ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ರೇಲ್ವೆ ಮತ್ತಷ್ಟು ಸುರಕ್ಷಿತಗೊಳಿಸಿ, ಸೌಲಭ್ಯ ಕಲ್ಪಿಸಲಿ

KannadaprabhaNewsNetwork | Published : Jun 9, 2025 12:52 AM

ಸ್ವಾತಂತ್ರ‍್ಯ ನಂತರ ಅತಿಹೆಚ್ಚು ಹೊಸ ರೈಲುಗಳು ಬಂದರೂ ಹೊಸ ಹಳಿಗಳ ನಿರ್ಮಾಣ, ನವೀಕರಣ, ರಿಪೇರಿ, ಸಿಗ್ನಲ್, ನೈರ್ಮಲೀಕರಣ ವ್ಯವಸ್ಥೆ ಮಾತ್ರ ಮೇಲ್ದರ್ಜೆಗೇರಲಿಲ್ಲ. ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ರೈಲ್ವೆ ಸುರಕ್ಷತೆ ಮತ್ತು ವಿಸ್ತರಣೆಗೆ ಆದ್ಯತೆ ಕೊಡಬೇಕು. ಖಾಸಗೀಕರಣ ಪ್ರಕ್ರಿಯೆಗೆ ಕಡಿವಾಣ ಹಾಕಬೇಕು. ಕೆಲ ಮಾರ್ಗಗಳ ರೈಲುಗಳನ್ನು, ಕೆಲ ಮಾರ್ಗಗಳ ನಿರ್ವಹಣೆ, ಕಟ್ಟಡ ನಿರ್ಮಾಣವನ್ನು ಖಾಸಗಿಗೆ ವಹಿಸಲಾಗುತ್ತಿದೆ. ಇದನ್ನು ತಡೆಯಬೇಕು.

ಹುಬ್ಬಳ್ಳಿ: ದಿನನಿತ್ಯ ನಾಲ್ಕು ಕೋಟಿಗೂ ಅಧಿಕ ಪ್ರಯಾಣಿಕರು ಸಂಚರಿಸುವ ರೈಲು ಸಾರಿಗೆ ಸುರಕ್ಷಿತವಾಗಿರಬೇಕು. ಖಾಯಂ ಸಿಬ್ಬಂದಿ ಹಾಗೂ ಮೂಲಸೌಕರ್ಯಗಳೊಂದಿಗೆ ಮತ್ತಷ್ಟು ಸುಸಜ್ಜಿತಗೊಳಿಸಬೇಕು ಎಂದು ಸಿಐಟಿಯು ಅಖಿಲ ಭಾರತ ಅಧ್ಯಕ್ಷೆ ಡಾ. ಕೆ. ಹೇಮಲತಾ ಒತ್ತಾಯಿಸಿದರು.

ನಗರದ ಅಕ್ಕನ ಬಳಗದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ರಾಜ್ಯ ಸಮಿತಿ ಸಂಘಟಿಸಿದ್ದ ರೈಲ್ವೆ ಸುರಕ್ಷತೆ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ‍್ಯ ನಂತರ ಅತಿಹೆಚ್ಚು ಹೊಸ ರೈಲುಗಳು ಬಂದರೂ ಹೊಸ ಹಳಿಗಳ ನಿರ್ಮಾಣ, ನವೀಕರಣ, ರಿಪೇರಿ, ಸಿಗ್ನಲ್, ನೈರ್ಮಲೀಕರಣ ವ್ಯವಸ್ಥೆ ಮಾತ್ರ ಮೇಲ್ದರ್ಜೆಗೇರಲಿಲ್ಲ. ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ರೈಲ್ವೆ ಸುರಕ್ಷತೆ ಮತ್ತು ವಿಸ್ತರಣೆಗೆ ಆದ್ಯತೆ ಕೊಡಬೇಕು. ಖಾಸಗೀಕರಣ ಪ್ರಕ್ರಿಯೆಗೆ ಕಡಿವಾಣ ಹಾಕಬೇಕು. ಕೆಲ ಮಾರ್ಗಗಳ ರೈಲುಗಳನ್ನು, ಕೆಲ ಮಾರ್ಗಗಳ ನಿರ್ವಹಣೆ, ಕಟ್ಟಡ ನಿರ್ಮಾಣವನ್ನು ಖಾಸಗಿಗೆ ವಹಿಸಲಾಗುತ್ತಿದೆ. ಇದನ್ನು ತಡೆಯಬೇಕು ಎಂದರು.

ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಹಿರಿಯ ಕಾರ್ಮಿಕ ಮುಖಂಡ ವಿ.ಜೆ.ಕೆ. ನಾಯರ್, ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಾಂತೇಶ, ಲೋಕೋ ರನಿಂಗ್ ಸ್ಟಾಫ್ ಸಂಘಟನೆಯ ಕೆ.ಸಿ. ಜೇಮ್ಸ್, ಗಾರ್ಡ ಕೌನ್ಸಿಲ್ ಸಂಘಟನೆಯ ಎ.ಕೆ. ಧುಬೇ, ಟ್ರ್ಯಾಕ್‌ಮನ್ ಸಂಘಟನೆಯ ಕಾಂತರಾಜು ಎ.ವಿ, ರೈಲ್ವೆ ಹಮಾಲಿ ಕಾರ್ಮಿಕರ ಸಂಘಟನೆಯ ಚಂದ್ರು ಚಲವಾದಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ರೈಲ್ವೆ ಖಾಸಗೀಕರಣ ಪರಿಣಾಮಗಳ ಕುರಿತು ಪ್ರಚಾರಾಂದೋಲನ, ಜುಲೈ-ಆಗಸ್ಟ್‌ ತಿಂಗಳಲ್ಲಿ ರೈಲ್ವೆ ವಿಭಾಗ ಮಟ್ಟದ ಸಮಾವೇಶ, ಸಾರ್ವಜನಿಕರ ಸಹಿ ಸಂಗ್ರಹದೊಂದಿಗೆ ಪ್ರಧಾನಿಗೆ ಮನವಿ ಸಲ್ಲಿಸುವುದು ಮತ್ತು ಅಕ್ಟೋಬರ್ ೧ ಹಾಗೂ ೩ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲು ಕರೆ ನೀಡಲಾಯಿತು.

ಬಿ.ಐ. ಈಳಿಗೇರ, ಡಾ. ಲಿಂಗರಾಜ ಅಂಗಡಿ. ಮಂಜುನಾಥ ಹುಜರಾತಿ, ಸುನಂದಾ ಚಿಗರಿ, ಫಕ್ಕೀರವ್ವ ತೆಂಬದಮನಿ, ಟಿ.ಸಾಬು, ನಾರಾಯಣ ಆರೇರ, ಮಂಜುನಾಥ ದೊಡ್ಡಮನಿ ಸೇರಿದಂತೆ ವಿವಿಧ ಜಿಲ್ಲೆಯ ಮುಖಂಡರು, ಪ್ರತಿನಿಧಿಗಳು ಭಾಗವಹಿಸಿದ್ದರು. ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಸ್ವಾಗತಿಸಿದರು. ಗುರುಸಿದ್ದಪ್ಪ ಅಂಬಿಗೇರ ವಂದಿಸಿದರು.

ಹಕ್ಕೊತ್ತಾಯ: ರೈಲ್ವೆ ಪ್ರಯಾಣಿಕರ ಸುರಕ್ಷತೆ ಖಚಿತಪಡಿಸುವುದು, ರೈಲ್ವೆ ನೌಕರರಿಗೆ ಕೆಲಸದ ಸ್ಥಳದಲ್ಲ ಸುರಕ್ಷತೆ, ಭಾರತೀಯ ರೈಲ್ವೆಯ ಯಾವುದೇ ಸ್ವರೂಪ ಖಾಸಗೀಕರಣ ಬೇಡ ಸೇರಿದಂತೆ ಹಲವು ಹಕ್ಕೊತ್ತಾಯಗಳನ್ನು ಈ ಸಂದರ್ಭದಲ್ಲಿ ಮಂಡಿಸಲಾಯಿತು.