ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಪುರಾಣ ಪ್ರಸಿದ್ಧವಾದ ಇಲ್ಲಿನ ಎಳ್ಳಮಾವಾಸ್ಯೆ ಜಾತ್ರೆಗೆ ಪೂರಕವಾಗಿ ಮುಂಬರುವ ಜನವರಿ 1ರಂದು ನಡೆಯಲಿರುವ ತೆಪ್ಪೋತ್ಸವ ಸಮಿತಿಯ ರಚನೆಗಾಗಿ ಶಾಸಕ ಆರಗ ಜ್ಞಾನೇಂದ್ರ ಅವರ ಅಧ್ಯಕ್ಷತೆಯಲ್ಲಿ ಸಂಜೆ ಗ್ರಾಮೀಣ ಸೌಧದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು.
ತೆಪ್ಪೋತ್ಸವ ಸಮಿತಿಯ ಸಂಚಾಲಕರ ನೇಮಕಕ್ಕೆ ಸಂಭಂದಿಸಿ ಸಭೆಯಲ್ಲಿದ್ದ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮೇಲಾಟದ ನಡುವೆ ಎರಡು ಬಣಗಳ ನಡುವೆ ಒಮ್ಮತ ಮೂಡಿಸುವಲ್ಲಿ ಸಭೆ ವಿಫಲವಾದ ಕಾರಣ ಅಂತಿಮವಾಗಿ ಎರಡೂ ಪಕ್ಷಗಳ ಮುಖಂಡರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಯಿತು.ವರ್ಷದಿಂದ ವರ್ಷಕ್ಕೆ ಜನಪ್ರಿಯಗೊಳ್ಳುತ್ತಿರುವ ರಾಮೇಶ್ವರ ದೇವರ ಅದ್ಧೂರಿ ತೆಪ್ಪೋತ್ಸವ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕಳೆದ 50 ವರ್ಷಗಳಿಂದ ಅನೂಚಾನವಾಗಿ ಅತ್ಯಂತ ಸೌಹಾರ್ದಯುತವಾಗಿ ನಡೆದುಕೊಂಡು ಬರುತ್ತಿದ್ದು, ಈ ಉತ್ಸವಕ್ಕೆ ಧಕ್ಕೆಯಾಗದಂತೆ ಯಥಾವತ್ತಾಗಿ ಮುಂದುವರೆಸುವ ಸಲುವಾಗಿ ಅಂತಿಮವಾಗಿ ಶಾಸಕರ ಅಧ್ಯಕ್ಷತೆ ಮತ್ತು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಆರ್.ಎಂ.ಮಂಜುನಾಥಗೌಡರ ಗೌರವಾಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ಈ ಬಾರಿಯ ತೆಪ್ಪೋತ್ಸವವನ್ನು ನಡೆಸಲು ಅನಿವಾರ್ಯವಾಗಿ ನಿರ್ಣಯಿಸಲಾಯಿತು.