ಮುಖ್ಯ ರಸ್ತೆ ಅತಿಕ್ರಮಣ ತೆರವು ಕಾರ್ಯ ಜೋರು

KannadaprabhaNewsNetwork | Published : Mar 21, 2025 12:33 AM

ಸಾರಾಂಶ

ಸವದತ್ತಿ ಪಟ್ಟಣದಲ್ಲಿ ಎಪಿಎಂಸಿಯಿಂದ ಕೊಪ್ಪದ ಹನಮಂತದೇವರ ದೇವಸ್ಥಾನದವರೆಗೆ ಅತಿಕ್ರಮಿಸಿ ಅನಧಿಕೃತವಾಗಿ ನಿರ್ಮಿಸಿಕೊಂಡ ಕಟ್ಟಡಗಳನ್ನು ಜೆಸಿಬಿ ಯಂತ್ರದ ಮುಖಾಂತರ ತೆರವುಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಸವದತ್ತಿ

ತಾಲೂಕು ಆಡಳಿತ ಹಾಗೂ ಪುರಸಭೆ ನೇತೃತ್ವದಲ್ಲಿ ಪೊಲೀಸ್ ಇಲಾಖೆಯ ಭದ್ರತೆಯೊಂದಿಗೆ ಸವದತ್ತಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಅತಿಕ್ರಮಿಸಿ ನಿರ್ಮಿಸಿದ ಕಟ್ಟಡ ಮತ್ತು ಗೂಡಂಗಡಿಗಳನ್ನು ಗುರುವಾರ ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ.

ಬೆಳ್ಳಂಬೆಳಗ್ಗೆನೆ ಪಟ್ಟಣದಲ್ಲಿ ಹಲವಾರು ಜೆಸಿಬಿಗಳ ಸದ್ದು ಮಾಡುತ್ತ ಅತಿಕ್ರಮಿಸಿ ನಿರ್ಮಿಸಿದ ಕಟ್ಟಡಗಳ ಮೇಲೆ ಆಕ್ರಮಣ ನಡೆಸಿದವು. ಪಟ್ಟಣದ ಎಪಿಎಂಸಿಯಿಂದ ಕೊಪ್ಪದ ಹನಮಂತದೇವರ ದೇವಸ್ಥಾನದವರೆಗಿನ ಮುಖ್ಯರಸ್ತೆಗೆ ಹೊಂದಿಕೊಂಡು ಅತಿಕ್ರಮಿಸಿ ಅನಧಿಕೃತವಾಗಿ ನಿರ್ಮಿಸಿದ ಎಲ್ಲ ಕಟ್ಟಡಗಳನ್ನು ಜೆಸಿಬಿ ಯಂತ್ರಗಳ ಮುಖಾಂತರ ತೆರವುಗೊಳಿಸಲಾಯಿತು. ಕಳೆದವಾರ ಎಲ್ಲ ಅಂಗಡಿಕಾರರಿಗೆ ಇಲಾಖೆಯಿಂದ ಒಂದು ವಾರದ ಗಡವು ನೀಡಲಾಗಿತ್ತು. ಹೆಸ್ಕಾಂನ ಸಿಬ್ಬಂದಿಯಿಂದ ಒಂದು ದಿನ ಮುಂಚಿತವಾಗಿಯೇ ತೆರವುಗೊಳಿಸುವಂತ ಅಂಗಡಿಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿತ್ತು. ಗಡವು ನೀಡಿದ ಅವಧಿಗೆ ಮುಂಚೆಯೇ ಕೆಲವರು ಬುಧವಾರದಂದೆ ತಮ್ಮ ಅಂಗಡಿಗಳನ್ನು ತೆರವುಗೊಳಿಸಿಕೊಂಡಿದ್ದರು.

ಉಳಿದಂತ ಎಲ್ಲ ಅಂಗಡಿಗಳನ್ನು ಪೊಲೀಸ್ ಭದ್ರತೆಯೊಂದಿಗೆ ಗುರುವಾರ ಬೆಳಗ್ಗೆ 6 ಗಂಟೆಯಿಂದಲೆ ತೆರವುಗೊಳಿಸುವ ಕಾರ್ಯ ಆರಂಭಿಸಲಾಗಿತ್ತು.ತಮ್ಮ ವ್ಯಾಪ್ತಿ ಮೀರಿ ನಿರ್ಮಿಸಿಕೊಂಡ ಖಾಸಗಿ ಮಾಲಿಕತ್ವದ ಕಟ್ಟಡಗಳಿಗೂ ಇಂದು ಕಂಟಕ ಎದುರಾಗಿತ್ತು. ಆಯಾ ಖಾಸಗಿ ಕಟ್ಟಡಗಳ ಮಾಲೀಕರು ಅತಿಕ್ರಮಿಸಿಕೊಂಡ ಜಾಗೆಯನ್ನು ಅಧಿಕಾರಿಗಳು ತೆರವುಗೊಳಿಸುವಲ್ಲಿ ಕಾರ್ಯಪ್ರವೃತರಾಗಿದ್ದರು. ಇನ್ನು ಕಾರ್ಯಾಚರಣೆ ಮುಂದುವರೆದಿದ್ದು, ಮುಖ್ಯ ರಸ್ತೆಗೆ ತೊಂದರೆಯಾಗುವ ನಿಟ್ಟಿನಲ್ಲಿ ನಿರ್ಮಿಸಿಕೊಂಡ ಎಲ್ಲ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ. ತೆರವು ಕಾರ್ಯಾಚರಣೆಯಲ್ಲಿ ಹೆಸ್ಕಾಂ, ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಕಾರ್ಯಾಚರಣೆ ಸಂದರ್ಭದಲ್ಲಿ ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆಗೋಸ್ಕರ 100 ಜನ ಪೊಲೀಸ್ ಸಿಬ್ಬಂದಿಯವರು ತೆರವುಗೊಳಿಸುವ ಸ್ಥಳದಲ್ಲಿ ಕಾರ್ಯನಿರತರಾಗಿದ್ದರು.

