ಕನ್ನಡಪ್ರಭ ವಾರ್ತೆ ಮೈಸೂರುವಾಲ್ಮೀಕಿ ರಾಮಾಯಣದ ಮಹಾ ಕಾವ್ಯದ ಮೂಲಕ ಜಗತ್ತಿಗೆ ಸ್ವಾತಂತ್ರ್ಯ, ಸಮಾನತೆ, ಸೋದರತೆಯ ಸಂದೇಶಗಳ ಮೂಲಕ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ದಾರ್ಶನಿಕ ವಾಲ್ಮೀಕಿ ಮಹಾಕವಿ ಎಂದು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಕೆ.ಎಸ್. ಸುಂದ್ರೇಶ್ ಅಭಿಪ್ರಾಯಪಟ್ಟರು.ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.ಇಂತಹ ದಾರ್ಶನಿಕ ಮಹನೀಯರ ಕಾರ್ಯಕ್ರಮಗಳನ್ನು ಏರ್ಪಡಿಸುವುದರಿಂದ ಹಿಂದಿನ ತಲೆ ಮಾರಿನ ಇತಿಹಾಸವನ್ನು ಮುಂದಿನ ತಲೆಮಾರಿನವರೆಗೆ ತಿಳಿಸುವುದು ನಮ್ಮ ಜವಾಬ್ದಾರಿ, ಇತಿಹಾಸ ಅರಿವುದರ ಮೂಲಕ ಜೀವನ ಕ್ರಮ, ಜೀವನ ಪದ್ಧತಿ ತಿಳಿದುಕೊಳ್ಳಬಹುದು, ಪ್ರಸ್ತುತ ಡಿಜಿಟಲ್ ಮಾಧ್ಯಮದ ಮೂಲಕ ನಾವು ವಾಲ್ಮೀಕಿ ರಾಮಾಯಣವನ್ನು ವಿದ್ಯಾರ್ಥಿಗಳಿಗೆ, ಸಮಾಜಕ್ಕೆ, ಕೇಳುಗರಿಗೆ ಇನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡಲು ಡಿಜಿಟಲೀಕರಣ ಅವಶ್ಯಕತೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಎಸ್. ರಾಜಶೇಖರ್ ಮೂರ್ತಿ, ಆದಿಕವಿ ವಾಲ್ಮೀಕಿ ರಚಿಸಿರುವ ರಾಮಾಯಣ ಮಹಾಕಾವ್ಯದಲ್ಲಿ ಮನುಷ್ಯನ ಸಾಮಾಜಿಕ ಬದುಕಿನ ನೈಜ ಚಿತ್ರಣಗಳಿವೆ, ವಾಲ್ಮೀಕಿ ಮಹರ್ಷಿ ಶ್ರೇಷ್ಠ ದಾರ್ಶನಿಕರ ಸಾಲಿನಲ್ಲಿ ನಿಲ್ಲುವ ವ್ಯಕ್ತಿ ಎಂದು ತಿಳಿಸಿದರು.