ಕನ್ನಡಪ್ರಭ ವಾರ್ತೆ ಮೈಸೂರು
ಯಾರಿಗೆ ಪುಸ್ತಕದ ಮೇಲೆ ಪ್ರೀತಿ ಇದಿಯೋ ಅಂತಹವರು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.ಮೈಸೂರು ವಿಶ್ವವಿದ್ಯಾನಿಲಯವು ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಆಯೋಜಿಸಿರುವ ಮಾನಸ ಯುವ ಸಂವರ್ಧನೆ- 2025 ಎರಡು ದಿನಗಳ ಔದ್ಯೋಗಿಕ ಮತ್ತು ಯುವ ಸಬಲೀಕರಣ ಕಾರ್ಯಾಗಾರವನ್ನು ಅವರು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರು ಸಹ ಪುಸ್ತಕವನ್ನು ಪ್ರೀತಿಸಬೇಕು. ಪುಸ್ತಕವನ್ನು ಪ್ರೀತಿಸದೇ ಇರುವವರು ಪುಸ್ತಕವನ್ನು ಓದಲಿಕ್ಕೆ ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬರು ಮೊದಲು ಪುಸ್ತಕದ ಪ್ರೇಮಿ ಆಗಬೇಕು. ಹೆಚ್ಚು ಹೆಚ್ಚು ಪುಸ್ತಕವನ್ನು ಓದಬೇಕು. ಮೊಬೈಲ್ ಗಳನ್ನು ನೋಡುವ ಬದಲು ಪುಸ್ತಕವನ್ನು ಓದಿದರೆ ಅದು ನಿಮ್ಮನ್ನು ತಲೆಯೆತ್ತಿ ನಡೆಯುವಂತೆ ಮಾಡುತ್ತದೆ ಎಂದು ಅವರು ಹೇಳಿದರು.ಗುರಿಯನ್ನು ದಾಟಲು ಹಲವಾರು ಅಡೆತಡೆಗಳು ಬರಬಹುದು. ಬಂದರೂ ನಾವು ಕುಗ್ಗದೆ ನಾವು ಹಿಗ್ಗಬೇಕು, ಹೆಮ್ಮೆ ಪಡಬೇಕು. ನಾವು ಸಮಸ್ಯೆಗಳನ್ನು ಸ್ವಾಗತ ಮಾಡಬೇಕು. ಏಕೆಂದರೆ ಆಗಲೇ ನಮಗೆ ಎಷ್ಟು ಸಾಮರ್ಥ್ಯ ಶಕ್ತಿ ಇದೆ ಎಂದು ತಿಳಿಯುವುದು. ನೀವು ಯಾವುದೇ ರೀತಿ ಸಮಸ್ಯೆಗಳನ್ನು ತಲೆಗೆ ಹಾಕಿಕೊಳ್ಳದೆ ಇದ್ದರೆ, ಸಮಸ್ಯೆಗಳನ್ನು ಎದುರಿಸದೆ ಇದ್ದರೆ ನಿಮಗೆ ನಿಮ್ಮಲ್ಲಿ ಎಷ್ಟು ಸಾಮರ್ಥ್ಯ ಶಕ್ತಿ ಇದೆ ಎಂಬುದು ಗೊತ್ತಾಗುವುದಿಲ್ಲ. ಅದಕ್ಕಾಗಿ ಸಮಸ್ಯೆಗಳನ್ನು ಸ್ವಾಗತಿಸಿ, ನಿಮ್ಮಲ್ಲಿ ಎಷ್ಟು ಅಂತರ್ ಶಕ್ತಿ ಇದೆ ಅದನ್ನು ಹೇಗೆ ಎದುರಿಸಬೇಕು ತಿಳಿಯಬೇಕು ಎಂದರು.
