ಪ್ರಜಾಪ್ರಭುತ್ವ ದಿನಾಚರಣೆಯನ್ನು ಕಲಾತ್ಮಕ ಹಬ್ಬವಾಗಿಸಿ: ಡಿಸಿ ಗುರುದತ್ತ ಹೆಗಡೆ

KannadaprabhaNewsNetwork | Published : Sep 5, 2024 12:31 AM

ಸಾರಾಂಶ

ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪೂರ್ವಸಿದ್ಧತೆ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಂವಿಧಾನದ ಬಗ್ಗೆ ಅರಿವು ಮೂಡಿಸಲು ಸೆ.15ರಂದು ಮಾನವ ಸರಪಳಿ ರಚನೆ ಮಾಡುವ ಮೂಲಕ ಹಬ್ಬದ ರೀತಿಯಲ್ಲಿ, ಅರ್ಥಪೂರ್ಣವಾಗಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲು ಅಗತ್ಯವಾದ ಎಲ್ಲ ರೀತಿಯ ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪೂರ್ವಸಿದ್ಧತೆ ಸಭೆಯಲ್ಲಿ ಅವರು ಮಾತನಾಡಿ, ಸೆ.15ರಂದು ರಾಜ್ಯದಾದ್ಯಂತ ಏಕಕಾಲದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಮಾನವ ಸರಪಳಿ ರಚಿಸುವ ಮೂಲಕ ಆಚರಿಸಲಾಗುವುದು. ನಮ್ಮ ಜಿಲ್ಲೆಗೆ ಮಾರ್ಗನಕ್ಷೆ ನೀಡಿರುವನ್ವಯ ಭದ್ರಾವತಿ ತಾಲ್ಲೂಕಿನ ಕಾರೇಹಳ್ಳಿಯಿಂದ ಪ್ರಾರಂಭಿಸಿ ಶಿವಮೊಗ್ಗ ನಗರದ ಮೂಲಕ ಶಿವಮೊಗ್ಗ ತಾಲ್ಲೂಕಿನ ಮಡಿಕೆ ಚೀಲೂರುವರೆಗೆ ಸುಮಾರು 60 ಕಿ.ಮೀ. ಮಾನವ ಸರಪಳಿ ರಚಿಸಬೇಕಾಗಿದೆ ಎಂದು ತಿಳಿಸಿದರು.ಮಾನವ ಸರಪಳಿ ರಚನೆಗೆ 50 ರಿಂದ 55 ಸಾವಿರ ಜನರ ಅವಶ್ಯಕತೆಯಿದ್ದು, ಈ ಮಾರ್ಗದ 8 ಪಂಚಾಯಿತಿಗಳಿಗೆ ನೋಡಲ್ ಅಧಿಕಾರಿ ನೇಮಿಸಿ, ಈ ಮಾರ್ಗದಲ್ಲಿ ಅಗತ್ಯವಾದ ಜನರನ್ನು ವ್ಯವಸ್ಥೆ ಮಾಡಬೇಕು. ಮೊದಲೇ ಸ್ಥಳ ಪರಿಶೀಲನೆ ಮಾಡ ಬೇಕು. ಗ್ರಾಮ ಲೆಕ್ಕಿಗರು, ಪಿಡಿಓ, ಶಿಕ್ಷಕರು, ಆಶಾ, ಅಂಗನವಾಡಿ ಕಾರ್ಯಕರ್ತರು ಇತರೆ ಸಿಬ್ಬಂದಿಗಳನ್ನು ನಿಯೋಜಿಸಿ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.

ಭದ್ರಾವತಿ ಮತ್ತು ಶಿವಮೊಗ್ಗ ತಾಲ್ಲೂಕುಗಳ ಬಿಇಓಗಳು ಸಮನ್ವಯತೆ ಸಾಧಿಸಿ ವಿದ್ಯಾರ್ಥಿಗಳನ್ನು ಸೇರಿಸುವುದು ಸೇರಿ ದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಡಿಡಿಪಿಐ, ಡಿಡಿಪಿಯು, ಬಿಇಓ ಗಳು ಅನುದಾನಿತ, ಅನುದಾನ ರಹಿತ ಮತ್ತು ಸರ್ಕಾರಿ ಶಾಲಾ-ಕಾಲೇಜು ಮುಖ್ಯ ಶಿಕ್ಷಕರು, ಪ್ರಾಂಶುಪಾಲರ ಸಭೆ ನಡೆಸಿ, ವಿದ್ಯಾರ್ಥಿಗಳನ್ನು ನಿಗದಿತ ಸಮಯಕ್ಕೆ ಕರೆತರುವ ವ್ಯವಸ್ಥೆ ಮಾಡಬೇಕು ಎಂದರು.

