ಲೈಬ್ರರಿಗಳಲ್ಲಿ ಸೈಬರ್ ಭದ್ರತೆ, ದತ್ತಾಂಶ ಗೌಪ್ಯತೆ ಕಾಪಾಡಿ

KannadaprabhaNewsNetwork | Published : Dec 14, 2024 12:50 AM

ಸಾರಾಂಶ

ಡಿಜಿಟಲ್‌ ಗ್ರಂಥಾಲಯಗಳಲ್ಲಿ ಸೈಬರ್ ಭದ್ರತೆ ಮತ್ತು, ದತ್ತಾಂಶ ಗೌಪ್ಯತೆ ಬಗ್ಗೆ ಕಾಳಜಿ ವಹಿಸುವುದು ಅತಿ ಮುಖ್ಯವಾಗಿದೆ ಎಂದು ದೆಹಲಿಯ ಡೆಲ್‌ನೆಟ್‌ ಸಂಸ್ಥೆ ನಿರ್ದೇಶಕಿ ಡಾ.ಸಂಗೀತಾ ಕೌಲ್ ಹೇಳಿದ್ದಾರೆ.

- ಶಿವಗಂಗೋತ್ರಿ ದಾವಣಗೆರೆ ವಿವಿ ಕಾರ್ಯಾಗಾರದಲ್ಲಿ ದೆಹಲಿಯ ಡೆಲ್‌ನೆಟ್‌ ಸಂಸ್ಥೆ ನಿರ್ದೇಶಕಿ ಡಾ.ಸಂಗೀತಾ ಕೌಲ್‌ ಸಲಹೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಡಿಜಿಟಲ್‌ ಗ್ರಂಥಾಲಯಗಳಲ್ಲಿ ಸೈಬರ್ ಭದ್ರತೆ ಮತ್ತು, ದತ್ತಾಂಶ ಗೌಪ್ಯತೆ ಬಗ್ಗೆ ಕಾಳಜಿ ವಹಿಸುವುದು ಅತಿ ಮುಖ್ಯವಾಗಿದೆ ಎಂದು ದೆಹಲಿಯ ಡೆಲ್‌ನೆಟ್‌ ಸಂಸ್ಥೆ ನಿರ್ದೇಶಕಿ ಡಾ.ಸಂಗೀತಾ ಕೌಲ್ ಹೇಳಿದರು.

ತಾಲೂಕಿನ ಶಿವಗಂಗೋತ್ರಿಯ ದಾವಣಗೆರೆ ವಿ.ವಿ.ಯಲ್ಲಿ ದೆಹಲಿಯ ಡೆವಲಪಿಂಗ್ ಲೈಬ್ರರಿ ನೆಟ್‌ವರ್ಕ್‌ (ಡೆಲ್‌ನೆಟ್‌) ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗ್ರಂಥಾಲಯಗಳು, ಗ್ರಂಥಪಾಲಕರು ಮತ್ತು ಓದುಗರನ್ನು ಪರಿವರ್ತಿಸುವುದು ಮತ್ತು ಸಬಲೀಕರಗೊಳಿಸುವುದು: ಇತ್ತೀಚಿನ ಪ್ರವೃತ್ತಿಗಳು ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಡಿಜಿಟಲ್ ಗ್ರಂಥಾಲಯಗಳು ವೈವಿಧ್ಯಮಯ ಬಳಕೆದಾರರ ಅಗತ್ಯತೆ ಪೂರೈಸಲು ನಿರಂತರ ಸುಧಾರಣೆಗೆ ಓದುಗರ ಪ್ರತಿಕ್ರಿಯೆ ಬಳಸಿಕೊಳ್ಳಬೇಕು. ಡಿಜಿಟಲ್ ಕೌಶಲ್ಯಗಳೊಂದಿಗೆ ಓದುಗರನ್ನು ಸಬಲಗೊಳಿಸಲು ಗ್ರಂಥಪಾಲಕರು ಆನ್‌ಲೈನ್ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆ ಮೂಲಕ ಡಿಜಿಟಲ್ ವಿಭಜನೆ (ಡಿಜಿಟಲ್ ಡಿವೈಡ್)ಯನ್ನೂ ಪರಿಹರಿಸಬೇಕು. ಗ್ರಂಥಾಲಯಗಳ ಸೇವೆ ಮತ್ತು ಸಂಪನ್ಮೂಲ ಸಂಗ್ರಹಣೆ ಬಳಕೆಗೆ ಡೇಟಾ ವಿಶ್ಲೇಷಣೆ ಬಳಸಿಕೊಳ್ಳುವುದೂ ಅಗತ್ಯ ಎಂದು ತಿಳಿಸಿದರು.

