ಗದಗ: ಜಿಲ್ಲೆಯಲ್ಲಿ ನಡೆದಿದ್ದ ನಾನಾ ಕಳ್ಳತನ, ದರೋಡೆ, ವಂಚನೆ ಹಾಗೂ ಮೊಬೈಲ್ ಕಳವು ಪ್ರಕರಣಗಳನ್ನು ಜಿಲ್ಲಾ ಪೊಲೀಸರು ಭರ್ಜರಿಯಾಗಿ ಭೇದಿಸಿದ್ದು, ಬರೋಬ್ಬರಿ ₹3 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ, ಸೋಮವಾರ ಒಂದೇ ಸೂರಿನಡಿ, ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ ನೇತೃತ್ವದಲ್ಲಿ ಮೂಲ ವಾರಸುದಾರರಿಗೆ ಹಸ್ತಾಂತರಿದರು.
ಪ್ರಕರಣವಾರು ವಿವರ: ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ 68 ಪ್ರಕರಣಗಳ ಪೈಕಿ 51 ಪ್ರಕರಣಗಳನ್ನು ಭೇದಿಸಿ, 95 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಂದ 16563977(₹1.65 ಕೋಟಿ) ಮೌಲ್ಯದ 1.73 ಕೆಜಿ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಳ್ಳಿ ಆಭರಣ ಹಾಗೂ ನಗದು ವಿಷಯವಾಗಿ ವಿವಿಧ ಪ್ರಕರಣಗಳಲ್ಲಿ ಕಳುವಾಗಿದ್ದ 83.61 ಲಕ್ಷ ಮೌಲ್ಯದ 55.85 ಕೆಜಿ ಬೆಳ್ಳಿ ಪೈಕಿ ₹60.52 ಲಕ್ಷ ಮೌಲ್ಯದ 37.19 ಕೆ.ಜಿ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಇದಲ್ಲದೆ ಕಳುವಾಗಿದ್ದ ₹27.31 ಲಕ್ಷ ನಗದಿನಲ್ಲಿ ₹9.98 ಲಕ್ಷ ನಗದನ್ನು ಪೊಲೀಸರು ರಿಕವರಿ ಮಾಡಿದ್ದಾರೆ.
ಮೋಸ ಮತ್ತು ವಂಚನೆಯಡಿ ದಾಖಲಾಗಿದ್ದ 32 ಪ್ರಕರಣಗಳ ಪೈಕಿ 27 ಪ್ರಕರಣ ಭೇದಿಸಿ 35 ಆರೋಪಿಗಳನ್ನು ಬಂಧಿಸಲಾಗಿದೆ. ವಂಚನೆಗೊಳಗಾಗಿದ್ದ ಒಟ್ಟು ₹1.22 ಕೋಟಿ ಮೊತ್ತದಲ್ಲಿ 37.13 ಲಕ್ಷ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ.ವಾಹನ ಕಳವು: ವಾಹನ ಕಳವು ವಿಷಯದಲ್ಲಿ ದಾಖಲಾದ 36 ಪ್ರಕರಣಗಳ ಪೈಕಿ 23 ಪ್ರಕರಣಗಳನ್ನು ಭೇದಿಸಿದ್ದು, 16 ಆರೋಪಿಗಳನ್ನು ಬಂಧಿಸಲಾಗಿದೆ. ಗದಗ ಹಾಗೂ ನೆರೆ ಜಿಲ್ಲೆಗಳಲ್ಲಿ ಕಳುವಾಗಿದ್ದ ₹17.13 ಲಕ್ಷ ಮೌಲ್ಯದ ಒಟ್ಟು 40 ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಮಾಲೀಕರ ಮೊಗದಲ್ಲಿ ಮಂದಹಾಸ...
ಅಂತಾರಾಜ್ಯ ಕಳ್ಳತನ ಜಾಲ: ಜಿಲ್ಲೆಯ ಸ್ಥಳೀಯ ಪ್ರಕರಣಗಳಷ್ಟೇ ಅಲ್ಲದೆ, ಅಂತಾರಾಜ್ಯ ಕಳ್ಳತನ ಜಾಲವನ್ನೂ ಜಿಲ್ಲಾ ಪೊಲೀಸರು ಭೇದಿಸಿದ್ದಾರೆ. ಕಳವು ಮಾಲು ಹಾಗೂ ಆರೋಪಿಗಳನ್ನು ಪತ್ತೆ ಹಚ್ಚಲು ಹಗಲಿರುಳು ಶ್ರಮಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಇಲಾಖೆಯ ವತಿಯಿಂದ ಸನ್ಮಾನ ಮಾಡಲಾಗುವುದು ಎಂದು ಬೆಳಗಾವಿ ಉತ್ತರ ವಲಯದ ಐಜಿಪಿ ಸಂದೀಪ್ ಪಾಟೀಲ ತಿಳಿಸಿದರು.