ಯಂತ್ರ ಚಾಲಿತ ವಾಹನ ಸದ್ಬಳಕೆ ಮಾಡಿಕೊಳ್ಳಿ

KannadaprabhaNewsNetwork | Published : May 25, 2025 1:14 AM
ಶಾಸಕರ ಅನುದಾನದ ಒಟ್ಟು ₹೨ ಕೋಟಿ ಮೊತ್ತವನ್ನು ೨೦೦ ಯಂತ್ರ ಚಾಲಿತ ವಾಹನಗಳನ್ನು ವಿತರಣೆ ಮಾಡಬೇಕೆಂಬ ನನ್ನ ಬಹುದೊಡ್ಡ ಕನಸಾಗಿದ್ದು ಅದನ್ನು ಇಂದು ಕ್ಷೇತ್ರದಲ್ಲಿನ ಅರ್ಹ ೨೦೦ ಫಲಾನುಭವಿಗಳಿಗೆ ವಿತರಣೆ ಕಾರ್ಯಕ್ರಮವಾಗಿದೆಯೆಂದು ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ನುಡಿದರು
Follow Us

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಶಾಸಕರ ಅನುದಾನದ ಒಟ್ಟು ₹೨ ಕೋಟಿ ಮೊತ್ತವನ್ನು ೨೦೦ ಯಂತ್ರ ಚಾಲಿತ ವಾಹನಗಳನ್ನು ವಿತರಣೆ ಮಾಡಬೇಕೆಂಬ ನನ್ನ ಬಹುದೊಡ್ಡ ಕನಸಾಗಿದ್ದು ಅದನ್ನು ಇಂದು ಕ್ಷೇತ್ರದಲ್ಲಿನ ಅರ್ಹ ೨೦೦ ಫಲಾನುಭವಿಗಳಿಗೆ ವಿತರಣೆ ಕಾರ್ಯಕ್ರಮವಾಗಿದೆಯೆಂದು ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ನುಡಿದರು.

ನಗರದ ಕಿಶೋರ್ ವಿದ್ಯಾಭವನದಲ್ಲಿ ವೇದಿಕೆಯಲ್ಲಿ ೨೦೨೩-೨೪ನೇ ಸಾಲಿನ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಡಿ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ೨೦೦ ವಿಕಲಚೇತನ ಫಲಾನುಭವಿಗಳಿಗೆ ಯಂತ್ರ ಚಾಲಿತ ವಾಹನಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ವಾಹನಗಳನ್ನು ವಿತರಣೆ ಮಾಡಲಾಗದಿರುವುದು ನನಗೆ ನೋವಿನ ಸಂಗತಿಯಾಗಿದ್ದು, ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣವೆಂದರು.

ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಜಗದೀಶ್ ವಿರುದ್ಧ ಗರಂ:

ಯಂತ್ರ ಚಾಲಿತ ವಾಹನಗಳ ವಿತರಣೆಯ ಸಂದರ್ಭದಲ್ಲಿ ಎಲ್ಲ ೨೦೦ ವಾಹನಗಳನ್ನು ಏಕಕಾಲಕ್ಕೆ ವಿತರಣೆ ಮಾಡುವ ಗುರಿಯನ್ನು ಹೊಂದಿದ್ದು ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದಾಗಿ ೮೫ ವಾಹನಗಳನ್ನು ವಿತರಣೆ ಮಾಡುತ್ತಿರುವುದಾಗಿ ನೋವಿನಿಂದ ನುಡಿದರು. ೨೦೦ ಯಂತ್ರ ಚಾಲಿತ ವಾಹನಗಳ ವಿತರಣೆ ಕಾರ್ಯಕ್ರಮ ಶಾಸಕರ ಅನುದಾನದಲ್ಲಿ ಹಮ್ಮಿಕೊಂಡಿದ್ದು, ಇದನ್ನು ಸರಿಯಾದ ರೀತಿಯಲ್ಲಿ ಆಯೋಜಿಸದಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಕಲ್ಯಾಣಾಧಿಕಾರಿ ಜಗದೀಶ್ ವಿರುದ್ಧ ಕಿಡಿಕಾರಿ ನೀವು ಊಡಾಫೆ ಉತ್ತರಗಳನ್ನು ನೀಡುವುದನ್ನು ನಿಲ್ಲಸಬೇಕು. ಈ ಕಾರ್ಯಕ್ರಮವು ರಾಜ್ಯದ ಇತರೆ ಶಾಸಕರಿಗೆ ಮಾದರಿಯಾಗಬೇಕೆಂಬ ಉದ್ದೇಶದಿಂದ ಒಂದೇ ಬಾರಿಗೆ ೨೦೦ ವಾಹನಗಳನ್ನು ನೀಡುವ ಸಂಕಲ್ಪವನ್ನು ಸಕಾರಗೊಳಿಸಲಾಗದಿರುವುದಕ್ಕೆ ನಿಮ್ಮ ಕರ್ತವ್ಯ ಲೋಪವೆಂದರು. ಒಂದೆಡೆ ಕಾರ್ಯಕ್ರಮಕ್ಕೆ ಬಂದಿದ್ದ ಸಾರ್ವಜನಿಕರಿಗೆ ಆಸನದ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿರುವುದ ಒಂದೆಡೆಯಾದರೆ ಮತ್ತೊಂದೆಡೆ ನೆರೆದಿದ್ದ ಜನರಿಗೆ ಆಹಾರ ಕೊರತೆ ಇದದ್ದು ಸಚಿವರ ಕೋಪ ಮತ್ತಷ್ಟು ಹೆಚ್ಚಲು ಕಾರಣವಾಯಿತು.

