ಗದಗ: 47 ವರ್ಷದ ವ್ಯಕ್ತಿಯೋರ್ವ ಮದುವೆಯಾಗುವಂತೆ ಪದೇ ಪದೇ ಪೀಡಿಸುವುದು, ಕಿರುಕುಳ ನೀಡುವುದು, ತಮ್ಮಿಬ್ಬರ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ಬೇಸತ್ತು 19 ವರ್ಷದ ಯುವತಿ ಇಲ್ಲಿಯ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ನಲ್ಲಿ ಫಿನಾಯಿಲ್ ಕುಡಿದು ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಅದೇ ತಾಂಡಾದ ಕಿರಣ (49) ಅವಳಿಗೆ ಕಿರುಕುಳ ನೀಡಿ, ಪೀಡಿಸುತ್ತಿದ್ದ ವ್ಯಕ್ತಿ. ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಹಿನ್ನೆಲೆ: ಆತ್ಮಹತ್ಯೆಗೀಡಾದ ಯುವತಿ ವಂದನಾ ಗದಗ ಜಿಮ್ಸ್ನಲ್ಲಿ ಪ್ಯಾರಾಮೆಡಿಕಲ್ ಓದುತ್ತಿದ್ದಾಳೆ. ವಂದನಾ ಕುಟುಂಬಸ್ಥರು ತಾಂಡಾದಲ್ಲಿ ಚಿಕ್ಕದೊಂದು ಬೀಡಿ ಶಾಪ್ ಹಾಕಿಕೊಂಡು ಜೀವನ ನಡೆಸುತ್ತಿದ್ಧಾರೆ. ಅದೇ ತಾಂಡಾದಲ್ಲಿ ಕಿರಣ ವಾಟರ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ಒಂದು ವರ್ಷದ ಹಿಂದೆ ವಂದನಾ ಜೊತೆಗೆ ಮದುವೆ ಮಾಡಿಕೊಡಿ ಎಂದು ಯುವತಿಯ ಕುಟುಂಬಸ್ಥರನ್ನು ಕಿರಣ ಕೇಳಿದ್ದ ಎನ್ನಲಾಗುತ್ತಿದೆ.ಆಗ ವಯಸ್ಸಿನ ಅಂತರ ಬಹಳ ಇದ್ದ ಕಾರಣ ಮತ್ತು ಕಿರಣ ಅಂಗವೈಕಲ್ಯ ಹೊಂದಿರುವುದರಿಂದ ಮದುವೆಗೆ ಮೃತಳ ಕುಟುಂಬಸ್ಥರು ವಿರೋಧ ಮಾಡಿದ್ದರು. ಆಗಿನಿಂದಲೂ ಈ ವ್ಯಕ್ತಿ ನಿರಂತರವಾಗಿ ಕಿರುಕುಳ ನೀಡಲು ಆರಂಭ ಮಾಡಿದ್ದು, ಈಗಲೂ ಪದೇ ಪದೇ ನಮ್ಮ ಮಗಳಿಗೆ ಕರೆ ಮಾಡಿ ಹೆದರಿಸುತ್ತಿದ್ದ ಅದಕ್ಕಾಗಿಯೇ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವುದು ಯುವತಿ ಮನೆಯವರ ಆರೋಪವಾಗಿದೆ.