ಕಳೆದ ಬಾರಿ ಸಮಸ್ಯೆಗಳು ಮರಕಳಿಸದಂತೆ ನಿಗಾವಹಿಸಿ

KannadaprabhaNewsNetwork |  
Published : Jun 29, 2025, 01:35 AM IST
ಗೋಕಾಕ ನಗರದ ಮಹಾಲಕ್ಷ್ಮೀ ಸಭಾ ಭವನದಲ್ಲಿ ಗೋಕಾಕ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು. | Kannada Prabha

ಸಾರಾಂಶ

ಗ್ರಾಮ ದೇವತೆಯರ ಜಾತ್ರೆ ಐತಿಹಾಸಿಕ ಜಾತ್ರೆಯಾಗಿದೆ. ಲಕ್ಷಾಂತರ ಜನ ಜಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, ಜಾತ್ರಾ ಸಮಯದಲ್ಲಿ ಕಳೆದ ಬಾರಿಯಾದ ಸಮಸ್ಯೆಗಳು ಮರಕಳಿಸದಂತೆ ನಿಗಾವಹಿಸುವುದು ಅತ್ಯವಶ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಗ್ರಾಮ ದೇವತೆಯರ ಜಾತ್ರೆ ಐತಿಹಾಸಿಕ ಜಾತ್ರೆಯಾಗಿದೆ. ಲಕ್ಷಾಂತರ ಜನ ಜಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, ಜಾತ್ರಾ ಸಮಯದಲ್ಲಿ ಕಳೆದ ಬಾರಿಯಾದ ಸಮಸ್ಯೆಗಳು ಮರಕಳಿಸದಂತೆ ನಿಗಾವಹಿಸುವುದು ಅತ್ಯವಶ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಶ್ರೀ ಮಹಾಲಕ್ಷ್ಮೀ ಸಭಾ ಭವನದಲ್ಲಿ ಗೋಕಾಕ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿ, ಈಗಾಗಲೇ ನಗರಸಭೆಯಿಂದ ಕಳೆದ ಒಂದು ತಿಂಗಳಿನಿಂದ ನಗರದ ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ. ಪೊಲೀಸ್‌ ಇಲಾಖೆಯವರು ಕಾನೂನು ಸುವ್ಯಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆಗೆ ಸೂಚನೆ ನೀಡಲಾಗಿದೆ. ಹೆಚ್ಚಿನ ಜನದಟ್ಟನೆ ಆಗದಂತೆ ನಗರದಲ್ಲಿ ವಾಹನಗಳ ಸಂಚಾರಕ್ಕೆ ಸೂಕ್ತಕ್ರಮವನ್ನು ಇಲಾಖೆ ಕೈಗೊಂಡಿದೆ. ಸಾರ್ವಜನಿಕರು ಸಹ ಇಲಾಖೆಯೊಂದಿಗೆ ಸಹಕಾರ ನೀಡಿ ಜಾತ್ರಾ ಮಹೋತ್ಸವ ಯಶಸ್ವಿಗೊಳಿಸಬೇಕು ಎಂದರು.