ಸೆ.15ರಂದು ಬೆಳಗ್ಗೆ 9.30ಕ್ಕೆ ಮಾನವ ಸರಪಳಿಯನ್ನು ರಚಿಸಲಾಗುವುದು. ಕಾರ್ಯಕ್ರಮದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರಿಂದ ಅಂದು ಗಿಡ ನೆಡಲಾಗುವುದು.

ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ, ನಗರದಲ್ಲಿ, ಸ್ಥಳಾವಕಾಶ ಇರುವೆಡೆ ಸಸಿಗಳನ್ನು ನೆಡಲಾಗುವುದು. ಸಸಿಗಳನ್ನು ನೆಡುವ ಮುನ್ನವೇ ಅಲ್ಲಿ ಸಿದ್ದತೆ ಮಾಡಿಕೊಳ್ಳಬೇಕು. ಸಸಿ ನೆಟ್ಟ ನಂತರ ಒಂದೆರಡು ವರ್ಷಗಳ ಕಾಲ ಗಿಡಗಳ ರಕ್ಷಣೆ ಮಾಡಬೇಕು. ಮಾರ್ಗದ ಹತ್ತಿರ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಬೇಕು ಎಂದು ತಿಳಿಸಿದರು.ಸ್ಥಳೀಯ ಸಂಸ್ಥೆಳ ಜನ ಪ್ರತಿನಿಧಿಗಳು, ಸ್ತ್ರಿಶಕ್ತಿ, ಸ್ವಸಹಾಯ ಮಹಿಳಾ ಗುಂಪುಗಳು, ಆಶಾ, ಅಂಗನವಾಡಿ ಕಾರ್ಯಕರ್ತೆ ಯರು, ವಿವಿಧ ಸಂಘಟನೆಗಳು, ಸರ್ಕಾರಿ ಅಧಿಕಾರಿ, ನೌಕರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸ್ಕೌಟ್ಸ್ ಗೈಡ್ಸ್, ಎನ್‌ಎಸ್‌ಎಸ್, ಎನ್‌ಸಿಸಿ ಅಭ್ಯರ್ಥಿಗಳು ಸೇರಿದಂತೆ ಎಲ್ಲ ಅಧಿಕಾರಿಗಳು ಮಾನವ ಸರಪಳಿ ನಿರ್ಮಿಸುವ ಕಾರ್ಯದಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಬೇಕು. ಮಾರ್ಗನಕ್ಷೆಯಂತೆ ಪಂಚಾಯತ್ ವಾರು, ನಗರದಲ್ಲಿ ವಾರ್ಡ್‌ವಾರು ಜನರನ್ನು ಸೇರಿಸಲು ಸಮರ್ಪಕವಾದ ಯೋಜನೆ ರೂಪಿಸಿಕೊಳ್ಳಬೇಕು. ಮಹಾನಗರಪಾಲಿಕೆ, ಸ್ಥಳೀಯ ಸಂಸ್ಥೆಗಳು, ಅಧಿಕಾರಿಗಳನ್ನೊಳಗೊಂಡಂತೆ ಎಲ್ಲರೂ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಬೇಕು. ಸ್ಥಳೀಯ ಉಡುಗೆ-ತೊಡುಗೆ ಗಳೊಂದಿಗೆ ಕಲಾತ್ಮಕವಾಗಿ ಜನರು ಈ ಹಬ್ಬದಲ್ಲಿ ಪಾಲ್ಗೊಳ್ಳಬಹುದು ಎಂದರು.ಪ್ರಶಸ್ತಿ : ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡ, ಶಿಸ್ತುಬದ್ದವಾಗಿ, ಸೃಜನಾತ್ಮಕವಾಗಿ ಪಾಲ್ಗೊಂಡ ಸ್ತ್ರೀಶಕ್ತಿ ಗುಂಪುಗಳು, ಶಾಲಾ-ಕಾಲೇಜುಗಳಿಗೆ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.ಸಭೆಯಲ್ಲಿ ಜಿ.ಪಂ. ಸಿಇಒ ಎನ್.ಹೇಮಂತ್, ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್, ಜಿ.ಪಂ ಸಿಪಿಓ ಗಾಯತ್ರಿ, ಮಾಜಿ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಿ. ಮಲ್ಲೇಶಪ್ಪ, ತಹಶೀಲ್ದಾರ್ ಗಿರೀಶ್ ಮತ್ತಿತರರು ಇದ್ದರು.

Share this article