ಬಸವರಾಜ ಹಿರೇಮಠ
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಹೆಚ್ಚು-ಕಡಿಮೆ ಬಡಾವಣೆಗೊಂದು ಉದ್ಯಾನವನಗಳಿದ್ದು, ಅವುಗಳ ನಿರ್ವಹಣೆ ಮಾತ್ರ ಪಾಲಿಕೆಯಿಂದ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಉದ್ಯಾನವನಗಳ ನಿರ್ವಹಣೆಯನ್ನು ಕೆಲವು ಷರತ್ತಿಗೊಳಪಡಿಸಿ ಖಾಸಗಿ ಸಂಘ-ಸಂಸ್ಥೆಗಳಿಗೆ ನೀಡಲು ಪಾಲಿಕೆ ತೀರ್ಮಾನಿಸಿದೆ.
ಆರ್ಥಿಕತೆ ಹಾಗೂ ತೋಟಗಾರಿಕೆ ವಿಭಾಗದ ಅಧಿಕಾರಿಗಳ ಕೊರತೆ ಹಿನ್ನೆಲೆಯಲ್ಲಿ ಉದ್ಯಾನವನಗಳ ನಿರ್ವಹಣೆ ಮಾಡಲು ಮಹಾನಗರ ಪಾಲಿಕೆಗೆ ಸಾಧ್ಯವಾಗುತ್ತಿಲ್ಲ. ಹದಗೆಟ್ಟ ಉದ್ಯಾನವನಗಳ ನಿರ್ವಹಣೆಯಿಂದಾಗಿ ಪಾಲಿಕೆಗೆ ಸಾಕಷ್ಟು ಬಾರಿ ಮುಜುಗರವಾಗಿರುವ ಸಂಗತಿಗಳಾಗಿವೆ. ಜತೆಗೆ ಅವಳಿ ನಗರದಲ್ಲಿ ಇರುವ ಸಾವಿರಕ್ಕೂ ಹೆಚ್ಚು ಉದ್ಯಾನವನಗಳ ನಿರ್ವಹಣೆಗೆ ವಾರ್ಷಿಕ ₹ 3 ಕೋಟಿ ವೆಚ್ಚವಾಗುತ್ತಿದ್ದು, ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ಕಳೆದ ತಿಂಗಳು ನಡೆದ ಸಾಮಾನ್ಯ ಸಭೆಯಲ್ಲಿ ಉದ್ಯಾನವನಗಳನ್ನು ಸಂಘ-ಸಂಸ್ಥೆಗಳಿಗೆ ಹಸ್ತಾಂತರಿಸಲು ತೀರ್ಮಾನಿಸಲಾಗಿದೆ.ನಿರ್ವಹಣೆ ಸಂಸ್ಥೆಯದ್ದು:
ಈ ಯೋಜನೆ ಪ್ರಕಾರ ಆಯಾ ಉದ್ಯಾನವನಗಳ ಸಮೀಪದ ಬಡಾವಣೆಗಳಲ್ಲಿರುವ ಸ್ವ-ಸಹಾಯ ಸಂಸ್ಥೆಗಳು ಅಥವಾ ಮಹಿಳಾ ಸಂಘಗಳು ಅಥವಾ ಖಾಸಗಿ ಸಂಸ್ಥೆಗಳು ಐದು ವರ್ಷದ ಅವಧಿಗೆ ಉದ್ಯಾನವನ ನಿರ್ವಹಿಸಲು ಅವಕಾಶವಿದೆ. ಪಾಲಿಕೆಯಿಂದ ಬೋರ್ವೆಲ್ ಅಥವಾ ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಓಪನ್ ಜಿಮ್ ಅಂತಹ ಮೂಲಭೂತ ಸೌಕರ್ಯ ನೀಡಲಾಗುತ್ತದೆ. ಉಳಿದಂತೆ ಸಾರ್ವಜನಿಕರು ವಾಕಿಂಗ್ ಮಾಡಲು ಅಥವಾ ವಿಶ್ರಾಂತಿ ಪಡೆಯಲು ಬೆಳಿಗ್ಗೆ ಮತ್ತು ಸಂಜೆ ಹೊತ್ತು ಬಾಗಿಲು ತೆರೆಯುವುದು, ಅಲ್ಲಿಯ ಗಿಡಗಳಿಗೆ ನೀರುಣಿಸುವುದು, ಓಪನ್ ಜಿಮ್ ನಿರ್ವಹಣೆ ಹಾಗೂ ಉದ್ಯಾನವನ ಕಾವಲು ಸಹ ಸಂಘ-ಸಂಸ್ಥೆಗಳ ಜವಾಬ್ದಾರಿ.ಆಯಾ ಸಂಸ್ಥೆಯ ಪದಾಧಿಕಾರಿಗಳನ್ನು ಒಳಗೊಂಡು ಆಯಾ ವಾರ್ಡ್ನ ಪಾಲಿಕೆ ಸದಸ್ಯರು, ವಲಯ ಕಚೇರಿ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗಿ ಈ ಮೂಲಕ ಉದ್ಯಾನವನ ನಿರ್ವಹಿಸಲು ಯೋಜನೆ ಮಾಡಲಾಗುತ್ತಿದೆ. ಅಲ್ಲಿ ಸಸಿ ನೆಟ್ಟು ಅವುಗಳನ್ನು ಮಾರಾಟ ಮಾಡುವುದು ಹಾಗೂ ಇತರೆ ಲಾಭದಾಯಕ ಕಾರ್ಯಗಳ ಮೂಲಕ ಆಯಾ ಸಂಸ್ಥೆಗಳು ಈ ಉದ್ಯಾನವನ ನಿರ್ವಹಿಸಬಹುದು. ಆದರೆ, ಅಲ್ಲಿಯ ಭೌತಿಕ ಆಸ್ತಿ-ಪಾಸ್ತಿಗೆ ಯಾವುದೇ ಹಾನಿ ಮಾಡುವಂತಿಲ್ಲ ಎಂದು ಪಾಲಿಕೆ ವಲಯ ಕಚೇರಿ ಸಹಾಯಕ ಅಧಿಕಾರಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.
