ಎಚ್‌ಪಿವಿ ಲಸಿಕಾ ಅಭಿಯಾನ ಯಶಸ್ವಿಗೊಳಿಸಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

KannadaprabhaNewsNetwork |  
Published : Mar 12, 2026, 01:15 AM IST
ಸಭೆಯಲ್ಲಿ ಎಚ್‌ಪಿವಿ ಲಸಿಕಾಕರಣ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಲಾಯಿತು. | Kannada Prabha

ಸಾರಾಂಶ

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಮೀನಾಕ್ಷಿ ಕೆ.ಎಸ್. ಮಾತನಾಡಿ, ಎಚ್‌ಪಿವಿ ಲಸಿಕಾಕರಣ ಕಾರ್ಯಕ್ರಮ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, 14ರಿಂದ 15 ವರ್ಷದ ಎಲ್ಲ ಹೆಣ್ಣುಮಕ್ಕಳಿಗೂ ಲಸಿಕೆಯನ್ನು ನೀಡಲಾಗುತ್ತದೆ ಎಂದರು.

ಗದಗ: ಜಿಲ್ಲೆಯ ಯಾವುದೇ ಹೆಣ್ಣು ಮಕ್ಕಳು ಎಚ್‌ಪಿವಿ ಲಸಿಕೆಯಿಂದ ವಂಚಿತರಾಗಬಾರದು. ಲಸಿಕೆಯ ಬಗ್ಗೆ ಸೂಕ್ತ ಕ್ರಿಯಾಯೋಜನೆ ತಯಾರಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಎಚ್‌ಪಿವಿ(ಹ್ಯೂಮನ್ ಪ್ಯಾಪಿಲೋಮ ವೈರಸ್ ಲಸಿಕೆ) ಲಸಿಕಾಕರಣ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಮೀನಾಕ್ಷಿ ಕೆ.ಎಸ್. ಮಾತನಾಡಿ, ಎಚ್‌ಪಿವಿ ಲಸಿಕಾಕರಣ ಕಾರ್ಯಕ್ರಮ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, 14ರಿಂದ 15 ವರ್ಷದ ಎಲ್ಲ ಹೆಣ್ಣುಮಕ್ಕಳಿಗೂ ಲಸಿಕೆಯನ್ನು ನೀಡಲಾಗುತ್ತದೆ. ನಮ್ಮ ಜಿಲ್ಲೆಯಲ್ಲಿ 14ರಿಂದ 15 ವರ್ಷದ ಹೆಣ್ಣುಮಕ್ಕಳು ಒಟ್ಟು 11415 ಫಲಾನುಭವಿಗಳಿದ್ದು, ಎಲ್ಲ ಫಲಾನುಭವಿಗಳು ಈ ಲಸಿಕೆಯನ್ನು ಪಡೆದು ಗರ್ಭಕಂಠದ ಕ್ಯಾನ್ಸರ್‌ನಿಂದ ರಕ್ಷಣೆ ಪಡೆಯಬಹುದಾಗಿದೆ ಹಾಗೂ ಶಾಲೆಯಲ್ಲಿ ಪಾಲಕರ ಸಭೆ ಕರೆದು ತಮ್ಮ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿಕೊಳ್ಳಲು ಮನವರಿಕೆ ಮಾಡಲಾಗುವುದು ಎಂದರು.ಈ ವೇಳೆ ಎಚ್‌ಪಿವಿ ಲಸಿಕಾಕರಣ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಜಿ., ಜಿಮ್ಸ್‌ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಿ.ಸಿ. ಕರಿಗೌಡರ, ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ ಸೇರಿದಂತೆ ಇತರರು ಇದ್ದರು. ಡಿಎಚ್‌ಒ ಡಾ. ಎಸ್.ಎಸ್. ನೀಲಗುಂದ ಸ್ವಾಗತಿಸಿದರು.ಇಂದು ಬೆನಕೊಡೇಶ್ವರ ರಥೋತ್ಸವ

ಗದಗ: ತಾಲೂಕಿನ ಬೆನಕನಕೊಪ್ಪ ಗ್ರಾಮದ ಚಂದ್ರಶೇಖರ ಸ್ವಾಮಿಗಳ ಜನ್ಮದಿನದ ಪ್ರಯುಕ್ತ ಬೆನಕೊಡೇಶ್ವರ ದೇವಸ್ಥಾನದ ಗೋಪುರ ಲೋಕಾರ್ಪಣೆ, ಕಳಸಾರೋಹಣ ಹಾಗೂ 6ನೇ ವರ್ಷದ ಜಾತ್ರಾ ಮಹೋತ್ಸವ ಮಾ. 11ರಿಂದ ಆರಂಭವಾಗಿದ್ದು, ಮಾ. 12ರಂದು ಸಂಜೆ 5ಕ್ಕೆ ಬ್ರಹ್ಮ ರಥೋತ್ಸವ ಜರುಗಲಿದೆ.ಗುರುವಾರ ಬೆಳಗ್ಗೆ 6ಕ್ಕೆ ಬೆನಕೊಡೇಶ್ವರ ಹಾಗೂ ಸದ್ಗುರುಗಳ ಪಾದುಕೆಗೆ ರುದ್ರಾಭಿಷೇಕ ನಡೆಯಲಿದೆ. ನಂತರ ಚಂದ್ರಶೇಖರ ಸ್ವಾಮಿಗಳ ಜನ್ಮದಿನ ಹಾಗೂ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಮಹಾಪ್ರಸಾದ ಜರಗುವುದು.ಕಾರ್ಯಕ್ರಮದ ಸಾನ್ನಿಧ್ಯವನ್ನು ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು, ಶಿವಾನಂದ ಸ್ವಾಮಿಗಳು, ಅಭಿನವ ನಾಗಲಿಂಗ ಸ್ವಾಮಿಗಳು ಹಾಗೂ ಡಾ. ಮಹಾಂತ ಬಸವಲಿಂಗ ಸ್ವಾಮಿಗಳು ವಹಿಸುವರು. ರಾತ್ರಿ 10.30ಕ್ಕೆ ಗದುಗಿನ ಶಿಗ್ಲಿ ಇವೆಂಟ್ಸ್‌ನವರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೆಹರು ಮಾರ್ಕೆಟ್‌ನಲ್ಲಿ ವ್ಯಾಪಾರಕ್ಕೆ ಅಡ್ಡಿ ಮಾಡದಂತೆ ಮನವಿ
ಖಾಸಗಿ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲು ಆಗ್ರಹ