ಬಸವರಾಜ ಸರೂರ
ತಾಲೂಕಿನ ಅರೆಮಲ್ಲಾಪುರ ಸಮೀಪವಿರುವ ಬೆಟ್ಟದ ಮಲ್ಲೇಶ್ವರ (ಬೆಟ್ಟದ ಮಲ್ಲಪ್ಪನ ಗುಡ್ಡ) ಇತ್ತೀಚಿನ ದಿನಗಳಲ್ಲಿ ಅತ್ಯಂತ ಪ್ರಚಲಿತಕ್ಕೆ ಬರುತ್ತಿರುವ ಒಂದು ಅಪೂರ್ವ ಪ್ರವಾಸಿ ಮತ್ತು ಧಾರ್ಮಿಕ ತಾಣವಾಗಿದೆ. ಈ ಹಿಂದೆ ಕೇವಲ ಸ್ಥಳೀಯ ಭಕ್ತರಿಗಷ್ಟೇ ಸೀಮಿತವಾಗಿದ್ದ ಈ ಸುಂದರ ಗುಡ್ಡವು, ಪ್ರಕೃತಿ ಸೌಂದರ್ಯ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಇಂದು ಕರ್ನಾಟಕದಾದ್ಯಂತ ಯುವ ಚಾರಣಿಗರನ್ನು ಆಕರ್ಷಿಸುತ್ತಿದೆ.
ರಾಣಿಬೆನ್ನೂರಿನ ನಂದಿ ಬೆಟ್ಟ: ದಟ್ಟವಾದ ಹಸಿರು, ಸದಾ ಬೀಸುವ ತಂಪಾದ ಗಾಳಿ ಮತ್ತು ಬೆಟ್ಟದ ತುತ್ತತುದಿಯಿಂದ ಕಾಣುವ ರಮಣೀಯ ದೃಶ್ಯಗಳಿಂದಾಗಿ ಇತ್ತೀಚೆಗೆ ಪ್ರವಾಸಿಗರು ಇದನ್ನು ರಾಣಿಬೆನ್ನೂರಿನ ನಂದಿ ಹಿಲ್ಸ್ ಎಂದು ಕರೆಯಲಾರಂಭಿಸಿದ್ದಾರೆ. ವಿಶೇಷವಾಗಿ ಮುಂಗಾರು (ಮಳೆಗಾಲ) ಮತ್ತು ಚಳಿಗಾಲದಲ್ಲಿ ಈ ಇಡೀ ಪ್ರದೇಶವು ಪಶ್ಚಿಮ ಘಟ್ಟಗಳ ಮಾದರಿಯಲ್ಲಿ ಹಸಿರು ಚಾದರವನ್ನು ಹೊದ್ದುಕೊಳ್ಳುತ್ತದೆ.ಸಾಹಸಪ್ರಿಯರ ನೆಚ್ಚಿನ ಚಾರಣ ತಾಣ: ನಗರದ ಜಂಜಾಟದಿಂದ ದೂರವಿರಲು ಬಯಸುವವರಿಗೆ ಇದೊಂದು ಅತ್ಯುತ್ತಮ ‘ವೀಕೆಂಡ್ ಗೇಟ್ವೇ’. ಬೆಟ್ಟದ ಮೇಲಿರುವ ಪುರಾತನ ಶಿವನ (ಮಲ್ಲಪ್ಪ/ಮಲ್ಲಿಕಾರ್ಜುನ) ದೇವಸ್ಥಾನವನ್ನು ತಲುಪಲು ಸಾಗುವ ಅಂಕುಡೊಂಕಿನ ದಾರಿ ಮತ್ತು ಆಫ್-ರೋಡ್ ಚಾಲನಾ ಅನುಭವ ಯುವಕರಿಗೆ ಹಾಗೂ ಚಾರಣಪ್ರೇಮಿಗಳಿಗೆ ರೋಮಾಂಚನ ನೀಡುತ್ತದೆ.
ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ನೋಟ:ಬೆಳಗ್ಗೆ 6ರಿಂದ 7 ಗಂಟೆಯ ಅವಧಿಯಲ್ಲಿ ಬೆಟ್ಟದ ಮೇಲಿಂದ ಕಾಣುವ ಸೂರ್ಯೋದಯ ಮತ್ತು ಸಂಜೆಯ ಸೂರ್ಯಾಸ್ತದ ನಯನಮನೋಹರ ದೃಶ್ಯಗಳು ಫೋಟೋಗ್ರಫಿ ಹಾಗೂ ವ್ಲಾಗಿಂಗ್ ಮಾಡಲು ಅತ್ಯಂತ ಸೂಕ್ತವಾಗಿವೆ.
ಶಾಸಕರ ಮುತುವರ್ಜಿ: ಸ್ಥಳೀಯ ಶಾಸಕ ಪ್ರಕಾಶ ಕೋಳಿವಾಡ ಅವರು ರಾಣಿಬೆನ್ನೂರು ತಾಲೂಕಿನಲ್ಲಿ ಎಲೆಮರೆಯ ಕಾಯಿಯಂತಿರುವ ಪ್ರವಾಸಿ ತಾಣಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದು, ಆ ಪೈಕಿ ಅರೆಮಲ್ಲಾಪುರ ಬೆಟ್ಟದ ಮಲ್ಲೇಶ್ವರ ಪ್ರಮುಖವಾಗಿದೆ. ಇದಕ್ಕಾಗಿ ಸಿದ್ದರಾಮಯ್ಯ ಅವಧಿಯಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಎಚ್.ಕೆ. ಪಾಟೀಲ ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರು. ಆನಂತರ ಅವರ ಇಲಾಖೆ ಮೂಲಕ ಪ್ರವಾಸಿಗರಿಗೆ ಅಲ್ಲಿಗೆ ಹೋಗಿ ಬರುವ ಸಲುವಾಗಿ ವಾಹನ (ಟಾಟಾ ಸುಮೋ) ವ್ಯವಸ್ಥೆ ಮಾಡಿದ್ದರು.
ತಲುಪುವ ಮಾರ್ಗ: ರಾಣಿಬೆನ್ನೂರು ನಗರದಿಂದ ಸುಮಾರು 12ರಿಂದ 15 ಕಿಮೀ ದೂರದಲ್ಲಿದೆ. ದ್ವಿಚಕ್ರ ವಾಹನಗಳು ಅಥವಾ ಕಾರುಗಳ ಮೂಲಕ ಸುಲಭವಾಗಿ ತಲುಪಬಹುದು.
ಬೆಟ್ಟದ ಮಲ್ಲೇಶ್ವರ ಗುಡ್ಡವು ಒಂದು ಉತ್ತಮ ಪ್ರವಾಸಿ ತಾಣವಾಗಿದ್ದು, ಮಲೆನಾಡಿನ ಸೌಂದರ್ಯವನ್ನು ನೆನಪಿಸುತ್ತದೆ. ಇದು ನಮ್ಮ ತಾಲೂಕಿನಲ್ಲಿರುವುದು ನಮ್ಮೆಲ್ಲರಿಗೂ ಹೆಮ್ಮೆ ಮತ್ತು ಅಭಿಮಾನದ ಸಂಗತಿಯಾಗಿದೆ. ಸಮೀಪದಲ್ಲಿಯೇ ಕೃಷ್ಣಮೃಗ ಅಭಯಾರಣ್ಯವಿದ್ದು, ಪ್ರವಾಸಿಗರು ಅಲ್ಲಿಗೂ ಭೇಟಿ ನೀಡಬಹುದಾಗಿದೆ ಎಂದು ರಾಣಿಬೆನ್ನೂರಿನ ಬೀರಪ್ಪ ಲಮಾಣಿ ಹೇಳಿದರು.