ಮಲ್ಪೆ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳನ್ನು ಅರ್ಥ ಮಾಡಿಕೊಂಡು ಮೈಗೂಡಿಸಿ ಹೋರಾಡದಿದ್ದರೆ ದಲಿತರು, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರು ಮುಖ್ಯವಾಹಿನಿಗೆ ಬರಲಾರರು ಎಂದು ಕಾರಂತ ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಹೇಳಿದ್ದಾರೆ.ಮಲ್ಪೆಯಲ್ಲಿ ಅಂಬೇಡ್ಕರ್ ಯುವಸೇನೆ ಆಯೋಜಿಸಿದ ಅಂಬೇಡ್ಕರ್ ಪರಿಬ್ಬಾಣದ ಪ್ರಯುಕ್ತ ‘ಅಂಬೇಡ್ಕರ್ ಕಡೆಗೆ ನಮ್ಮ ನಡಿಗೆ’ಎಂಬ ಕ್ಯಾಂಡಲ್ ಮೆರವಣಿಗೆಯ ಸಮಾರೋಪದಲ್ಲಿ ಅವರು ಮಾತನಾಡಿದರು.ದಲಿತ ಚಿಂತಕ ಜಯನ್ ಮಲ್ಪೆ ಮಾತನಾಡಿ, ನೂರು ವರ್ಷಗಳ ಇತಿಹಾಸ ಇರುವ ಆರ್ಎಸ್ಎಸ್ ಇಂದು ದೇಶದಲ್ಲಿ ಅಧಿಕಾರ ಹಿಡಿದಿದೆ, ಆದರೆ 50 ವರ್ಷಗಳ ಇತಿಹಾಸ ಇರುವ ದಲಿತ ಸಂಘರ್ಷ ಸಮಿತಿ ಐನೂರು ಗುಂಪುಗಳಾಗಿ ಒಡೆದಿದೆ. ಈ ಬಗ್ಗೆ ಯೋಚಿಸದ ದಲಿತ ನಾಯಕರು ಆರ್ಎಸ್ಎಸ್ ಬಗ್ಗೆ ಟೀಕಿಸುತ್ತಿದ್ದಾರೆ, ನಮ್ಮಲ್ಲಿ ಆಡಂಬರ ಇದೆ, ಅಂಬೇಡ್ಕರ್ ಇಲ್ಲವಾಗಿದ್ದಾರೆ, ಇನ್ನಾದರೂ ಅಂಬೇಡ್ಕರ್ ಚಿಂತನೆಗಳನ್ನು ಮೈತುಂಬಿಕೊಂಡರೇ ಮಾತ್ರ ಅಧಿಕಾರ ನಮ್ಮದಾಗುತ್ತದೆ ಎಂದರು.
ದಲಿತ ಹಕ್ಕುಗಳ ಹೋರಾಟ ಸಮಿತಿಯ ಉಡುಪಿ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ದಲಿತರಿಗೆ ಮೀಸಲಾತಿಯಲ್ಲಿ ಅನ್ಯಾಯ ಮಾಡುತ್ತಿದೆ. ದಲಿತ ಚಳವಳಿಗಾರರು ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿಗಾಗಿ ಹೋರಾಟ ನಡೆಸಬೇಕಾಗಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.