ನಾವು ಯಾವುದೇ ಸಮಸ್ಯೆಗಳು, ಕಷ್ಟಗಳು ಬಂದರು ಕೂಡ ನಾವು ನಮ್ಮ ಯಶಸ್ವಿಯ ದಾರಿಯನ್ನು ಬಿಡಬಾರದು. ಎಷ್ಟೇ ಅಡೆತಡೆಗಳು ಬಂದರು ಕೂಡ ಮೊದಲು ನಾವು ನಮ್ಮ ಗುರಿಯ ಕಡೆ ಮಾತ್ರ ಗಮನ ಇರಿಸಿಕೊಳ್ಳಬೇಕು. ಆಗ ಮಾತ್ರ ಯಶಸ್ವಿಯ ದಾರಿಯಲ್ಲಿ ನಾವು ಹೋಗಲು ಸಾಧ್ಯ. ಗುರಿ ತಲುಪಲು ಅನಗತ್ಯ ಆಕಾಂಕ್ಷೆ, ಆಸೆಗಳನ್ನು ಬಿಡಬೇಕು. ಆಗ ಮಾತ್ರ ಗುರಿಯ ಕಡೆಗೆ ತಲುಪಲು ಸಾಧ್ಯ ಎಂದು ಅವರು ಹೇಳಿದರು.ಸಾಧನೆಯನ್ನು ಮಾಡಬೇಕು ಎಂದರೆ ಕಂಫರ್ಟ್ ಜೋನ್ ಇಂದ ಹೊರಗೆ ಮೊದಲು ಬರಬೇಕು. ಸಮಯವನ್ನು ಕಳೆಯದೆ ಹೆಚ್ಚಾಗಿ ಗುರಿಯ ಕಡೆಗೆ ಗಮನವನ್ನು ಇರಿಸಿಕೊಳ್ಳಬೇಕು. ಭಾವನೆಗಳಿಗೆ ಹೆಚ್ಚು ಆದ್ಯತೆಯನ್ನು ಕೊಡಬಾರದು. ನಿಮ್ಮಲ್ಲಿ ನಿಮಗೆ ನಂಬಿಕೆ ಇರಬೇಕು. ನಂಬಿಕೆ ಇದ್ದರೆ ಆಗ ಮಾತ್ರ ಸಾಧನೆ ಮಾಡಲಿಕ್ಕೆ ಸಾಧ್ಯವಾಗುತ್ತದೆ ಎಂದರು.
ನಮ್ಮ ವೈಯಕ್ತಿಕ ಜೀವನದ ಮೇಲೆ ಹೆಮ್ಮೆ ಇರಬೇಕು. ನಿಮ್ಮ ಮೌಲ್ಯಗಳ ಮೇಲೆ ಹೆಮ್ಮೆ ಇರಬೇಕು. ನಮ್ಮ ನಡೆ ನುಡಿಯ ಮೇಲೆ ಹೆಮ್ಮೆ ಇರಬೇಕು. ನಮ್ಮನ್ನು ನಾವು ಇಷ್ಟ ಪಡಬೇಕು. ಬೇರೆಯವರು ಇಷ್ಟಪಟ್ಟಿಲ್ಲ ಅಂತ ಯಾವುತ್ತೂ ಚಿಂತಿಸಬಾರದು. ಮೊದಲು ನಿಮ್ಮನ್ನು ನೀವು ಪ್ರೀತಿಸಬೇಕು. ಅಂತರ್ ಶಕ್ತಿಗೆ ಒಪ್ಪಿಗೆ ಹಾಕುವ ರೀತಿಯಲ್ಲಿ ದಿನ ಬದುಕಬೇಕು ಎಂದು ಅವರು ಹೇಳಿದರು.ವಿದ್ಯೆ ಬಹಳ ಮುಖ್ಯ
ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ಯಾವುದೇ ರೀತಿಯಲ್ಲಿ ಸಂಸ್ಕಾರವನ್ನು ಕಲಿಯಲು ವಿದ್ಯೆ ಎಂಬುದು ಪ್ರತಿಯೊಬ್ಬರಿಗೂ ಬಹಳ ಮುಖ್ಯ. ಹೀಗಾಗಿ, ಪುಸ್ತಕಗಳನ್ನು ಹೆಚ್ಚಾಗಿ ಓದಬೇಕು. ಬರಿ ಪಠ್ಯಪುಸ್ತಕಗಳನ್ನು ಮಾತ್ರಕ್ಕೆ ಸೀಮಿತವಾಗದೆ. ಹಲವಾರು ರೀತಿಯ ಪುಸ್ತಕಗಳನ್ನು ಓದಿ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಮೈಸೂರು ವಿವಿ ಕುಲಸಚಿವೆ ಎಂ.ಕೆ. ಸವಿತಾ, ಪರೀಕ್ಷಾಂಗ ಕುಲಸಚಿವ ಪ್ರೊ.ಎನ್. ನಾಗರಾಜ, ಹಣಕಾಸು ಅಧಿಕಾರಿ ಕೆ.ಎಸ್. ರೇಖಾ, ಮಾನಸ ಯುವ ಸಂವರ್ಧನೆ ಸಲಹಾ ಸಮಿತಿ ಅಧ್ಯಕ್ಷ ಪ್ರೊ.ಡಿ. ಆನಂದ್ ಇದ್ದರು.