ವಿಕಲಚೇತನ ಅಧಿಕಾರಿಗೆ ಏಕವಚನದಲ್ಲೇ ಬೈದ ಸಚಿವ ನಿಮ್ಮಪ್ಪನ ಮನೆಯಿಂದ ಲೋಡ್ ಆಗ್ತಾ ಇದ್ದೀಯಾ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಇತಂಹ ನಾಲಾಯಕ್ ಅಧಿಕಾರಿಯನ್ನು ನೋಡಿಲ್ಲವೆಂದರು. ವಿಕಲಚೇತನ ಅಧಿಕಾರಿ ಜಗದೀಶ್ ನಡತೆಗೆ ಸಚಿವ ಬೇಸರ ವ್ಯಕ್ತಪಡಿಸಿ ನನ್ನ ಕನಸಿನ ಕಾರ್ಯಕ್ರಮಕ್ಕೆ ಕಪ್ಪು ಚುಕ್ಕೆಯನ್ನು ತಂದಿದೆ ಎಂದು ಕಿಡಿಕಾಡಿದರು.

ಮಹಂತೇಶ್ ಜಿ. ಕಿವಡಸಣ್ಣವರ್ ಮಾತನಾಡಿ, ಯಂತ್ರ ಚಾಲಿತ ವಾಹನಗಳನ್ನು ನೀಡುವ ಉದ್ದೇಶದಿಂದ ತಮ್ಮ ₹೨ ಕೋಟಿ ಸಂಪೂರ್ಣ ಅನುದಾನವನ್ನು ವಿಕಲಚೇತನರ ಯಂತ್ರ ಚಾಲಿತ ವಾಹನಗಳ ವಿತರಣೆ ಮಾಡುತ್ತಿರುವುದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲೇ ಮೊದಲಾಗಿದ್ದು ಇಂತಹ ಶಾಸಕ ಮತ್ತು ಮಂತ್ರಿಗಳು ಲಭಿಸಿರುವುದು ಈ ಕ್ಷೇತ್ರದ ಜನತೆಯ ಪುಣ್ಯವೆಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಸುದರ್ಶನ್ ಯಾದವ್, ತಾ.ಪಂ. ಇಒ ಎಸ್.ಆನಂದ್, ಸಿಡಿಪಿಒ ಮಹೇಶ್‌ಬಾಬು, ಪ್ರಸಾದ್ ಕುಮಾರ್, ನಗರಸಭೆ ಅಧ್ಯಕ್ಷ ಜಗನ್ನಾಥ್, ಉಪಾಧ್ಯಕ್ಷೆ ರಾಣಿಯಮ್ಮ, ಪೌರಾಯುಕ್ತ ಜಿ.ಎನ್.ಚಲಪತಿ, ನಗರಯೋಜನಾ ಪ್ರಾಧಿಕಾರ ಅಧ್ಯಕ್ಷ ಶ್ರೀನಾಥ್‌ರೆಡ್ಡಿ, ಸದಸ್ಯರಾದ ಹರೀಶ್, ಜೈ ಭೀಮ್ ಮುರಳಿ, ಅಕ್ಷಯ್‌ಕುಮಾರ್, ರಾಜಾಚಾರಿ, ಗ್ಯಾರಂಟಿ ಸಮಿತಿ ತಾಲ್ಲೂಕು ಅಧ್ಯಕ್ಷ ಮುನಿನಾರಾಯಣಪ್ಪ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು, ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.