ವಿಶ್ವದ ಶೇ.99ರಷ್ಟು ಮಾಹಿತಿ ಪುಸ್ತಕಗಳಿಂದಲೇ ಸಿಗುತ್ತಿದೆ. ಉಳಿದ ಶೇ.1ರಷ್ಟು ಮಾಹಿತಿ ಮಾತ್ರ ಆನ್ ಲೈನ್‌ನಲ್ಲಿ ಲಭ್ಯವಿದೆ. ಆದರೆ, ಪ್ರಸ್ತುತ ಗ್ರಂಥಾಲಯಗಳು ಕೇವಲ ಪುಸ್ತಕಗಳ ಭಂಡಾರಗಳಾಗಿ ಉಳಿದಿಲ್ಲ. ಅವು ಜ್ಞಾನ ಮತ್ತು ನಾವೀನ್ಯತೆಗಳ ಕ್ರಿಯಾತ್ಮಕ ಕೇಂದ್ರಗಳಾಗಿ ಬದಲಾಗಿವೆ. ತಂತ್ರಜ್ಞಾನದ ತ್ವರಿತ ಪ್ರಗತಿ ಮತ್ತು ಬದಲಾಗುತ್ತಿರುವ ಓದುಗ ಬಳಕೆದಾರರ ನಿರೀಕ್ಷೆಗಳು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರವನ್ನು ಮಾರ್ಪಡಿಸಿದೆ ಎಂದರು.

ಗ್ರಂಥಾಲಯಗಳನ್ನು ಡಿಜಿಟಲ್ ಸಂಗ್ರಹಣೆ ಮಾಡಿ, ನಿರ್ವಹಿಸಲು ಅನುಕೂಲ ಮಾಡಿಕೊಟ್ಟಿವೆ. ಯಾವುದೇ ಸಮಯದಲ್ಲಿ, ಎಲ್ಲಿಯೇ ಇದ್ದರೂ ಜಾಗತಿಕ ಮಟ್ಟದ ಸಂಶೋಧನೆಗಳ ಮಾಹಿತಿಯನ್ನು ಮುಕ್ತವಾಗಿ ಪಡೆಯಲು ಸಹಾಯಕವಾಗಿದೆ. ಗ್ರಂಥಾಲಯಗಳು ಕಲಿಕೆ, ನಾವೀನ್ಯತೆ ಮತ್ತು ಸಾಮಾಜಿಕ ಸಂವಹನಕ್ಕಾಗಿ ಸಹಯೋಗ ಸ್ಥಳಗಳಾಗಿ ವಿಕಸನಗೊಳ್ಳುತ್ತಿದೆ ಎಂದು ಡಾ.ಸಂಗೀತಾ ಕೌಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಾಗಾರ ಉದ್ಘಾಟಿಸಿದ ದಾವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಮಾತನಾಡಿ, ಜ್ಞಾನ ಕೇಂದ್ರಗಳಾದ ಗ್ರಂಥಾಲಯಗಳು 21ನೇ ಶತಮಾನದ ಬೇಡಿಕೆಗಳನ್ನು ಪೂರೈಸುವ ಜೊತೆಗೆ ಓದಿನತ್ತ ವೃತ್ತಿಪರರು, ಬಳಕೆದಾರರನ್ನು ಪರಿವರ್ತಿಸಿ, ಗ್ರಂಥಾಲಯ ಕ್ಷೇತ್ರವನ್ನು ಸಬಲಗೊಳಿಸಬೇಕು. ಗ್ರಂಥ ಪಾಲಕರು ವಿನೂತನ ತಂತ್ರಜ್ಞಾನ, ವೃತ್ತಿ ಕೌಶಲ್ಯ ಅಳವಡಿಸಿಕೊಳ್ಳುತ್ತಿದ್ದಾರೆ ಎಂದರು.

