ಗುಂಡು ಹಾರಿಸಿ ಪತ್ನಿ ಹತ್ಯೆಗೈದು ಠಾಣೆಗೆ ಬಂದು ಶರಣಾದ

KannadaprabhaNewsNetwork |  
Published : Dec 24, 2025, 04:15 AM IST
ಇಳಕಲ | Kannada Prabha

ಸಾರಾಂಶ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯ ಮೇಲೆ ಗುಂಡು ಹಾರಿಸಿ ಕೊಲೆಗೈದು ಬಳಿಕ ಮಾಗಡಿ ರಸ್ತೆ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾನೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯ ಮೇಲೆ ಗುಂಡು ಹಾರಿಸಿ ಕೊಲೆಗೈದು ಬಳಿಕ ಮಾಗಡಿ ರಸ್ತೆ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾನೆ.

ಭುವನೇಶ್ವರಿ (39) ಮೃತ ದುದೈವಿ. ಬಾಲಮುರುಗನ್‌(40) ಬಂಧಿತ ಆರೋಪಿ. ಮಂಗಳವಾರ ಸಂಜೆ 7 ಗಂಟೆಗೆ ಈ ಘಟನೆ ನಡೆದಿದ್ದು, ಆರೋಪಿಯ ತನ್ನ ಪತ್ನಿಯ ಎರಡು ಕೈಗೆ, ತಲೆಗೆ ಐದು ಬಾರಿ ಗುಂಡು ಹಾರಿಸಿದ್ದಾನೆ. ನಂತರ ಆತನೇ ನಡೆದುಕೊಂಡು ಠಾಣೆಗೆ ಬಂದು ಪಿಸ್ತೂಲ್ ಮತ್ತು ಒಂದು ಗುಂಡು ಅನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭುವನೇಶ್ವರಿ ಅವರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಬಸವೇಶ್ವರನಗರ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆರೋಪಿಯು ವೈಟ್‌ಫೀಲ್ಡ್‌ನಲ್ಲಿರುವ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. 14 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಎರಡು ಮಕ್ಕಳಿದ್ದು, ರಾಜಾಜಿನಗರದಲ್ಲಿ ವಾಸವಾಗಿದ್ದರು. ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿ ಕಳೆದ ಒಂದೂವರೆ ವರ್ಷದಿಂದ ಬೇರ್ಪಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪತ್ನಿಯ ಅನುಮಾನ ಪಡುತ್ತಿದ್ದ ಪತಿ:

ಆರೋಪಿಯು ಪತ್ನಿಯ ಮೇಲೆ ಅನುಮಾನ ಪಡುತ್ತಿದ್ದ. ಇದರಿಂದ ನೊಂದ ಪತ್ನಿ ಕಾನೂನಾತ್ಮಕವಾಗಿ ವಿಚ್ಛೇದನ ನೀಡುವಂತೆ ಕೇಳಿದ್ದಳು. ಆದರೆ ಇದಕ್ಕೆ ಆರೋಪಿ ಒಪ್ಪಿರಲಿಲ್ಲ. ನಂತರ ಪತ್ನಿ ಕಳೆದ 6 ತಿಂಗಳ ಹಿಂದೆ ವೈಟ್‌ಫೀಲ್ಡ್ ವರ್ಗಾವಣೆ ಪಡೆದು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದರು. ಆರೋಪಿಗೆ ಪತ್ನಿ ಮಕ್ಕಳು ಎಲ್ಲಿದ್ದಾರೆ ಎಂಬ ಮಾಹಿತಿಯೇ ಇರಲಿಲ್ಲ. ಬಳಿಕ ಕಳೆದ 4 ತಿಂಗಳ ಹಿಂದೆ ಭುವನೇಶ್ವರಿ ಕೆ.ಪಿ ಅಗ್ರಹಾರದ ಚೋಳರಪಾಳ್ಯಕ್ಕೆ ಬಂದು ಮಕ್ಕಳೊಂದಿಗೆ ನೆಲೆಸಿದ್ದರು.

ಒಂದು ವಾರದ ಹಿಂದೆ ಆರೋಪಿಗೆ ವಿಚ್ಛೇದನದ ನೋಟಿಸ್ ಕಳುಹಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಆರೋಪಿಯು ತನ್ನ ಹೆಂಡತಿ ಕಚೇರಿಯಿಂದ ಮನೆಗೆ ಬರುವ ದಾರಿಯಲ್ಲಿ ಪಿಸ್ತೂಲ್‌ ಹಿಡಿದುಕೊಂಡು ಕಾಯುತ್ತಿದ್ದ. ಪತ್ನಿ ಚೋಳರಪಾಳ್ಯದ ಮನೆ ಸಮೀಪದ ರಸ್ತೆಗೆ ಬರುತ್ತಿದಂತೆ ಆಕೆಯ ಮೇಲೆ ಏಕಾಏಕಿ 5 ಗುಂಡುಗಳನ್ನು ಹಾರಿಸಿದ್ದಾನೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ದಾರಿ ಮಧ್ಯೆದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಲೆ ಮಾಡಿ ಠಾಣೆಗೆ ಬಂದು ಶರಣಾದ:

ಗುಂಡು ಹಾರಿಸಿ ಪತ್ನಿಯನ್ನು ಕೊಂದ ಬಳಿಕ ಆರೋಪಿಯು ನೇರವಾಗಿ ಮಾಗಡಿ ರಸ್ತೆ ಠಾಣೆಗೆ ಬಂದು ನಾನು ನನ್ನ ಮಡದಿಯನ್ನು ಗುಂಡು ಹಾರಿಸಿಕೊಂದಿದ್ದೇನೆ ಎಂದು ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಎಫ್‌ಎಸ್ಎಲ್‌ ತಜ್ಞರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಮಾಗಡಿ ರಸ್ತೆ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರೋಪಿಯು ಪಿಸ್ತೂಲ್ ಅನ್ನು ಅಕ್ರಮವಾಗಿ ತರಿಸಿಕೊಂಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ನಡೆದುಕೊಂಡು ಹೋಗುತ್ತಿದ್ದ ಪತ್ನಿಯ ಮೇಲೆ ಪತಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಪಿಸ್ತೂಲ್ ಬಗ್ಗೆ ತನಿಖೆ ಮುಂದುವರಿದಿದೆ. ಅದಕ್ಕೆ ಲೈಸೆನ್ಸ್ ಇತ್ತಾ, ಇಲ್ವಾ ಎಂಬುದರ ಬಗ್ಗೆ ಮತ್ತು ಖರೀದಿ ಮಾಡಿದ ಬಗ್ಗೆಯೂ ತನಿಖೆ ಆಗುತ್ತಿದೆ. ಎರಡು ಕೈಗೆ, ತಲೆಗೆ ಗುಂಡು ಹಾರಿಸಿದ್ದಾನೆ. ನಂತರ ಆತನೇ ನಡೆದುಕೊಂಡು ಪಿಸ್ತೂಲ್ ಅನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ.

-ಗಿರೀಶ್‌, ಪಶ್ಚಿಮ ವಿಭಾಗದ ಡಿಸಿಪಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