ಕನ್ನಡಪ್ರಭ ವಾರ್ತೆ ಸಕಲೇಶಪುರ
ಸ್ವಚ್ಛ ಭಾರತ್ ಮಿಷನ್ಗಾಗಿ ಹೆಚ್ಚಿನ ಸಾರ್ವಜನಿಕ ಸಹಭಾಗಿತ್ವವನ್ನು ನಿರ್ಮಿಸುವ ಹಾಗೂ ಸ್ವಚ್ಛತೆಯನ್ನು ಪ್ರತಿಯೊಬ್ಬರ ಕರ್ತವ್ಯವೆಂದು ಬಲಪಡಿಸುವ ಗುರಿಯಿಂದ ''''ಸ್ವಚ್ಛತಾ ಹಿ ಸೇವಾ'''' ಅಭಿಯಾನವನ್ನು ಸಾಗಿಸಲಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮೀಪದ ದೊಡ್ಡ ಕೆರೆ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವರು, ಪ್ರತಿ ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಈ ಅಭಿಯಾನ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 25ರವರೆಗೆ ನಡೆಸಲಾಗುವುದೆಂದು ತಿಳಿಸಿದರು.ಸಕಲೇಶಪುರ ಪುರಸಭೆ ಈ ನಿಟ್ಟಿನಲ್ಲಿ ಪಟ್ಟಣ ಭಾಗದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಿದೆ. ನಮ್ಮ ಉದ್ದೇಶ ಒಂದೇ, ನಮ್ಮ ನಗರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮ ಕರ್ತವ್ಯ. ನಾವೆಲ್ಲರೂ ವಿದೇಶಗಳಲ್ಲಿ ನೋಡಿದಂತೆ ಸ್ವಚ್ಛತೆಯ ಮೇಲೆ ಹೆಚ್ಚು ಪ್ರಾಧಾನ್ಯ ನೀಡಬೇಕು. 140 ಕೋಟಿ ಜನಸಂಖ್ಯೆಯಿರುವ ನಮ್ಮ ದೇಶದಲ್ಲಿ ಪರಿಸರ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯ. ಈ ಅಭಿಯಾನದಲ್ಲಿ ಸಾರ್ವಜನಿಕರ ಸಹಕಾರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.ಪುರಸಭಾ ಅಧ್ಯಕ್ಷೆ ಜ್ಯೋತಿ ರಾಜಕುಮಾರ್ ಮಾತನಾಡಿ, ಜನರಿಗೆ ಕಸವನ್ನು ಸರಿಯಾಗಿ ವಿಂಗಡಿಸಿ ಕಸ ಸಂಗ್ರಹಿಸುವವರ ಕೈಯಲ್ಲಿ ನೀಡಬೇಕು, ಕಸವನ್ನು ಬೀದಿಗೆ ಬಿಸಾಡ ಬಾರದು, ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಬೇಕು. ಇದರಿಂದ ಕಸದ ನಿರ್ವಹಣೆ ಸುಲಭವಾಗಿ ನಡೆಯುತ್ತದೆ. ಪುರಸಭೆಯ ಸಿಬ್ಬಂದಿ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರ ಸಹಕಾರವೇ ಸ್ವಚ್ಛತೆಯನ್ನು ಯಶಸ್ವಿಯಾಗಿ ಮಾಡುವುದಕ್ಕೆ ಮುಖ್ಯ ಎಂದು ಹೇಳಿದರು.ಈ ಸಂದರ್ಭದಲ್ಲಿ ಪುರಸಭೆ ನಾಮಿನಿ ಸದಸ್ಯ ಅಶೋಕ್, ಪುರಸಭಾ ಮುಖ್ಯ ಅಧಿಕಾರಿ ಮಹೇಶ್ವರಪ್ಪ, ಕಂದಾಯ ಅಧಿಕಾರಿ ಪ್ರಕಾಶ್, ಸಿಬ್ಬಂದಿ ನಟರಾಜ್, ಶ್ರೀನಿವಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.