ಬ್ಯಾನರ್ ಅಳವಡಿಕೆ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು ಜಾತ್ರಾ ಮಹೋತ್ಸವ ಶಾಂತಿಯುತವಾಗಿ ನಡೆಯಬೇಕು. ಆ ನಿಟ್ಟಿನಲ್ಲಿ ನಗರಸಭೆಯಿಂದ ಬ್ಯಾನರ್ ಅಳವಡಿಸುವವರಿಗೆ ಅನುಮತಿ ನೀಡಬೇಕು. ಈ ವಿಚಾರವಾಗಿ ಯಾರೂ ಪ್ರತಿಭಟನೆ ಮಾಡುವ ಅವಶ್ಯಕತೆ ಇಲ್ಲ. ಇಲ್ಲಿ ಎಲ್ಲರು ಬ್ಯಾನರ್‌ಗಳನ್ನು ಹಾಕಿಕೊಳ್ಳಬಹುದು. ಈ ಜಾತ್ರೆ ಭಂಡಾರದ ಜಾತ್ರೆಯಾಗಿದ್ದು ಭಂಡಾರದ ಟೆಸ್ಟಿಂಗ್ ಮಾಡಿಸಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಈ ಜಾತ್ರಾ ಮಹೋತ್ಸವ ಯಶಸ್ವಿಯಾಗಲು ಎಲ್ಲ ಸಹಕರಿಸಬೇಕು. ಜಾತ್ರೆಗೆ ಬರುವ ಜನರು ಗೋಕಾಕ ಜಲಪಾತ ವೀಕ್ಷಣೆಗೆ ತೆರಳುತ್ತಾರೆ. ಅಲ್ಲಿಯೂ ಸಹ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ ಎಂದು ತಿಳಿಸಿದರು.ಜಾತ್ರಾ ಕಮಿಟಿ ಅಧ್ಯಕ್ಷ ಹಾಗೂ ಶಾಸಕ ರಮೇಶ ಜಾರಕಿಹೊಳಿ ಮಾತನಾಡಿ, ಕಳೆದ ಮೂರು ದಿನಗಳಿಂದ ಬ್ಯಾನರ್ ವಿಚಾರವಾಗಿ ನಡೆಯುತ್ತಿರುವ ಪ್ರತಿಭಟನೆ, ಮನಸ್ತಾಪಗಳ ತಿಳಿದು ಬಂದಿಲ್ಲ. ತಾಲೂಕಾಡಳಿತ ಹಾಗೂ ನಗರಸಭೆಯವರು ಎಲ್ಲರಿಗೂ ಅವಕಾಶ ನೀಡಲಿ. ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆಯೊಂದಿಗೆ ಜಾತ್ರಾ ಕಮಿಟಿಯವರ ಸಹಕಾರವಿದ್ದು, ಈ ಐತಿಹಾಸಿಕ ಜಾತ್ರೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸೋಣ ಎಂದರು.ಜಿಲ್ಲಾಧಿಕಾರಿ ಮಹ್ಮದ್‌ ರೋಷನ್‌ ಮಾತನಾಡಿ, ಕಳೆದ ಬಾರಿ ಜಾತ್ರೆಯ ಸಂದರ್ಭದಲ್ಲಿ ಆದ ಟ್ರಾಫೀಕ್, ಪಾರ್ಕಿಂಗ್ ಮತ್ತು ಜೇಬುಕಳ್ಳತನದ ಬಗ್ಗೆ ಮಾಹಿತಿ ನೀಡಿದ್ದು, ಇದಕ್ಕೆ ಪೊಲೀಸ್‌ ಇಲಾಖೆಯಿಂದ ಸುಮಾರು 2500ಕ್ಕೂ ಹೆಚ್ಚುಜನ ಸಿಬ್ಬಂದಿ ನಿಯೋಜನೆ ಹಾಗೂ ಫೇಸ್ ಟ್ರ್ಯಾಪಿಂಗ್ ಕ್ಯಾಮೆರಾ ಅಳವಡಿಸಲಾಗುತ್ತಿದೆ ಎಂದು ಕಳ್ಳರಿಗೆ ಎಚ್ಚರಿಕೆ ನೀಡಿದರು.ಕಡಬಗಟ್ಟಿ ರಸ್ತೆ ಮಾರ್ಗವಾಗಿ ಬರುವ ಜನರಿಗೆ ಎರಡು ಕಡೆ ಪಾರ್ಕಿಂಗ್, ಗೋಕಾಕ ಫಾಲ್ಸ್‌ ಮಾರ್ಗವಾಗಿ, ಹುಬ್ಬಳ್ಳಿ-ಧಾರವಾಡ ಮಾರ್ಗವಾಗಿ ಹಾಗೂ ಲೋಳಸೂರ ಮಾರ್ಗವಾಗಿ ಬರುವ ಸಾರ್ವಜನಿಕರಿಗೆ ಎರಡೆರಡು ಕಡೆ ಪಾರ್ಕಿಂಗ್ ವ್ಯವಸ್ಥೆ ಹಾಗೂ ನಗರದ ಮಯೂರ ಶಾಲೆಯ ಆವರಣದಲ್ಲಿ ಸೇರಿ 9 ಸ್ಥಳಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಜಾತ್ರಾ ಕಮಿಟಿಯಿಂದ ಡ್ರೋಣಗಳ ವ್ಯವಸ್ಥೆ ಹಾಗೂ ಸಾರ್ವಜನಿಕರು ಇರುವ ಸ್ಥಳದಲ್ಲೇ ಎಲ್.ಇ.ಡಿ ಸ್ಕ್ರೀನ್‌ಗಳ ಮೂಲಕ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಿದ್ದು, ಜಾತ್ರಾ ಕಮಿಟಿಗೆ ಜಿಲ್ಲಾಧಿಕಾರಿಗಳು ಧನ್ಯವಾದ ತಿಳಿಸಿದರು.ಆರೋಗ್ಯ ಇಲಾಖೆಯಿಂದ ಪ್ರಮುಖ ಸ್ಥಳಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಮತ್ತು ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಲಾಗುತ್ತದೆ. ಅಗ್ನಿ ಅವಘಡಗಳು ಆಗದಂತೆ ಹೆಸ್ಕಾಂ ಅಧಿಕಾರಿಗಳು ರಥ ಬೀದಿಯ ಪಕ್ಕದಲ್ಲಿ ಬರುವ ಗಿಡ ಮರಗಳ ರೆಂಬೆಕೊಂಬೆಗಳನ್ನು ಕತ್ತರಿಸಿ ಸ್ವಚ್ಛಗೊಳಿಸಲು ಹಾಗೂ ರಸ್ತೆಯ ಕ್ರಾಸ್ ಮೇಲೆ ಹಾಕಲಾಗ ವೈರಗಳನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ. ನಗರದ ಗ್ರಾಮ ದೇವತೆಯರ ದೇವಸ್ಥಾನ ಸೇರಿ ರಥ ಬೀದಿಯ ವರೆಗೆ ಸಂಚರಿಸಲು ಉಚಿತ ಸಾರಿಗೆ ಬಸ್ಸುಗಳ ವ್ಯವಸ್ಥೆ, ಹುಬ್ಬಳ್ಳಿ-ಧಾರವಾಡ ಭಾಗದಿಂದ ಬರುವ ಸಾರಿಗೆ ವಾಹನಗಳಿಗೆ ಎಪಿಎಂಸಿಯಲ್ಲಿ ನಿಲುಗಡೆ ವ್ಯವಸ್ಥೆ ಮಾಡಿದ್ದು, ಅಲ್ಲಿಂದ ನಗರಕ್ಕೆ ಬರಲು ಬಸ್‌ಗಳ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಅಚ್ಚಕಟ್ಟಾಗಿ ನಿರ್ವಹಿಸುವಂತೆ ತಿಳಿಸಲಾಗಿದೆ. ಸಾರ್ವಜನಿಕರು ದೇವಿಯರ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾಗುವಂತೆ ತಿಳಿಸಿದರು.ಒಂದೇ ವೇದಿಕೆಯಲ್ಲಿ ಸಚಿವ ಸತೀಶ, ಶಾಸಕ ರಮೇಶ