-----ಕೋಟ್...
ನಾವೇಷ್ಟೇ ಸ್ಮಾರ್ಟ್ ಇದ್ದರೆ ಸಾಲದು. ನಮ್ಮ ಗುರಿ ಸಹ ಸ್ಮಾರ್ಟ್ ಆಗಿರಬೇಕು. ಗೊಂದಲವಿಲ್ಲದ ಸ್ಪಷ್ಟತೆ, ನಿಖರತೆ, ವಾಸ್ತವಿಕತೆಯ ಗುರಿ ಇರಿಸಿಕೊಳ್ಳಬೇಕು. ಅದಕ್ಕಾಗಿ ಕಠಿಣ ಪರಿಶ್ರಮ ಹಾಕಬೇಕು. ಗುರಿ ಸಾಧನೆಯಲ್ಲಿ ಭಾವನೆ ಖಾತೆ ಬಂದ್ ಮಾಡಿ, ನಿಮ್ಮ ಮೇಲಿನ ನಂಬಿಕೆ ಖಾತೆ ತೆರೆಯಬೇಕು. ಭಾವನೆಗಳಿಗೆ ಹೆಚ್ಚು ಆದ್ಯತೆಯನ್ನು ಕೊಡಬಾರದು. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಬೇಕು. ಆಗ ಮಾತ್ರ ಸಾಧನೆ ಮಾಡಲಿಕ್ಕೆ ಸಾಧ್ಯ.- ಡಾ. ಕುಮಾರ, ಜಿಲ್ಲಾಧಿಕಾರಿ, ಮಂಡ್ಯ
----ನಮ್ಮ ಸುತ್ತಮುತ್ತಲಿನ ಸ್ನೇಹಿತರು, ಜನರು ಕೂಡ ಅಷ್ಟೇ ಒಳ್ಳೆಯ ಸಂಗಗಳನ್ನು ಮಾಡಬೇಕು. ಒಳ್ಳೆಯ ದಾರಿ ಕಡೆ ಹೋಗುವುದಕ್ಕೆ ಒಂದೇ ದಾರಿ ಇರುತ್ತದೆ. ಆದರೆ, ಕೆಟ್ಟ ದಾರಿಯ ಕಡೆಗೆ ಹೋಗುವುದಕ್ಕೆ ಹಲವಾರು ದಾರಿಗಳು ಇರುತ್ತದೆ. ಗುರಿಯನ್ನು ತಲುಪಲು ಒಂದೇ ದಾರಿಯ ಕಡೆಗೆ ವಿದ್ಯಾರ್ಥಿಗಳು ಹೋಗಬೇಕು.
- ಪ್ರೊ.ಎನ್.ಕೆ. ಲೋಕನಾಥ್, ಕುಲಪತಿ, ಮೈಸೂರು ವಿವಿ