ಜಯಂತಿಗಳ ಆಚರಣೆಗೆ ಸಕಲ ಸಿದ್ಧತೆ ಕೈಗೊಳ್ಳಿ: ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಸೂಚನೆ

KannadaprabhaNewsNetwork | Published : Jan 26, 2025 1:31 AM

ಸಾರಾಂಶ

ಛತ್ರಪತಿ ಶಿವಾಜಿ ಜಯಂತಿಯನ್ನು ಸಮುದಾಯದ ಕೋರಿಕೆಯ ಪ್ರಕಾರ ಫೆ. 19ರಂದು ಬೆಳಗ್ಗೆ 10.30 ಗಂಟೆಗೆ ಕಾರವಾರದ ನಗರ ಸಭೆಯ ಉದ್ಯಾವನದಲ್ಲಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಯಿತು.

ಕಾರವಾರ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಎಲ್ಲ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದು, ಅದೇ ರೀತಿ ಫೆಬ್ರವರಿ ತಿಂಗಳಲ್ಲಿ ನಡೆಯುವ ಛತ್ರಪತಿ ಶಿವಾಜಿ ಜಯಂತಿ ಸೇರಿದಂತೆ ವಿವಿಧ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಸೂಚಿಸಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಫೆಬ್ರವರಿ ತಿಂಗಳಲ್ಲಿ ನಡೆಯುವ ಛತ್ರಪತಿ ಶಿವಾಜಿ ಜಯಂತಿ ಸೇರಿದಂತೆ ವಿವಿಧ ಜಯಂತಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಎಲ್ಲ ಜಯಂತಿಗಳನ್ನು ಎಲ್ಲ ಸಮುದಾಯವರು ಒಟ್ಟುಗೂಡಿ ಆಚರಿಸಬೇಕು ಎಂದರು.

ಫೆ. 1ರಂದು ಮಡಿವಾಳ ಮಾಚಿದೇವ ಜಯಂತಿ, ಫೆ. 5ರಂದು ಸವಿತಾ ಮಹರ್ಷಿ ಜಯಂತಿ, ಫೆ. 10ರಂದು ಕಾಯಕ ಶರಣರ ಜಯಂತಿ, ಫೆ. 15ರಂದು ಸಂತ ಸೇವಾಲಾಲ್ ಜಯಂತಿ ಹಾಗೂ ಫೆ. 20ರಂದು ಸಂತ ಕವಿ ಸರ್ವಜ್ಞ ಜಯಂತಿಯನ್ನು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಿಗದಿತ ದಿನಾಂಕದಂದು ಬೆಳಗ್ಗೆ 10.30 ಗಂಟೆಗೆ ಆಚರಿಸಲು ತೀರ್ಮಾನಿಸಲಾಯಿತು.

ಛತ್ರಪತಿ ಶಿವಾಜಿ ಜಯಂತಿಯನ್ನು ಸಮುದಾಯದ ಕೋರಿಕೆಯ ಪ್ರಕಾರ ಫೆ. 19ರಂದು ಬೆಳಗ್ಗೆ 10.30 ಗಂಟೆಗೆ ಕಾರವಾರದ ನಗರ ಸಭೆಯ ಉದ್ಯಾವನದಲ್ಲಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ, ವಿವಿಧ ಇಲಾಖೆಯ ಅಧಿಕಾರಿಗಳು, ಮುಖಂಡರು ಇದ್ದರು.ಹಸೆ ಚಿತ್ತಾರದ ಕಲಾವಿದ ದಂಪತಿಗಳಿಗೆ ದೆಹಲಿಗೆ ಆಹ್ವಾನ

ಸಿದ್ದಾಪುರ: ದೇಶದ ರಾಜಧಾನಿ ದೆಹಲಿಯ ಕರ್ತವ್ಯಪಥದಲ್ಲಿ ಜ. 26ರಂದು ಜರುಗಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ತಾಲೂಕಿನ ಹಸವಂತೆಯ ಹಸೆ ಚಿತ್ತಾರ ಕಲಾವಿದ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಈಶ್ವರ ನಾಯ್ಕ ಹಸವಂತೆ ಹಾಗೂ ಅವರ ಪತ್ನಿ ರಾಜ್ಯಪ್ರಶಸ್ತಿ ಪುರಸ್ಕೃತೆ ಸರಸ್ವತಿ ಈಶ್ವರ ನಾಯ್ಕ ಅವರನ್ನು ರಾಷ್ಟ್ರಪತಿಗಳ ಭವನದಿಂದ ವಿಶೇಷವಾಗಿ ಆಮಂತ್ರಿಸಲಾಗಿದೆ. ಈ ಆಹ್ವಾನ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಕೃಷಿ ಪರಂಪರೆಯ ಜೀವನಾಡಿಯಾದ ಕರಕುಶಲ ಹಸೆ ಚಿತ್ತಾರ ಕಲಾವಿದರಿಗೆ ಸಂದಿರುವ ಆಹ್ವಾನವೆಂದು ಈಶ್ವರ ನಾಯ್ಕ ತಿಳಿಸಿದ್ದಾರೆ.

Share this article