ಚನ್ನಪಟ್ಟಣ: ರಾಮಾಯಣ ಮಹಾಕಾವ್ಯದ ಮೂಲಕ ವಿಶ್ವ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದ ಮಹಾನ್ ದಾರ್ಶನಿಕ ಮಹರ್ಷಿ ವಾಲ್ಮೀಕಿ ಈ ಆಧುನಿಕ ಕಾಲದಲ್ಲಿಯೂ ಪ್ರಾತಃಸ್ಮರಣೀಯರಾಗಿ ಜನಮಾನಸದಲ್ಲಿ ಆಸೀನರಾಗಿದ್ದಾರೆ ಎಂದು ಶ್ರೀ ಕಾಶಿ ವಿಶ್ವನಾಥಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಟ್ರಸ್ಟ್ ಅಧ್ಯಕ್ಷ ರಾಂಪುರ ರಾಜಣ್ಣ ತಿಳಿಸಿದರು.
ಪಟ್ಟಣದ ಕೋಟೆಯ ಶ್ರೀ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ರತ್ನಾಕರ ಸ್ವಯಂ ಪರಿವರ್ತನೆ ಹೊಂದಿ, ಬಹುಕಾಲದವರೆಗೂ ನೆನಪಿನಲ್ಲಿ ಉಳಿಯುವ ಮಹಾಕಾವ್ಯವನ್ನು ರಚಿಸಿದ್ದಾರೆ. ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ರಾಮಾಯಣ ಮಹಾಕಾವ್ಯವನ್ನು ಓದುವ ಪರಿಪಾಠ ಇತ್ತು. ಅನಕ್ಷರಸ್ಥರೂ ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳ ಕಥೆಗಳನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಈ ವಿಶಿಷ್ಟ ಕೃತಿ ಎಲ್ಲರ ಮೇಲೆ ಬಹುವಾಗಿ ಪ್ರಭಾವ ಬೀರಿದೆ. ಇಂತಹ ಮಹಾಕಾವ್ಯವನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಸ್ಮರಣೆ ಶ್ಲಾಘನೀಯ ಎಂದು ಹೇಳಿದರು.ಸಾಹಿತಿ ಡಾ. ವಿಜಯ್ ರಾಂಪುರ ಮಾತನಾಡಿ, ಹಿರಿಯ ಜೀವಗಳು ಮಕ್ಕಳಿಗೆ ಎಳವೆಯಲ್ಲಿಯೇ ನೈತಿಕ ಮೌಲ್ಯಗಳನ್ನು ತುಂಬಲು ರಾಮಾಯಣ ಮತ್ತು ಮಹಾಭಾರತದ ಉಪ ಕಥೆಗಳನ್ನು ಹೇಳುತ್ತಿದ್ದರು. ರಂಗಭೂಮಿ ಮತ್ತು ಸಾಹಿತ್ಯ ಕ್ಷೇತ್ರ ರಾಮಾಯಣ ಮಹಾಕಾವ್ಯದ ಮೂಲಕ ಪ್ರಭಾವಿತವಾಗಿವೆ. ಮಹಾ ಪರಿವರ್ತನೆ ಹೊಂದಿದ ಮಹರ್ಷಿ ವಾಲ್ಮೀಕಿಯ ಬದುಕು ಹಾಗೂ ೭ ಕಾಂಡಗಳು ಹಾಗೂ ೨೪ ಸಾವಿರ ಶ್ಲೋಕಗಳಿಂದ ಕೂಡಿರುವ ವಾಲ್ಮೀಕಿ ರಾಮಾಯಣ ಭಾರತೀಯ ಸಂಸ್ಕೃತಿಯ ಗೌರವವನ್ನು ಇಮ್ಮಡಿಗೊಳಿಸಿವೆ ಎಂದು ತಿಳಿಸಿದರು.
ಕವಿ ಅಬ್ಬೂರು ಶ್ರೀನಿವಾಸ್ ಮಾತನಾಡಿ, ಹಿಂದೂ ಧರ್ಮದ ಪವಿತ್ರ ಗ್ರಂಥವಾದ ರಾಮಾಯಣ ಮೌಲ್ಯಗಳ ಗಣಿ. ಇಲ್ಲಿ ಬರುವ ಕಥೆಗಳು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿವೆ. ರಾಮಾಯಣ ರಚನೆಯಾಗಿ ಸಾವಿರಾರು ವರ್ಷಗಳು ಕಳೆದರೂ ಇಂದಿಗೂ ತನ್ನ ಮೌಲ್ಯವನ್ನು ಉಳಿಸಿಕೊಂಡಿದೆ ಎಂದರು.ಈ ಸಂದರ್ಭದಲ್ಲಿ ಟ್ರಸ್ಟ್ ಕಾರ್ಯದರ್ಶಿ ಪುಟ್ಟಮಾದಯ್ಯ, ಖಜಾಂಚಿ ಪುಟ್ಟಸ್ವಾಮಿ, ಟ್ರಸ್ಟಿಗಳಾದ ಎಸ್. ಬಿ. ಕೃಷ್ಣ, ಎಂ. ಶ್ಯಾಮ್ ಸುಂದರ್, ಎಂ.ಎಸ್. ಚಂದ್ರಶೇಖರ್, ತಿಟ್ಟಮಾರನಹಳ್ಳಿ ಅನಿಲ್ ಕುಮಾರ್, ಉದ್ಯಮಿ ಯತೀಶ್ ಬಾಬು, ಶಿವಕುಮಾರ್, ಅರ್ಚಕರಾದ ನಾಗೇಂದ್ರ ತಿವಾರಿ, ನಾಗರಾಜ್ ಮುಂತಾದವರು ಹಾಜರಿದ್ದರು.
ಪೊಟೋ೭ಸಿಪಿಟಿ೨: ಚನ್ನಪಟ್ಟಣದ ಕೋಟೆಯ ಶ್ರೀ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.