ಕನ್ನಡಪ್ರಭ ವಾರ್ತೆ ಮೈಸೂರುಮನುಷ್ಯನ ಇತಿಹಾಸವನ್ನು ವಿಜ್ಞಾನದ ಮೂಲಕ ಪುನರ್ ನಿರ್ಮಿಸುವ ಕೆಲಸವನ್ನು ಪುರಾತತ್ವಶಾಸ್ತ್ರ ಮಾಡುತ್ತಿದೆ ಎಂದು ಮೈಸೂರು ವಿವಿ ಕುಲಸಚಿವೆ ಎಂ.ಕೆ. ಸವಿತಾ ಹೇಳಿದರು.ಮಾನಸ ಗಂಗೋತ್ರಿಯ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದಲ್ಲಿ ದಿ ಅಕಾಡೆಮಿ ಟ್ರಸ್ಟ್ ಹಾಗೂ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಶಾಸ್ತ್ರ ಸಹಯೋಗದಲ್ಲಿ ಪುರಾತತ್ವಶಾಸ್ತ್ರ: ಪ್ರಾಚೀನ ಪ್ರಾಣಿಗಳು ಮತ್ತು ಆಧುನಿಕ ವಿಜ್ಞಾನ ವಿಷಯ ಕುರಿತ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.ಪುರಾತತ್ವ ಶಾಸ್ತ್ರ ಪಳಿಯುಳಿಕೆಯಿಂದ ನಡೆಸುವ ಅಧ್ಯಯನವಾಗಿದ್ದು, ಮಣ್ಣಿನಲ್ಲಿ ಹುದುಗಿ ಹೋಗಿರುವ ವಸ್ತುಗಳಿಂದ ಮನುಷ್ಯನ ಇತಿಹಾಸವನ್ನು ವಿಜ್ಞಾನದ ಮೂಲಕ ಪುನರ್ ನಿರ್ಮಿಸಿ ಅಧ್ಯಯನ ನಡೆಸಲು ನೆರವಾಗಿದೆ. ಗತಕಾಲದ ಬದುಕು, ಸಂಸ್ಕೃತಿಯನ್ನು ಹೊರತೆಗೆದು, ಇದರ ಮೂಲಕ ಮನುಷ್ಯನ ವಿಕಾಸವನ್ನು ಪತ್ತೆ ಹಚ್ಚಿ, ಅದರ ನಿಜ ಸ್ವರೂಪವನ್ನು ತಿಳಿಸುವ ಕೆಲಸ ಮಾಡುತ್ತದೆ. ಆದ್ದರಿಂದ ಅದು ಬಹುಶಿಸ್ತೀಯ ಅಧ್ಯಯನವನ್ನು ಒಳಗೊಂಡಿದೆ ಎಂದರು.ಸಾವಿರಾರು ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟ ವಾಸ್ತುಶಿಲ್ಪಕ್ಕೆ ಹೆಸರಾದ ಬೇಲೂರು, ಹಳೆಬೀಡಿನ ದೇವಾಲಯಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಬಳಕೆಯಿಲ್ಲದ ಕಾಲದಲ್ಲಿ ಹೇಗೆ ನಿರ್ಮಿಸಿದ್ದಾರೆ ಎಂದು ಇಂದಿಗೂ ಅಚ್ಚರಿ ಆಗುತ್ತದೆ. ಆ ಕಾಲದ ಮಾನವ ಸಂಪನ್ಮೂಲದ ಉಗಮದ ಬಗ್ಗೆ ಇಂದಿಗೂ ಅರಿತುಕೊಳ್ಳಲು ಆಸಕ್ತಿ ಹೆಚ್ಚಿದೆ ಎಂದು ತಿಳಿಸಿದರು.ಪುರಾತತ್ವವು ಪರಂಪರೆಯಲ್ಲಿ ಬಹಳಷ್ಟು ಶ್ರೀಮಂತವಾಗಿದ್ದು, ಹಲ್ಲೂರು, ಮಸ್ಕಿ, ಬ್ರಹ್ಮಗಿರಿಗಳಲ್ಲಿ ಸಾಕಷ್ಟು ಪುರಾತನ ಜೀವಿಗಳ ಪಳಿಯುಳಿಕೆ ದೊರೆತಿವೆ. ಅಲ್ಲದೇ, ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಹೊಂದಾಕೆಯ ಬದುಕು ಕುರಿತಾದ ಮಾಹಿತಿ ದೊರೆತಿವೆ. ಪ್ರಾಣಿಬೇಟೆ, ಕೃಷಿ, ವ್ಯಾಪಾರ, ಆಡಳಿತ ವ್ಯವಸ್ಥೆ ತಿಳಿದಿವೆ ಎಂದು ಹೇಳಿದರು.ಗಾಂಧಿನಗರ ಐಐಟಿಯ ಡಾ.ಸಿ.ವಿ. ಶಾರದಾ, ಭೌತಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಎಸ್. ಮಲ್ಲೇಶ್, ದಿ ಅಕಾಡೆಮಿ ಟ್ರಸ್ಟ್ ನ ಸೀತಾರಾಮ್, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿ. ಶಕುಂತಲಾ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿ. ಶೋಭಾ ಇದ್ದರು.