ಇಕ್ಕಟ್ಟಾಗಿದ್ದ ರಸ್ತೆಯು ಇಂದು ಸಂಪೂರ್ಣ ಅಗಲವಾಗಿ ಕಾಣುತ್ತಿದ್ದು, ಬರುವಂತ ದಿನಗಳಲ್ಲಿ ಈ ರಸ್ತೆಯ ಅಭಿವೃದ್ಧಿ ಯಾವ ರೀತಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಅತಿಕ್ರಮ ಕಟ್ಟಡಗಳ ತೆರುವುಗೊಳಿಸುವಲ್ಲಿ ಗಡುವಿಗೆ ಮುಂಚೆಯೇ ಶೇ.60ರಷ್ಟು ಜನ ಸ್ವಯಂ ಪ್ರೇರಿತರಾಗಿ ತಾವೆ ತೆರವುಗೊಳಿಸಿಕೊಂಡು ಸಂಪೂರ್ಣ ಸಹಕಾರ ನೀಡಿದ್ದರು. ಬಾಕಿ ಉಳಿದಂತ ಕಟ್ಟಡಗಳನ್ನು ಮತ್ತು ಗೂಡಂಗಡಿಗಳನ್ನು ಜೆಸಿಬಿ ಯಂತ್ರದ ಮುಖಾಂತರ ತೆರವುಗೊಳಿಸಲಾಗಿದೆ. ಕಾರ್ಯಾಚರಣೆಯಲ್ಲಿ ಯಾವುದೆ ಗೊಂದಲಗಳಿಗೆ ಅವಕಾಶ ಕೊಡದೆ ಸಾರ್ವಜನಿಕರ ಸಹಕಾರದೊಂದಿಗೆ ತೆರುವುಗೊಳಿಸುವ ಕಾರ್ಯವನ್ನು ಯಶಸ್ವಿಗೊಳಿಸಲಾಗಿದೆ.

ಮಲ್ಲಿಕಾರ್ಜುನ ಹೆಗ್ಗಣ್ಣವರ, ತಹಸೀಲ್ದಾರ್‌ ಸವದತ್ತಿ

ಬೆಳಗ್ಗೆ 6ರಿಂದಲೇ 6 ಜೆಸಿಬಿ, 8 ಟ್ರ್ಯಾಕ್ಟರ್‌ಗಳ ಮುಖಾಂತರ 80 ಜನ ಪೌರ ಕಾರ್ಮಿಕರು ಸೇರಿದಂತೆ ಪುರಸಭೆಯ ಎಲ್ಲ ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈಗಾಗಲೆ ಶೇ.90ರಷ್ಟು ತೆರವುಗೊಳಿಸುವ ಕಾರ್ಯ ಮುಗಿದಿದ್ದು, ಉಳಿದಂತ ಶೇ.10ರಷ್ಟನ್ನು ಕೂಡಲೆ ತೆರವುಗೊಳಿಸಲಾಗುತ್ತಿದೆ. ತೆರವುಗಳಿಸಿದ ಜಾಗೆಯನ್ನು ಅಳತೆ ಮಾಡಲಾಗುತ್ತಿದ್ದು, ಕೂಡಲೆ ರಸ್ತೆಯನ್ನು ಅಭಿವೃದ್ಧಿಗೊಳಿಸಿ ಅವಶ್ಯಕತೆಯಿದ್ದಲ್ಲಿ ಚರಂಡಿ ಹಾಗೂ ಪುಟ್‌ಪಾತ್‌ ನಿರ್ಮಿಸುವ ಕಾರ್ಯವನ್ನು ಆರಂಭಿಸಲಾಗುತ್ತಿದೆ. ಇದರೊಂದಿಗೆ ವ್ಯವಸ್ಥಿತವಾಗಿ ಅಲ್ಲಲ್ಲಿ ರಸ್ತೆ ವಿಭಜಕಗಳನ್ನು ನಿರ್ಮಿಸಿ ಅಲಂಕಾರಿಕ ವಿದ್ಯುತ್‌ ದೀಪಗಳನ್ನು ಅಳವಡಿಸುವ ಕಾರ್ಯವನ್ನು ಸಹ ಮಾಡಲಾಗುತ್ತದೆ.

ಸಂಗನಬಸಯ್ಯ ಗದಗಿನಮಠ, ಮುಖ್ಯಾಧಿಕಾರಿ ಸವದತ್ತಿ ಯಲ್ಲಮ್ಮಾ ಪುರಸಭೆ

Share this article