ಗದಗ: ಮಲ್ಲಕಂಬವು ಭಾರತದಲ್ಲಿ ಹುಟ್ಟಿದ ಶಕ್ತಿ ಮತ್ತು ಶಾರೀರಿಕ ಕೌಶಲ್ಯದ ಪ್ರಾಚೀನ ಕಲೆ, ಶತಮಾನಗಳಿಂದ ವಿಶೇಷ ಸ್ಥಾನ ಪಡೆದಿದೆ ಎಂದು ಹಿರಿಯ ಮುಖಂಡ ಶರದರಾವ್ ಹುಯಿಲಗೋಳ ಹೇಳಿದರು.
ನಗರದ ಕಳಸಾಪೂರ ರಸ್ತೆಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಚಾಲುಕ್ಯ ಮಲ್ಲಕಂಬ ಅಕಾಡೆಮಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೈಲ್ವಾನರು ಮತ್ತು ಯೋಧರು ಶಕ್ತಿಯ ಅಭ್ಯಾಸಕ್ಕೆ ಇದನ್ನು ಬಳಸಿ ಶಿಸ್ತು ಮತ್ತು ಶಕ್ತಿ ಬೆಳೆಸಿಕೊಳ್ಳುತ್ತಿದ್ದರು. ಮೈಸೂರಿನ ಅರಮನೆ, ವಿಜಯನಗರ ಸಾಮ್ರಾಜ್ಯ, ಬದಾಮಿ ಚಾಲುಕ್ಯರು ಮತ್ತು ಹಳ್ಳಿಯ ಅಖಾಡಗಳಲ್ಲಿ ಈ ಕಲೆ ತನ್ನ ಬಂಗಾರದ ಯುಗ ಕಂಡಿತು. ಹಳ್ಳಿಗಳ ಅಖಾಡಗಳಲ್ಲಿ ಶಿಸ್ತಿನ ವ್ಯಾಯಾಮವಾಗಿ ಬೆಳೆದ ಮಲ್ಲಕಂಬ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೆ.ಎಚ್. ಪಾಟೀಲ ಮಾತನಾಡಿ, ದೇಹವನ್ನು ಸಮತೋಲಗೊಳಿಸಿ, ಆತ್ಮ ಉನ್ನತಗೊಳಿಸಿ ಇಂತಹ ಕ್ರೀಡೆಗಳು ಮಕ್ಕಳಲ್ಲಿ ಆಸಕ್ತಿ ಮೂಡುವಂತಾಗಬೇಕು. ಜಿಲ್ಲೆ, ರಾಜ್ಯ,ರಾಷ್ಟ್ರಮಟ್ಟದಲ್ಲಿ ಗದುಗಿನ ಕೀರ್ತಿ ತರುವಂತೆ ಚಾಲುಕ್ಯ ಮಲ್ಲಕಂಬ ಅಕಾಡೆಮಿ ಶ್ರಮಿಸಲಿ. ಇವರ ಮುಂದಾಳತ್ವದಲ್ಲಿ ಈ ಕ್ರೀಡೆಗಳು ಯಶಸ್ವಿಯಾಗಲೆಂದರು.
ಶಂಕರ ಹಾನಗಲ್ ಮಾತನಾಡಿ, ಚಾಲುಕ್ಯ ಮಲ್ಲಕಂಬ ಅಕಾಡೆಮಿ ಗದಗ ಜಿಲ್ಲೆಯಲ್ಲಿ ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಅಭಿವೃದ್ಧಿಗಾಗಿ ಸ್ಥಾಪಿತವಾದ ಮುಖ್ಯ ತರಬೇತಿ ಸಂಸ್ಥೆಯಾಗಿದ್ದು, ಮಲ್ಲಕಂಬದ ವಿವಿಧ ಶೈಲಿಗಳ ತರಬೇತಿ ಅನುಭವಿ ತರಬೇತುದಾರರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಸಂಸ್ಥೆಯು ಉತ್ತರೋತ್ತರವಾಗಿ ಬೆಳೆಯಲಿ ಎಂದರು.ಚಾಲುಕ್ಯ ಮಲ್ಲಕಂಬ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ವಿಜಯ ಚನ್ನಗೋಣಿ ಮಾತನಾಡಿ, ಮಲ್ಲಕಂಬ ಕ್ರೀಡೆಗೆ ಪ್ರವೇಶ ತರಗತಿಗಳು ಪ್ರಾರಂಭಗೊಂಡಿದ್ದು, ಕ್ರೀಡಾಪಟುಗಳು ಸೆ. 1ರಿಂದ ತರಗತಿಗಳು ಪ್ರಾರಂಭಗೊಳ್ಳುತ್ತೇವೆ. ಆಸಕ್ತರು ಮೊ 8904672543 ಸಂಪರ್ಕಿಸಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಶರಣು ಗೊಗೇರಿ, ಸಿದ್ದು ಪಾಟೀಲ, ಮಹೇಶ ರಂಗಣ್ಣವರ, ಸಚಿನ ಮಲ್ಲಾಪೂರ, ದೀಪಕ ದಾನಿ, ಕೆ.ಎಸ್.ಗಂಗನಗೌಡರ, ಪರಶುರಾಮ ಹಬೀಬ, ಶಿವು ಸಿದ್ದರಾಮಸ್ವಾಮಿಮಠ, ಮಾರುತಿ ಮರೆಯಪ್ಪನವರ ಸೇರಿದಂತೆ ಮಲ್ಲಕಂಬ ತರಬೇತುದಾರರು, ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಇದ್ದರು.