ಕನ್ನಡಪ್ರಭ ವಾರ್ತೆ ಕುಶಾಲನಗರ ಕುಶಾಲನಗರ ಸಮೀಪದ ಗುಮ್ಮನ ಕೊಲ್ಲಿ ಬಳಿ 11 ಕೆವಿ ವಿದ್ಯುತ್ ತಂತಿ ತಗುಲಿ ತೀವ್ರ ಸುಟ್ಟ ಗಾಯಗಳಿಂದ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿ ಅಲ್ಪಪ್ರಮಾಣದಲ್ಲಿ ಚೇತರಿಸಿಕೊಳ್ಳುತ್ತಿದ್ದು, ಇದೀಗ ವಿಶೇಷ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಶುಕ್ರವಾರ ಮೈಸೂರು ಆಸ್ಪತ್ರೆಗೆ ತೆರಳಿ ಬಾಲಕಿಯ ಯೋಗ ಕ್ಷೇಮ ವಿಚಾರಿಸಿ, ಬಾಲಕಿಯ ಚಿಕಿತ್ಸೆಗೆ ವೈಯಕ್ತಿಕವಾಗಿ ಸಹಾಯ ಹಸ್ತ ಚಾಚಿದರು.ಚಿಕಿತ್ಸೆ ವೆಚ್ಚದ ಸಲುವಾಗಿ ಚಾಮುಂಡೇಶ್ವರಿ ವಿದ್ಯುತ್ ನಿಗಮದ ಮೂಲಕ 3.75 ಲಕ್ಷ ರು.ಗಳ ಚೆಕ್ ಅನ್ನು ಕುಶಾಲನಗರ ಸೆಸ್ಕ್ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ಅವರು ಶನಿವಾರ ಮೈಸೂರಿಗೆ ತೆರಳಿ ಬಾಲಕಿಯ ತಾಯಿಗೆ ಹಸ್ತಾಂತರ ಮಾಡಿದರು. ಒಟ್ಟು ಚಿಕಿತ್ಸೆಗೆ ಅಂದಾಜು 7.5 ಲಕ್ಷ ರು. ವೆಚ್ಚ ತಗಲುವ ಬಗ್ಗೆ ಆಸ್ಪತ್ರೆ ವೈದ್ಯಾಧಿಕಾರಿಗಳು ವಿದ್ಯುತ್ ಸರಬರಾಜು ನಿಗಮದ ಹಿರಿಯ ಅಧಿಕಾರಿಗಳಿಗೆ ಅಂದಾಜು ಪಟ್ಟಿ ನೀಡಿದ್ದು. ಈ ಸಂಬಂಧ ಇದೀಗ ಶೇ. 50ರಷ್ಟು ಪಾವತಿಸಲಾಗಿದೆ ಎಂದು ನಿಗಮದ ಅಧೀಕ್ಷಕ ಅಭಿಯಂತರ ಸೋಮಶೇಖರ್ ತಿಳಿಸಿದ್ದಾರೆ. ಇತ್ತೀಚೆಗೆ ಕುಶಾಲನಗರ ತಾಲೂಕು ಸೌಂದರ್ಯ ತಜ್ಞರ ವೇದಿಕೆಯ ಪದಾಧಿಕಾರಿಗಳು ಮೈಸೂರಿಗೆ ತೆರಳಿ ಸೋಮಶೇಖರ್ ಅವರನ್ನು ಭೇಟಿ ಮಾಡಿ ಘಟನೆ ಬಗ್ಗೆ ಸಮಗ್ರ ತನಿಖೆ ಹಾಗೂ ಬಾಲಕಿಯ ಚಿಕಿತ್ಸೆಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದರು. ಅಲ್ಲದೆ ಕುಶಾಲನಗರ ಸೌಂದರ್ಯ ತಜ್ಞರ ವೇದಿಕೆ ಮೂಲಕ 1.5 ಲಕ್ಷ ರು. ಸಹಾಯ ಹಸ್ತ ಕಲ್ಪಿಸಲಾಗಿತ್ತು. ಕುಶಾಲನಗರ ಸೆಸ್ಕ್ ಅಧಿಕಾರಿಗಳು ಸಿಬ್ಬಂದಿಗಳು ಸೇರಿ 80 ಸಾವಿರ ರು. ಸಹಾಯ ಹಸ್ತ ನೀಡಿರುವುದಾಗಿ ತಿಳಿಸಿದ್ದಾರೆ.