ಚಿಕ್ಕಮಗಳೂರು: ‘ಮುಲ್ಲಾನಿಗೂ, ನೀಟ್ ಪರೀಕ್ಷೆಗೂ ಏನು ಸಂಬಂಧ?, ಎದೆ ಸೀಳಿದರೆ ಮೂರು ಅಕ್ಷರ ಬರಲ್ಲʼ ಎಂದು ಟೀಕಿಸಿದ್ದ ವಿಧಾನ ಪರಿಷತ್​​ ಸದಸ್ಯ ಸಿ.ಟಿ.ರವಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಭಾನುವಾರ ನೋಟಿಸ್‌ ನೀಡಲು ಅವರ ಮನೆಗೆ ಬಂದಾಗ ಹೈಡ್ರಾಮಾವೇ ನಡೆಯಿತು. ಈ ವೇಳೆ ನೋಟಿಸ್‌ ಸ್ವೀಕರಿಸಲು ಸಿ.ಟಿ.ರವಿ ನಿರಾಕರಿಸಿದ್ದರಿಂದ ಪೊಲೀಸರು ಅವರ ಮನೆಯ ಗೋಡೆಗೆ ನೋಟಿಸ್‌ ಅಂಟಿಸಿ ತೆರಳಿದ್ದು, ಸೋಮವಾರ ವಿಚಾರಣೆಗೆ ಬರಲು ಸೂಚಿಸಿದ್ದಾರೆ. ಆದರೆ, ಈ ನೋಟಿಸ್‌ನ್ನೂ ಕೂಡ ಅವರ ಬೆಂಬಲಿಗರು ಕಿತ್ತೆಸೆದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ನಡೆದ ಪ್ರತಿಭಟನೆ ಬಗ್ಗೆ ಆಕ್ರೋಶ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ದೆಹಲಿಯಲ್ಲಿ ನಡೆದ ಪ್ರತಿಭಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಸಿ.ಟಿ.ರವಿ, ‘ಮುಲ್ಲಾನಿಗೂ, ನೀಟ್ ಪರೀಕ್ಷೆಗೂ ಏನು ಸಂಬಂಧ?, ಎದೆ ಸೀಳಿದರೆ ಮೂರು ಅಕ್ಷರ ಬರಲ್ಲʼಎಂದು ಟೀಕಿಸಿದ್ದರು. ಅವರ ಹೇಳಿಕೆ ವಿರುದ್ಧ ಜಮಿಯಾ ಮಸೀದಿ ಅಧ್ಯಕ್ಷ ಮುದಾಸಿರ್ ಪಾಷ ನೀಡಿದ್ದ ದೂರು ಆಧರಿಸಿ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ ಭಾನುವಾರ ಸಿ.ಟಿ.ರವಿ ಮನೆಗೆ ತೆರಳಿ ನೋಟಿಸ್ ನೀಡಲು ಪೊಲೀಸ್ ಅಧಿಕಾರಿಗಳು ಬಂದಾಗ, ‘ನನ್ನ ಭಾಷಣದಲ್ಲಿ ಮುಸ್ಲಿಂ ಸಮುದಾಯದ ಅವಹೇಳನ ಎಲ್ಲಿದೆ ತೋರಿಸಿ, ಯಾರೇ ದೂರು ಕೊಟ್ಟರೂ ಎಫ್ಐಆರ್ ದಾಖಲಿಸಿ ಬಂಧಿಸುತ್ತೀರಾ?, ದೂರು ಕೊಟ್ಟವನಿಗೂ ಬೆಂಕಿ ಹಾಕಲು ಬಂದವನಿಗೂ ಏನು ಸಂಬಂಧ?. ನಾನು ಮಾತನಾಡಿರುವುದು ಕ್ರಿಮಿನಲ್‌ ಮುಲ್ಲಾ ಬಗ್ಗೆ. ಹೀಗಾಗಿ, ಆ ಕ್ರಿಮಿನಲ್‌ ಮುಲ್ಲಾ ಪರವಾಗಿ ದೂರು ನೀಡಿದ ವ್ಯಕ್ತಿಯ ವಿರುದ್ಧ ಮೊದಲು ಕ್ರಮ ಕೈಗೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು. 


 ಇದೇ ವೇಳೆ, ಸಿ.ಟಿ.ರವಿಯವರ ಬೆಂಬಲಿಗರು ಮತ್ತು ವಕೀಲರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಪೊಲೀಸರು ಹಾಗೂ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ, ಸಿ.ಟಿ.ರವಿ ಬೆಂಬಲಿಗರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು.

ಮನೆಯ ಗೋಡೆಗೆ ನೋಟಿಸ್‌ ಅಂಟಿಸಿ ಹೋದ ಪೊಲೀಸರು

ಅಂತಿಮವಾಗಿ ನೋಟಿಸ್‌ ಸ್ವೀಕರಿಸಲು ಸಿ.ಟಿ.ರವಿಯವರು ನಿರಾಕರಿಸಿದ್ದರಿಂದ ಪೊಲೀಸರು ಅವರ ಮನೆಯ ಗೋಡೆಗೆ ನೋಟಿಸ್‌ ಅಂಟಿಸಿ ಹೋಗಿದ್ದಾರೆ. ಸೋಮವಾರ ಬೆಳಗ್ಗೆ 11 ಗಂಟೆಗೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ಖುದ್ದಾಗಿ ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.