ಹು-ಧಾ ಅವಳಿ ನಗರದಲ್ಲಿ ಸಾಧನಕೇರಿ, ಕೆಲಗೇರಿ ಸೇರಿದಂತೆ ಹಲವು ಪ್ರಮುಖ ಉದ್ಯಾನವನಗಳು ನಿರ್ವಹಣೆ ಇಲ್ಲದೇ ಅನೈತಿಕ ಚಟುವಟಿಕೆಗಳ ತಾಣವಾಗಿವೆ. ಹೀಗಾಗಿ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ನೀಡಬೇಕೆಂದು ತಮ್ಮ ಸಂಸ್ಥೆಯಿಂದ ಹಲವು ಬಾರಿ ಮನವಿ ಮಾಡಿದ್ದೇನು. ಇದೀಗ ಪಾಲಿಕೆಯು ಈ ವಿಷಯವಾಗಿ ಉತ್ತಮ ನಿರ್ಧಾರ ಕೈಗೊಂಡಿದ್ದು, ಪಾಲಿಕೆ ನಿರ್ಧರಿಸಿದರೆ, ನೇಚರ್ ಫಸ್ಟ್ ಇಕೋ ವಿಲೇಜ್ ವತಿಯಿಂದ ಸಾಧನಕೇರಿಯ ಬಾರೋ ಸಾಧನಕೇರಿ ಹಾಗೂ ಇತರೆ ನಾಲ್ಕೈದು ಉದ್ಯಾನವನಗಳ ನಿರ್ವಹಣೆ ಮಾಡಲು ಸಿದ್ಧರಿದ್ದೇವೆ ಎಂದು ಸಂಸ್ಥೆಯ ಮುಖ್ಯಸ್ಥ ಪಿ.ವಿ. ಹಿರೇಮಠ ಹೇಳಿದರು.ಹು-ಧಾ ಅವಳಿ ನಗರದಲ್ಲಿರುವ ಸಾಕಷ್ಟು ಸಂಖ್ಯೆಯ ಉದ್ಯಾನವನಗಳು ನಿರ್ವಹಣೆ ಇಲ್ಲದೇ ಹಾಳಾಗುತ್ತಿವೆ. ಉದ್ಯಾನವನ ನಮಗೆ ನೀಡಿದರೆ ಚೆನ್ನಾಗಿ ನಿರ್ವಹಿಸುತ್ತೇವೆಂದು ಹಲವು ವರ್ಷಗಳಿಂದ ಹಲವು ಬಡಾವಣೆಗಳ ಸಂಘ-ಸಂಸ್ಥೆಗಳು ಪಾಲಿಕೆಗೆ ಮನವಿ ಮಾಡಿದ್ದವು. ಆರ್ಥಿಕತೆ ಹಾಗೂ ನಿರ್ವಹಣೆ ದೃಷ್ಟಿಯಿಂದ ಪಾಲಿಕೆ ಸಂಘ-ಸಂಸ್ಥೆಗಳಿಗೆ ಉದ್ಯಾನವನ ನಿರ್ವಹಣೆ ನೀಡಲು ತೀರ್ಮಾನಿಸಿದ್ದು ಉತ್ತಮ ಬೆಳವಣಿಗೆ.
ಈರೇಶ ಅಂಚಟಗೇರಿ, ಪಾಲಿಕೆ ಸಭಾನಾಯಕ