ಹಾವೇರಿ: ತ್ಯಾಗ ಮತ್ತು ಬಲಿದಾನದ ಮೂಲಕ ಬದುಕಿನುದ್ದಕ್ಕೂ ದೇಶಪ್ರೇಮ ರೂಢಿಸಿಕೊಂಡು ಹುತಾತ್ಮರಾದ ಮೈಲಾರ ಮಹಾದೇವಪ್ಪ ಅವರು ಯುವ ಸಮೂಹಕ್ಕೆ ಸದಾ ಪ್ರೇರಣಾದಾಯಕ ಶಕ್ತಿ ಎಂದು ಹುತಾತ್ಮ ಮೈಲಾರ ಮಹಾದೇವಪ್ಪ ಅವರ ರಾಷ್ಟ್ರೀಯ ಸ್ಮಾರಕ ಟ್ರಸ್ಟಿ ವಿ.ಎನ್. ತಿಪ್ಪನಗೌಡ್ರ ಅಭಿಪ್ರಾಯಪಟ್ಟರು.
ನಗರದ ವೀರಸೌಧದಲ್ಲಿ ಮೈಲಾರ ಮಹಾದೇವಪ್ಪ ಅವರ ೧೧೩ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಅವರ ತತ್ವಾದರ್ಶಗಳಿಗೆ ಮಾರು ಹೋಗಿದ್ದ ಮೈಲಾರ ಮಹಾದೇವಪ್ಪ ಅವರು ದೇಶ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು. ಬ್ರಿಟಿಷರ ವಿರುದ್ಧದ ನಿರ್ಣಾಯಕ ಹೋರಾಟದಲ್ಲಿ ಪಾಲ್ಗೊಂಡು ಅಖಂಡ ಧಾರವಾಡ ಜಿಲ್ಲೆಯಲ್ಲಿ ಯುವ ಸಮೂಹವನ್ನು ಆಕರ್ಷಿಸಿದ್ದರು. ತಾಯ್ನಾಡಿಗೆ ಹೋರಾಡುತ್ತಿದ್ದ ಸಂದರ್ಭದಲ್ಲಿ ಬ್ರಿಟಿಷರ ಗುಂಡಿಗೆ ಎದೆಯೊಡ್ಡಿ ದೇಶದ ಸ್ವಾತಂತ್ರ್ಯದ ಕನಸು ಕಂಡಿದ್ದರು. ಅಂಥ ಧೀಮಂತ ಹೋರಾಟಗಾರ ಬದುಕಿದ ೩೨ ವರ್ಷದಲ್ಲಿ ನಾಡಿನ ಗಮನ ಸೆಳೆದಿದ್ದರು. ಹುತಾತ್ಮನ ಜನ್ಮದಿನವನ್ನು ಸಹೃದಯಿಗಳು, ಅಭಿಮಾನಿಗಳು ಕೂಡಿ ಆಚರಿಸುತ್ತಿರುವುದು ಅತೀವ ಹೆಮ್ಮೆಯ ಸಂಗತಿ ಎಂದರು.ಗ್ರಾಮ ಸ್ವರಾಜ್ ಅಭಿಯಾನದ ರಾಜ್ಯ ಸಂಚಾಲಕ ಆವರಗೆರೆ ರುದ್ರಮುನಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕೆ ತಮ್ಮ ಜೀವ ಮತ್ತು ಜೀವನವನ್ನು ಮುಡಿಪಿಟ್ಟ ಹುತಾತ್ಮ ಮೈಲಾರ ಮಹಾದೇವಪ್ಪನವರ ತ್ಯಾಗ ಮತ್ತು ಬಲಿದಾನವನ್ನು ನವಪೀಳಿಗೆಗೆ ಮನವರಿಕೆ ಮಾಡಿಕೊಡಬೇಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹಾದೇವಪ್ಪ ಅವರ ಜನ್ಮದಿನವನ್ನು ರಾಜ್ಯಾದ್ಯಂತ ಆಚರಿಸಲು ಮನಸ್ಸು ಮಾಡಬೇಕು. ಜತೆಗೆ ಟ್ರಸ್ಟ್ ಈ ನಿಟ್ಟಿನಲ್ಲಿ ಮುಂದಡಿ ಇಡಬೇಕು ಎಂದರು.
ಇದೇ ಸಂದರ್ಭದಲ್ಲಿ ವೀರಸೌಧದಲ್ಲಿನ ಮೈಲಾರ ಮಹಾದೇವಪ್ಪ ಅವರ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ನಗರದಲ್ಲಿನ ಮೈಲಾರ ಮಹಾದೇವಪ್ಪ ಅವರ ಪುತ್ಥಳಿಗೆ ಹೂಮಾಲೆ ಅರ್ಪಿಸಿ, ಗೌರವ ಸಲ್ಲಿಸಲಾಯಿತು.ಸಾಕ್ಷ್ಯಚಿತ್ರ ನಿರ್ದೇಶಕ ಗೂಳಪ್ಪ ಅರಳಿಕಟ್ಟಿ, ಮೈಲಾರ ಮಹಾದೇವಪ್ಪ ಅವರ ಅಭಿಮಾನಿಗಳಾದ ಹೇಮಣ್ಣ ಗಾಣಿಗೇರ, ಬಸವರಾಜ ಗಾಣಿಗೇರ, ಪರಮೇಶಪ್ಪ ಮೈಲಾರ, ಮಹಾದೇವಪ್ಪ ಮೈಲಾರ, ಸುಭಾಷ್ ಮಡಿವಾಳರ, ಷಣ್ಮುಖಯ್ಯ ಕಿತ್ತೂರುಮಠ, ಮಂಜಯ್ಯ ಅಡವಿಮಠ, ಮಂಜನಗೌಡ ಹೊಸಗೌಡ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ಮಾರುತಿ ಹೊಂಬರಡಿ ಉಪಸ್ಥಿತರಿದ್ದರು.