿವಾರ ಸಕಲ ವಾದ್ಯಗಳು, ವೀರಗಾಸೆ, ಭಜನೆಯೊಂದಿಗೆ ದೊಡ್ಡ ತೇರು ಸಕಲ ಸದ್ಭಕ್ತರ ಸಮ್ಮುಖದಲ್ಲಿ ಗ್ರಾಮದೆಲ್ಲೆಡೆ ಸಂಚರಿಸಿ ಮರಳಿ ದೇವಸ್ಥಾನ ತಲುಪಿತು. ಈ ವೇಳೆ ಸಾವಿರಾರು ಸಂಖ್ಯೆಯ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ಸ್ವಾಮಿಯ ದರ್ಶನಾಶೀರ್ವಾದ ಪಡೆದು ಪುನೀತರಾದರು, ಈ ವೇಳೆ ಕಲ್ಲೇಶ್ವರ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಹಾಗೂ ಭಕ್ತರು ಹಾಜರಿದ್ದರು.
ರಂಗೇರಿದ ಕುಸ್ತಿ ಪಂದ್ಯಾವಳಿ: ಜಾತ್ರಾ ಮಹೋತ್ಸವದ ಅಂಗವಾಗಿ ಕಲ್ಲೇದೇವರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಬಸಪ್ಪ ಪುಟ್ಟಪ್ಪ ಕರಿಯಪ್ಪನವರ ಸ್ಮರಣಾರ್ಥ ಮಾ.6ರಿಂದ ಆರಂಭವಾದ ಜಂಗೀ ಬಯಲು ನಿಕಾಲಿ ಕುಸ್ತಿ ಪಂದ್ಯಾವಳಿಗಳು ನೋಡುಗರ ಮನ ತಣಿಸಿತು, ಸುತ್ತ ಮುತ್ತಲಿನ ಗ್ರಾಮಗಳಲ್ಲದೇ ದೂರದ ಊರುಗಳಿಂದ ಆಗಮಿಸಿದ್ದ ನೂರಾರು ಕುಸ್ತಿಪಟುಗಳು ಕಣಕ್ಕಿಳಿದು ತಮ್ಮ ಶಕ್ತಿಯನ್ನು ಪಣಕ್ಕೆ ಹಚ್ಚಿದ್ದು ನೆರೆದಿದ್ದ ಜನರಲ್ಲಿ ಉತ್ಸಾಹ ಹೆಚ್ಚಲು ಕಾರಣವಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.