ಮುಖ್ಯಮಂತ್ರಿಗಳ ಪತ್ರಕ್ಕೆ ಬೆಲೆ ಕೊಟ್ಟಾದರೂ ರಸ್ತೆ ಮಾಡಿಸಿಕೊಡಿ

KannadaprabhaNewsNetwork | Published : Dec 12, 2024 12:30 AM

ಸಾರಾಂಶ

ಮುಖ್ಯಮಂತ್ರಿಗಳ ಪತ್ರಕ್ಕೆ ಬೆಲೆ ಕೊಟ್ಟು ಡಾಗ್ ಸರ್ಕಲ್ ನ ರಸ್ತೆ ಮಾಡಿಕೊಡಿ ಎಂದು ನಾಗರಿಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್.ವಿ. ರಂಗನಾಥ್ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಹಿರಿಯೂರು

ಮುಖ್ಯಮಂತ್ರಿಗಳ ಪತ್ರಕ್ಕೆ ಬೆಲೆ ಕೊಟ್ಟು ಡಾಗ್ ಸರ್ಕಲ್ ನ ರಸ್ತೆ ಮಾಡಿಕೊಡಿ ಎಂದು ನಾಗರಿಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್.ವಿ. ರಂಗನಾಥ್ ಮನವಿ ಮಾಡಿದ್ದಾರೆ.

ಪಟ್ಟಣದ ವೇದಾವತಿ ನಗರದ ಮೂರನೇ ವಾರ್ಡ್ ನ ಡಾಗ್ ಸರ್ಕಲ್ ರಸ್ತೆಗೆ ಸಂಪರ್ಕ ಕಲ್ಪಿಸುವ ಬಬ್ಬೂರು ಸ.ನಂ 39 ಮತ್ತು 40 ರ ಮಧ್ಯದಲ್ಲಿರುವ ರಸ್ತೆಗೆ ಹೊಂದಿಕೊಂಡು 7 ನಗರ ಯೋಜನೆ ಅನುಮೋದಿತ ಬಡಾವಣೆ ನಕ್ಷೆಗಳಿದ್ದು, ಎಲ್ಲರೂ ರಸ್ತೆ ಇರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ರಸ್ತೆ ಬಿಟ್ಟುಕೊಡಲು ಹಾಗೂ ಒತ್ತುವರಿ ತೆರವು ಮಾಡುವ ಬಗ್ಗೆ ಪದೇ ಪದೇ ಅಳತೆ ಮಾಡಿಸಿ ವಿವಾದ ಉಂಟು ಮಾಡುತ್ತಾ, ಚಂದ್ರಾ ಲೇ ಔಟ್, ಶಿವಶಂಕರಪ್ಪ ಲೇ ಔಟ್, ನಾಗರೀಕರ ರಸ್ತೆ ಸಮಸ್ಯೆ ಜೀವಂತವಾಗಿಯೇ ಉಳಿದಿದೆ ಎಂದು ಸಮಸ್ಯೆ ಬಗ್ಗೆ ವಿವರಿಸಿದರು.

ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ಕಾಮಗಾರಿ ಟೆಂಡರ್ ಕರೆದು ಕಾಮಗಾರಿ ಮಾಡುವ ಕಾಲಕ್ಕೆ ಮತ್ತೊಮ್ಮೆ ವಿವಾದ ಉಂಟಾಗಿದ್ದು, ಈ ಭಾಗದ ನಾಗರೀಕರು ಯಾವುದೇ ಬಡಾವಣೆ ಮಾಲೀಕರ ಪರವೂ ಅಲ್ಲ, ವಿರುದ್ಧವೂ ಅಲ್ಲ. ನಮಗೆ ಗೌರವಯುತವಾಗಿ ಸಾಗಲು ದಾರಿ ಬಿಡಿಸಿಕೊಡಲು ಕೇಳುತ್ತಿದ್ದೇವೆ. ಇದೀಗ ಸಂಬಂಧಪಟ್ಟ ಅಧಿಕಾರಿಗಳು ನಮಗೆ ರಸ್ತೆ ಬಿಡಿಸಿಕೊಡಲು ಸಾಧ್ಯವಾಗದೇ ಇದ್ದಲ್ಲಿ ಅಂಡರ್ ಪಾಸ್ ರಸ್ತೆ ಅಥವಾ ಫ್ಲೈ ಓವರ್ ರಸ್ತೆಯನ್ನಾದರೂ ಮಾಡಿಸಿಕೊಡಲಿ ಎಂದು ಒತ್ತಾಯಿಸಿದ್ದಾರೆ.

ಹಿರಿಯೂರು ನಗರಸಭೆಯವರು ನಮ್ಮ ರಸ್ತೆ ಸಮಸ್ಯೆ ಇತ್ಯರ್ಥಕ್ಕೆ ಸ.ನo. 39 ಮತ್ತು 40 ರ ಗಡಿ ಗುರುತು ಮಾಡಿ ಇದಕ್ಕೆ ಹೊಂದಿಕೊಂಡ 7 ನಗರ ಯೋಜನೆ ಅನುಮೋದಿತ ನಕ್ಷೆ ಪ್ರಕಾರ, ಅಳತೆ ಮಾಡಿಸಿ ನಿಖರವಾಗಿ ರಸ್ತೆ ಮಾಡಿಸಿಕೊಡಲು ಮುಂದಾಗಬೇಕು. ಈಗಾಗಲೇ ನಮ್ಮ ಸಮಸ್ಯೆ ಪರಿಹಾರಕ್ಕೆ ಸ್ವತಃ ಮುಖ್ಯಮಂತ್ರಿಗಳೇ ಪತ್ರ ಬರೆದಿದ್ದು, ಅವರ ಪತ್ರಕ್ಕೆ ಬೆಲೆ ಕೊಟ್ಟಾದರೂ ಸರಿ, ಡಾಗ್ ಸರ್ಕಲ್ ನಾಗರೀಕರಿಗೆ ತ್ವರಿತವಾಗಿ ರಸ್ತೆ ಮಾಡಿಸಿಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

Share this article