ಗೋಕಾಕ ಗ್ರಾಮ ದೇವತೆ ಜಾತ್ರಾ ಮಹೋತ್ಸವದ ಹಿನ್ನೆಲೆ ಜಾರಕಿಹೊಳಿ ಸಹೋದರರು ಒಂದೇ ವೇದಿಕೆ ಹಂಚಿಕೊಂಡಿದ್ದು ಅಪರೂಪದ ಸಂಗತಿ. ಜಾರಕಿಹೊಳಿ ಸಹೋದರರಲ್ಲಿ ಹಿರಿಯಣ್ಣ ಶಾಸಕ ರಮೇಶ ಜಾರಕಿಹೊಳಿ, ಎರಡನೇಯವರು ಸಚಿವ ಸತೀಶ ಜಾರಕಿಹೊಳಿ ಈ ಇಬ್ಬರೂ ಸಹೋದರರು ವೇದಿಕೆಯಲ್ಲಿ ಕಾಣಸಿಕೊಂಡಿರಲಿಲ್ಲ. ಉಳಿದ ಸಹೋದರರು ಎಲ್ಲರೊಂದಿಗೂ ವೇದಿಕೆ ಹಂಚಿಕೊಂಡಿದ್ದಾರೆ. ಆದರೆ, ಇದೆ ಪ್ರಥಮ ಬಾರಿಗೆ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಅಕ್ಕಪಕ್ಕದಲ್ಲೇ ಕುಳಿತು ವೇದಿಕೆ ಹಂಚಿಕೊಂಡಿದ್ದು ಅಪರೂಪದಲ್ಲಿ ಅಪರೂಪವಾಗಿದೆ.

9 ದಿನಗಳವರೆಗೆ ನಡೆಯುವ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವದಲ್ಲಿ ದಿನಾಲೂ ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರಲಿದ್ದಾರೆ. ಜನದಟ್ಟನೆಯ ಭಾಗದಲ್ಲಿ ಚಿಕ್ಕಮಕ್ಕಳ ಬಗ್ಗೆ ಜಾಗೃತೆ ವಹಿಸಬೇಕು. ರಥೋತ್ಸವ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಮಕ್ಕಳನ್ನು ಕರೆ ತರದಂತೆ ಮನವಿ ಮಾಡಿದರು. ಅಮ್ಯೂಜಮೆಂಟ್ ಪಾರ್ಕ್‌ಗಳಲ್ಲಿ ಜನದಟ್ಟನೆ ಹೆಚ್ಚಾಗುವ ವಿಚಾರವಾಗಿ ಈಗಾಗಲೇ ಪೊಲೀಸ್‌ ಇಲಾಖೆಯೊಂದಿಗೆ ಮಾತನಾಡಿ ದೇವಸ್ಥಾನದ ಪಕ್ಕದಲ್ಲಿರುವ ಸ್ಥಳದ ಕೆಲವನ್ನು ಸ್ಥಳಾಂತರ ಮಾಡಲಾಗುವುದು.

-ಮಹ್ಮದ್‌ ರೋಷನ್‌,
ಜಿಲ್ಲಾಧಿಕಾರಿಗಳು ಬೆಳಗಾವಿ.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು