ಕಂಪ್ಲಿಯಲ್ಲಿ ಮಹಿಷ ದಸರಾ ಉತ್ಸವ

KannadaprabhaNewsNetwork | Published : Oct 14, 2023 1:00 AM

ಸಾರಾಂಶ

ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮಹಿಷ ದಸರಾ ಉತ್ಸವದ ಅಂಗವಾಗಿ ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಮಹಿಷಾಸುರನ ಭಾವಚಿತ್ರಕ್ಕೆ ಪುಷ್ಪನಮನ ಕಾರ್ಯಕ್ರಮವು ಶುಕ್ರವಾರ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಕಂಪ್ಲಿ

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮಹಿಷ ದಸರಾ ಉತ್ಸವದ ಅಂಗವಾಗಿ ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಮಹಿಷಾಸುರನ ಭಾವಚಿತ್ರಕ್ಕೆ ಪುಷ್ಪನಮನ ಕಾರ್ಯಕ್ರಮವು ಶುಕ್ರವಾರ ನಡೆಸಲಾಯಿತು.

ಮುಖಂಡರಾದ ಡಾ. ಎ.ಸಿ. ದಾನಪ್ಪ, ಸಿ.ಆರ್. ಹನುಮಂತ, ಜಿ. ರಾಮಣ್ಣ ಮಾತನಾಡಿ, ಮಹಿಷಾಸುರನು ಬೌದ್ಧನ ಸಂದೇಶಗಳನ್ನು ಸಾರುವಂತಹ ಕಾರ್ಯವನ್ನು ಮಾಡುತ್ತಿದ್ದ. ಅಲ್ಲದೇ ಸಮಾನತೆಯ ಪ್ರತಿಪಾದಕನಾಗಿದ್ದ. ಇನ್ನು ಸಾಮಾನ್ಯ ಜನರಿಗೆ ತಿಳಿವಳಿಕೆಯನ್ನು ನೀಡಿ ಸರ್ವರಿಗೂ ಒಳಿತನು ಬಯಸುತ್ತಿದ್ದ ಎಂದರು.

ಸ್ವಾತಂತ್ರ್ಯ ಪೂರ್ವದಿಂದಲೂ ಮಹಿಷಾಸುರನ ಆರಾಧನೆಯನ್ನು ಮಾಡಿಕೊಂಡು ಬರಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ಮಹಿಷಾಸುರನ ಪೂಜೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಇತಿಹಾಸವನ್ನು ತಿರುಚುವ ಕಾರ್ಯವನ್ನು ಮಾಡುತ್ತಿದ್ದಾರೆ. ಇತಿಹಾಸಗಳ ಪ್ರಕಾರ ಮೈಸೂರು ಎಂಬ ಹೆಸರು ಉದ್ಬವಿಸಿದ್ದೆ ಮಹಿಷಾಸುರನಿಂದ. ಇನ್ನು ಮಹಿಷಾಸುರನಿಗೂ ಚಾಮುಂಡಿಗೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಮಹಿಷಾಸುರ ನೈಜ ಕಥೆಯನ್ನು ಕೇಳಿ ತಿಳಿದುಕೊಳ್ಳುವ ಮೂಲಕ ಮಹಿಷಾಸುರನ ಬಗೆಗಿನ ಕೆಟ್ಟ ಕಲ್ಪನೆಯನ್ನು ತೊರೆದುಹಾಕಿ ಜಾಗೃತರಾಗಬೇಕು. ಈ ಬಾರಿಯಂತೆ ಪ್ರತಿವರ್ಷವೂ ಮಹಿಷ ದಸರಾ ಉತ್ಸವವದ ಕಾರ್ಯಕ್ರಮವನ್ನು ಕಂಪ್ಲಿಯಲ್ಲಿ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಸಿ.ಆರ್. ಹನುಮಂತ, ಭಟ್ಟಪ್ರಸಾದ್, ಟಿ.ವಿ. ಸುದರ್ಶನ್ ರೆಡ್ಡಿ, ವೀರಾಂಜಿನಿ, ಮುಖಂಡರಾದ ಪಿ. ಬ್ರಹ್ಮಯ್ಯ, ಬಿ. ಸಿದ್ದಪ್ಪ, ವೆಂಕಟೇಶ್, ಎಚ್. ಕುಮಾರಸ್ವಾಮಿ, ಕೆ. ಲಕ್ಷ್ಮಣ, ಬುಜ್ಜಿಕುಮಾರ್, ಚಂದ್ರ, ರಾಜುಕೊಡಿದಲ್ ಸೇರಿದಂತೆ ಇತರರಿದ್ದರು.

Share this article