ಈಚಿನ ಕೃತಕ ಬುದ್ಧಿಮತ್ತೆ, ಡೇಟಾ ಅನಲೈಟಿಕ್ಸ್ ಸೇರಿದಂತೆ ಇತರೆ ತಂತ್ರಜ್ಞಾನಗಳು ಕ್ಷೇತ್ರವನ್ನು ತಾಂತ್ರಿಕವಾಗಿ ಸಬಲಗೊಳಿಸುತ್ತಿವೆ. ಸರ್ಕಾರವು ತಂತ್ರಜ್ಞಾನ ಅಭಿವೃದ್ಧಿಗೆ ಸಾವಿರಾರು ಕೋಟಿ ಹಣ ಖರ್ಚು ಮಾಡುತ್ತಿದೆ. ಆದರೆ, ಓದುಗರನ್ನು ಗ್ರಂಥಾಲಯದಲ್ಲಿ ಹಿಡಿದಿಟ್ಟು, ಓದಿನತ್ತ ಆಸಕ್ತಿ ಮೂಡಿಸುವ ಪ್ರಯತ್ನ ವಿಫಲವಾಗಿದೆ. ಇದಕ್ಕೆ ಕಾರಣವೇನೆಂಬ ಬಗ್ಗೆ ಅವಲೋಕಿಸಿ, ಗ್ರಂಥಾಲಯಗಳಿಗೆ ಪುನರುಜ್ಜೀವನ ನೀಡಬೇಕಾಗಿದೆ ಎಂದು ತಿಳಿಸಿದರು.

ಡಿಲ್‌ಬ್ರಿಟ್ ಸಂಸ್ಥೆ ಸಂಸ್ಥಾಪಕ, ಸಿಇಒ ಜಯಣ್ಣ ಬೆಳವಾಡಿ, ಸಹಾಯಕ ಕುಶಾಲ್‌ಗಿರಿ ಗೋಸ್ವಾಮಿ, ಡಾ. ಆರ್.ಶಶಿಧರ್ ಮತ್ತು ದಾವಿವಿ ಸಹಾಯಕ ಗ್ರಂಥಾಲಯಾಧಿಕಾರಿ ಡಾ. ಜಿ.ನೀಲಮ್ಮ ಅವರು ವಿವಿಧ ವಿಷಯಗಳ ಕುರಿತು ಮಾತನಾಡಿದರು. ಗ್ರಂಥಾಲಯಾಧಿಕಾರಿ ಸಿ.ನಾಗರಾಜ, ಸಹಾಯಕ ಪ್ರಾಧ್ಯಾಪಕಿ ಡಾ.ಶಶಿಕಲಾ ಯಾಳಗಿ ಇತರರು ಇದ್ದರು.

- - -

ಕೋಟ್‌ ಪುಸ್ತಕಗಳು, ತಂತ್ರಜ್ಞಾನ ಎಷ್ಟೇ ಮಾಹಿತಿ ನೀಡಿದರೂ ಓದುಗರ ಮನಸ್ಥಿತಿಯೂ ಬದಲಾಗಬೇಕು. ಗ್ರಂಥಾಲಯದಲ್ಲಿ ಕುಳಿತು ಅಧ್ಯಯನ ಮಾಡುವ, ಪುಸ್ತಕಗಳ ಪಟ್ಟಿ ವೀಕ್ಷಿಸುವ ಮನೋಭಾವ ರೂಢಿಸಿಕೊಂಡಾಗ ಜ್ಞಾನಾಭಿರುಚಿಯೂ ಬೆಳೆಯುತ್ತದೆ. ಆದರೆ, ಇತ್ತೀಚಿಗೆ ಪುಸ್ತಕಗಳನ್ನು ಓದುವ ಅಭ್ಯಾಸ ಕಡಿಮೆಯಾಗಿ ತಂತ್ರಜ್ಞಾನಕ್ಕೆ ಆದ್ಯತೆ ನೀಡುತ್ತಿರುವುದು ವಿಷಾದನೀಯ

- ಪ್ರೊ. ಬಿ.ಡಿ.ಕುಂಬಾರ, ಕುಲಪತಿ, ದಾವಿವಿ

- - - -13ಕೆಡಿವಿಜಿ1.ಜೆಪಿಜಿ:

ಕಾರ್ಯಾಗಾರವನ್ನು ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಉದ್ಘಾಟಿಸಿದರು.

Share this article